ಗೆಲ್ಲುವ ಸಾಮರ್ಥ್ಯ ಇಲ್ಲದ್ದರಿಂದ ಮುಸ್ಲಿಮರಿಗೆ ಬಿಜೆಪಿ ಟಿಕೇಟು ನೀಡಿಲ್ಲ : ಶಾನವಾಝ್ ಸಮರ್ಥನೆ
ಅಲಹಾಬಾದ್,ಜ.30: ಉತ್ತರಪ್ರದೇಶ ಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡದಿರುವ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನವಾಝ್ ಹುಸೇನ್ ಸ್ಪಷ್ಟೀಕರಣ ನೀಡಿದ್ದು, "ಪಕ್ಷ ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತದೆ. ಟಿಕೆಟ್ ಕೊಡಲಿ, ಕೊಡದಿರಲಿ. ಇದರಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಹಾಗೆಲ್ಲಾದರೂ ನಮಗೆ ಗೆಲ್ಲುವಂತಹ ಇಪ್ಪತ್ತು ಮುಸ್ಲಿಮ್ ಕಾರ್ಯಕರ್ತರು ಸಿಕ್ಕಿದ್ದರೆ, ನಾವು ಟಿಕೆಟ್ಕೊಡುವ ಕುರಿತು ಯೋಚಿಸುತ್ತಿದ್ದೆವು" ಎಂದು ಅಲಹಾಬಾದ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.
ಲಕ್ನೊದಲ್ಲಿ ರಾಹುಲ್ ಮತ್ತು ಅಖಿಲೇಶ್ ಭಾಗವಹಿಸಿದ್ದ ರೋಡ್ ಶೋವನ್ನು ಶಾನವಾಝ್ ಹುಸೇನ್ ಟೀಕಿಸಿದ್ದು "ರಾಹುಲ್ ಮತ್ತು ಅಖಿಲೇಶ್ ಗೆಳೆತನ ಯಮುನಾ ಗಂಗಾ ಸಂಗಮವಲ್ಲ ಬದಲಾಗಿ ಉಭಯ ಪಕ್ಷಗಳ ಅಪರಾಧ ಮತ್ತು ಭ್ರಷ್ಟಾಚಾರಗಳ ಸಂಗಮವಾಗಿದೆ ಎಂದು ಹೇಳಿದ್ದಾರೆ. ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 403 ಸೀಟುಗಳಲ್ಲಿ ಬಿಜೆಪಿ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ. ಇದನ್ನು ಮುಂದಿಟ್ಟು ಅಲ್ಲಿ ವಿರೋಧಪಕ್ಷಗಳು ಬಿಜೆಪಿಯ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಘೋಷಣೆಯನ್ನು ಟೀಕಿಸುತ್ತಿವೆ ಎಂದು ವರದಿ ತಿಳಿಸಿದೆ.