ಹಣಕ್ಕಾಗಿ ವ್ಯಕ್ತಿಯ ಕೊಲೆ : ಆರೋಪಿಯ ಬಂಧನ
.jpg)
ಆರೋಪಿ ಅಬ್ದುಲ್ ಸಲಾಂ
ಕಾಸರಗೋಡು , ಜ.31 : ಹಳೆ ಚಿನ್ನಾಭರಣ ವಹಿವಾಟು ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ಕೊಲೆಗೈದು ಪಾಳು ಬಾವಿಗೆಸೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕನ್ಯಾನ ನಿವಾಸಿಯಾಗಿರುವ ಓರ್ವ ಆರೋಪಿಯನ್ನು ಕಾಸರಗೋಡು ಪೋಲೀಸರ ವಿಶೇಷ ತನಿಖಾ ತಂಡ ಬಂಧಿಸಿದೆ.
ಕನ್ಯಾನ ಕರೋಪಾಡಿ ಮಿತ್ತನಡ್ಕದ ಅಬ್ದುಲ್ ಸಲಾಂ ( 30) ಎಂದು ಗುರುತಿಸಲಾಗಿದೆ.
ಇನ್ನೋರ್ವ ಆರೋಪಿ ಅಶ್ರಫ್ ತಲೆಮರೆಸಿಕೊಂಡಿದ್ದಾನೆ.
ಜ.25 ರಂದು ಸಂಜೆ ಈ ಕೊಲೆ ನಡೆದಿತ್ತು. ಇಬ್ಬರು ಸೇರಿ ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಅಶ್ರಫ್ ಮೂಲತಃ ತಮಿಳುನಾಡಿನವನಾಗಿರುವುದರಿಂದ ತನಿಖೆಯನ್ನು ತಮಿಳುನಾಡಿಗೆ ವಿಸ್ತರಿಸಲಾಗಿದೆ.
ಕಾಸರಗೋಡು ವಿದ್ಯಾನಗರ ಚೆಟ್ಟು೦ಗುಳಿಯ ಮನ್ಸೂರ್ ಅಲಿ ( 42) ಎಂಬವರನ್ನು ಅಪಹರಿಸಿದ್ದ ತಂಡವು ಉಪ್ಪಳ ಸಮೀಪದ ಬಾಯಾರು ಸುಣ್ಣಾಡ ಎಂಬಲ್ಲಿನ ನಿರ್ಜನ ಸ್ಥಳದ ಪಾಳು ಬಾವಿಗೆ ಎಸೆದು ಪರಾರಿಯಾಗಿದ್ದರು. ಸ್ಥಳೀಯರು ಬಾವಿ ಬಳಿ ರಕ್ತದ ಕಲೆ ಹಾಗೂ ವಾಹನದ ಗಾಜು ಹುಡಿಯಾಗಿ ಬಿದ್ದಿರುವುದನ್ನು ಗಮನಿಸಿ ಬಾವಿಯನ್ನು ಗಮನಿಸಿದಾಗ ಕೊಲೆ ಬೆಳಕಿಗೆ ಬಂದಿತ್ತು.
ಸ್ಥಳಕ್ಕೆ ಆಗಮಿಸಿದ ಮಂಜೇಶ್ವರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬಂದಿಗಳು ಮೃತದೇಹವನ್ನು ಮೇಲಕ್ಕೆತ್ತಿ ಮಹಜರು ನಡೆಸಿದಾಗ ಕಿಸೆಯಿಂದ 1.10 ಲಕ್ಷ ರೂ. ಹಣ ಕೂಡಾ ಪತ್ತೆಯಾಗಿತ್ತು. ಸ್ಥಳೀಯ ಮನೆಯೊಂದರ ಸಿಸಿ ಟಿವಿ ದೃಶ್ಯ ಹಾಗೂ ಮೊಬೈಲ್ ಗೆ ಬಂದ ಕರೆಗಳ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಆರೋಪಿಗಳ ಸುಳಿವು ಪಡೆದು ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೃತ್ಯದ ಬಳಿಕ ಆರೋಪಿಯು ಉಳ್ಳಾಲಕ್ಕೆ ಪರಾರಿಯಾಗಿ ಮರುದಿನ ಮಂಗಳೂರು ಹಾಗೂ ಇನ್ನಿತರ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದನು. ಪೊಲೀಸರ ಚಲನವಲನಗಳ ಬಗ್ಗೆ ನಿಗಾ ಇಟ್ಟಿದ್ದ ಈತ ಇತ್ತೀಚೆಗೆ ಮನೆಗೆ ತಲಪಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಣ ದೋಚುವ ಉದ್ದೇಶದಿಂದ ಈ ಕೃತ್ಯ ನಡೆಸಿರುವುದಾಗಿ ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೇರೆ ಯಾವುದೇ ಕಾರಣ ಇರಬಹುದೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದೂವರೆ ವರ್ಷದಿಂದ ಪರಿಚಯ
ಕೊಲೆಗೀಡಾದ ಮನ್ಸೂರು ಅಲಿ ಮತ್ತು ಕೊಲೆ ಆರೋಪಿಯಾಗಿರುವ ಅಬ್ದುಲ್ ಸಲಾಂ ಕೇವಲ ಒಂದೂವರೆ ವರ್ಷದ ಹಿಂದೆ ಪರಿಚಯಗೊಂಡಿದ್ದರು. ಉಪ್ಪಳದ ಹಣಕಾಸು ಸಂಸ್ಥೆಯೊಂದರಲ್ಲಿ ಚಿನ್ನಾಭರಣ ಅಡವಿಡಲು ಬಂದ ಸಂದರ್ಭದಲ್ಲಿ ಪರಿಚಯವಾಗಿತ್ತು. ಬಳಿಕ ಇವರಿಬ್ಬರ ನಡುವೆ ಉತ್ತಮ ಬಾ೦ಧವ್ಯ ಉಂಟಾಗಿ ನಾಲ್ಕು ಚಿನ್ನಾಭರಣ ವಹಿವಾಟು ನಡೆಸಿದ್ದರು.
