ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಸ್ಲಿಮ್ ಮಹಿಳಾ ಒಕ್ಕೂಟ ಧರಣಿ

ದಾವಣಗೆರೆ, ಜ.31: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಸ್ಲಿಮ್ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೆೇರಿ ಮುಂಭಾಗದಲ್ಲಿ ಮಂಗಳವಾರ ಧರಣಿ ನಡೆಸಿದರು.
ಈ ಸಂದಭರ್ ಜಿಲ್ಲಾ ಸಂಚಾಲಕಿ ಜಬೀನಾ ಖಾನಂ ಮಾತನಾಡಿ, ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರಾದ ಮುಸ್ಲಿಮ್ ಸಮುದಾಯವು ಲಕ್ಷಾಂತರ ಜನಸಂಖ್ಯೆ ಹೊಂದಿದೆ. ಅದರಲ್ಲೂ ಈ ಸಮುದಾಯದ ಬಹುತೇಕ ಜನರು ಅಸಂಘಟಿತ ವಲಯಗಳಾದ ಕಟ್ಟಡ ನಿರ್ಮಾಣ, ಬೀಡಿ ಕೆಲಸ, ಹಮಾಲಿ, ಮಂಡಕ್ಕಿ ಭಟ್ಟಿ ಕೆಲಸ, ಆಟೊ ಡ್ರೈವರ್, ಗ್ಯಾರೇಜ್ ಮತ್ತಿತರ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಮ್ ಸಮಾಜದವರು ಪ.ಜಾತಿ ಹಾಗೂ ಪ.ವರ್ಗದವರಿಗಿಂತಲೂ ಹಿಂದುಳಿದಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಪ್ರಧಾನಮಂತ್ರಿಯವರ ಹೊಸ 15 ಅಂಶಗಳ ಕಾರ್ಯಕ್ರಮದಡಿ ಜಿಲ್ಲಾಮಟ್ಟದ ಸಭೆಯನ್ನು 3 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಡ್ಡಾಯವಾಗಿ ನಡೆಸಬೇಕು. ರಾಜ್ಯ ಮತ್ತು ಕೇಂದ್ರ ಸರಕಾರಗಳ ಅಭಿವೃದ್ಧಿ ಯೋಜನೆಗಳಲ್ಲಿ ಭೌತಿಕವಾಗಿ ಮತ್ತು ಆರ್ಥಿಕವಾಗಿ ಶೇ.15ರಷ್ಟು ಅನುದಾನವನ್ನು ಕಡ್ಡಾಯವಾಗಿ ಖರ್ಚು ಮಾಡಬೇಕು. ಆ ಕುರಿತು ಎಲ್ಲ ಇಲಾಖೆಗಳು ಸರಕಾರಕ್ಕೆ ಮತ್ತು ಜಿಲ್ಲಾ ಸಮಿತಿಗೆ ವರದಿ ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
2017-18ರ ಸಾಲಿನ ಶೇ.15ರಷ್ಟು ಅನುದಾನವನ್ನು ಈ ಸಮುದಾಯಕ್ಕೆ ಖರ್ಚು ಮಾಡುವ ಕ್ರಿಯಾ ಯೋಜನೆಯನ್ನು ತಯಾರಿಸುವಂತೆ ಎಲ್ಲ ಇಲಾಖೆಗಳಿಗೆ ಜಿಲ್ಲಾಧಿಕಾರಿ ಆದೇಶ ಮಾಡಬೇಕು. ಮುಸ್ಲಿಮ್ ಮಹಿಳಾ ಒಕ್ಕೂಟದ ಪ್ರತಿನಿಧಿಗಳಿಗೆ ಜಿಲ್ಲಾ ಸಮಿತಿ ಸಭೆಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು. ಸರಕಾರಿ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಇನ್ನಿತರ ಎಲ್ಲ ಇಲಾಖೆಗಳ ಮುಖ್ಯ ಅಧಿಕಾರಿಗಳ ಸಭೆೆಯನ್ನು ಕರೆದು, ವಸ್ತು ರೂಪದ ಪ್ರಯೋಜನಗಳು ಮತ್ತು ಹಣಕಾಸು ವಿತರಣೆಗಳಲ್ಲಿ 15ರಷ್ಟನ್ನು ತೆಗೆದಿರಿಸುವಂತೆ ಹಾಗೂ ಈ ಸಮುದಾಯ ಅಭಿವೃದ್ಧಿಗೆ ಬಳಸುವಂತೆ ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಶಿರಿನ್ ಬಾನು, ಸದಸ್ಯರಾದ ಸಬ್ರೀನ್ ತಾಜ್, ಹಸೀನಾಬಾನು, ನಗೀನಾಬಾನು, ಗುಲ್ಝಾರ್ ಬಾನು, ನಾಹೇರ್ ಬಾನು, ನಾಝೀಮಾಬಾನು, ಯಾಸ್ಮಿನ್ ಬಾನು, ನೂರ್ ಫಾತಿಮಾ, ಗುಲ್ಝಾರ್, ರಮೀಝಾಬಿ, ದಿಲ್ಶಾದ್.ಬಿ, ಎಂ. ಕರಿಬಸಪ್ಪ ಮತ್ತಿತರರು ಪಾಲ್ಗೊಂಡಿದ್ದರು