ಈ ನಡುವೆ ಅಬ್ದುಲ್ ಸಲಾಂ ತನ್ನ ಸ್ನೇಹಿತ ಆಟೋ ಚಾಲಕನಾಗಿರುವ ಅಶ್ರಫ್ ಎಂಬಾತನಿಗೆ ಮಾಹಿತಿ ನೀಡಿದ್ದಾನೆ.ಕೊನೆಗೆ ಹಣ ದೋಚುವ ಉದ್ದೇಶದಿಂದ ಇಬ್ಬರು ಸೇರಿ ಸಂಚು ರೂಪಿಸಿದ್ದಾರೆ. ಒಂದೂವರೆ ತಿಂಗಳಿನಿಂದ ಇವರು ಮನ್ಸೂರ್ ಗಾಗಿ ಹೊಂಚು ಹಾಕುತ್ತಿದ್ದರು.
ತಮ್ಮ ಸಂಚಿನಂತೆ ಜನವರಿ 25ರಂದು ಮುಹಮ್ಮದ್ ಮನ್ಸೂರ್ ಗೆ ಕರೆ ಮಾಡಿದ ಅಬ್ದುಲ್ ಸಲಾಂ ತನ್ನ ಬಳಿ 25 ಪವನ್ ಚಿನ್ನಾಭರಣ ಮಾರಾಟಕ್ಕಿದ್ದು , ಬಾಯಾರಿಗೆ ತಲಪುವಂತೆ ತಿಳಿಸಿದ್ದರು. ಇದರಂತೆ 25 ರಂದು ಕಾಸರಗೋಡಿನ ಕರಂದಕ್ಕಾಡ್ ತನಕ ಸ್ಕೂಟರ್ ನಲ್ಲಿ ಬಂದ ಮನ್ಸೂರು ಅಲ್ಲಿಂದ ಬಸ್ಸು ಮೂಲಕ ಉಪ್ಪಳ ಕೈಂಬಕ್ಕೆ ಬಂದು ಇನ್ನೊಂದು ಬಸ್ಸಿನಲ್ಲಿ ಬಾಯಾರಿಗೆ ತಲುಪಿದ್ದರು.
ಅಲ್ಲಿಂದ ಅಶ್ರಫ್ ಓಮ್ನಿ ವ್ಯಾನ್ ನಲ್ಲಿ ಬಾಯಾರು ಮುಳಿಗದ್ದೆ ಸಮೀಪದ ಚಕ್ಕರಗುಳಿ ಎಂಬಲ್ಲಿನ ನಿರ್ಜನ ಸ್ಥಳಕ್ಕೆ ಕರೆದೊಯ್ದು ಮುಹಮ್ಮದ್ ಮನ್ಸೂರ್ ರ ಮುಖಕ್ಕೆ ಮೆಣಸಿನ ಹುಡಿ ಎರಚಿದ್ದು, ಕಬ್ಬಿಣದ ರಾಡ್ ತುಂಡಿನಿಂದ ತಲೆಗೆ ಬಡಿದಿದ್ದಾರೆ. ಓಡಲೆತ್ನಿಸಿದರೂ ಬೆನ್ನಟ್ಟಿ ತಲೆಗೆ ಒಡೆದು ಕುಸಿದುಬಿದ್ದ ಮನ್ಸೂರ್ ನನ್ನು 100 ಮೀಟರ್ ದೂರದ ನಿರ್ಜನ ಪ್ರದೇಶದಲ್ಲಿರುವ ಪಾಳು ಬಾವಿಗೆ ಎಸೆದು ಅಲ್ಲಿಂದ ಪರಾರಿಯಾಗಿದ್ದರು. ಬಳಿಕ ಇಬ್ಬರು ವ್ಯಾನ್ ನಲ್ಲಿ ಪರಾರಿಯಾಗಿದ್ದರು .
ಕೊಲೆ ನಡೆಸುವ ಮೊದಲು ವ್ಯಾನ್ ನಲ್ಲಿಯೇ ಮನ್ಸೂರ್ ಅಲಿ ಬಳಿ ಇದ್ದ ಐದೂವರೆ ಲಕ್ಷ ರೂ. ಒಳಗೊಂಡ ಬ್ಯಾಗನ್ನು ಇಬ್ಬರೂ ವಶಕ್ಕೆ ತೆಗೆದುಕೊಂಡಿದ್ದರು. ಈ ಪೈಕಿ ಒಂದೂವರೆ ಲಕ್ಷ ರೂ. ಸಲಾಂ ಗೆ ನೀಡಿದ ಬಳಿಕ ಉಳಿದ ಮೊತ್ತ ಸಹಿತ ಅಶ್ರಫ್ ಅಲ್ಲಿಂದ ತೆರಳಿದ್ದನು.







