ದಡಾರ-ರುಬೆಲ್ಲಾ ತಡೆ ಅಭಿಯಾನ ವಿರುದ್ಧ ಗೊಂದಲ ಸೃಷ್ಟಿ-ಯಾವುದೇ ತೊಂದರೆ ಇಲ್ಲ: ಜಿಲ್ಲಾ ಆರ್ಸಿಎಚ್ ಅಧಿಕಾರಿ ಸ್ಪಷ್ಟನೆ

ಮಂಗಳೂರು, ಫೆ.1: ದಡಾರ-ರುಬೆಲ್ಲಾ ತಡೆ ಅಭಿಯಾನದ ಯಶಸ್ವಿಗೆ ಟಾಸ್ಕ್ ಪೋರ್ಸ್ ಸಮಿತಿಯು ಜಿಲ್ಲಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಮಧ್ಯೆಯೇ ಸಾಮಾಜಿಕ ಜಾಲತಾಣದಲ್ಲಿ ಇದರ ವಿರುದ್ಧ ಗೊಂದಲಮಯ ಸಂದೇಶ ಹರಿಯ ಬಿಡಲಾಗುತ್ತಿದ್ದು, ಇದು ಒಂದು ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
‘ಶಾಲೆಗಳಲ್ಲಿ ಒಂದು ಫಾರ್ಮ್ ಕೊಟ್ಟು ಸಹಿ ಪಡೆದು ನಿಮ್ಮ ಮಕ್ಕಳಿಗೆ ಇಂಜೆಕ್ಷನ್ ಕೊಡುವ ಸಿದ್ಧತೆ ನಡೆಯುತ್ತಿದೆ. ಹಿಂದೂ ಮತ್ತು ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಇದನ್ನು ಕೊಡಲಾಗುತ್ತದೆ. ಈ ಇಂಜೆಕ್ಷನ್ನ್ನು ಹೆತ್ತವರಿಗೂ ತೋರಿಸದೆ ಕೊಡಲಾಗುತ್ತದೆ. ಮುಸ್ಲಿಮರ ಜನಸಂಖ್ಯೆ ತಡೆಯಲು ಮೋದಿ ಮತ್ತು ಆರೆಸ್ಸೆಸ್ಸ್ ಕೈಗೊಂಡ ಯೋಜನೆ ಇದಾಗಿದೆ. ಹಾಗಾಗಿ ಇದರ ವಿರುದ್ಧ ಜಾಗರೂಕರಾಗಿ’ ಎಂದು ಬ್ಯಾರಿ ಭಾಷೆಯಲ್ಲಿ ವಾಟ್ಸ್ಆ್ಯಪ್ನಲ್ಲಿ ಧ್ವನಿ ಸಂದೇಶ ಹರಿಯ ಬಿಡಲಾಗಿದೆ.
ಈ ಮಧ್ಯೆ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ಅವಿಭಜಿತ ದ.ಕ. ಜಿಲ್ಲೆಯ ಮುಸ್ಲಿಮರು ತಮ್ಮ ಮನೆ, ಕುಟುಂಬಸ್ಥರಿಗೆ ಕರೆ ಮಾಡಿ ಈ ಸಂದೇಶದ ಸತ್ಯಾಸತ್ಯತೆ ಬಗ್ಗೆ ಅರಿತುಕೊಳ್ಳಲು ಸೂಚನೆ ನೀಡುತ್ತಿದ್ದಾರಲ್ಲದೆ, ಏಕಾಏಕಿ ಮಕ್ಕಳಿಗೆ ಚುಚ್ಚುಮದ್ದು ಕೊಡದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಹಾಗಾಗಿ ಬಹುತೇಕ ಮಕ್ಕಳ ಹೆತ್ತವರು ಅದರಲ್ಲೂ ತಾಯಂದಿರು ಈ ಚುಚ್ಚುಮದ್ದು ಹಾಕಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲಾಡಳಿತದ ಸೂಚನೆಯ ಹೊರತಾಗಿಯೂ ಖಾಸಗಿ ಶಾಲೆಗಳ ಆಡಳಿತವು ಮಕ್ಕಳಿಗೆ ಸಂಬಂಧಿಸಿದ ಯಾವುದೇ ವಿಚಾರದ ಬಗ್ಗೆ ಹೆತ್ತವರ ಒಪ್ಪಿಗೆ ಪಡೆಯುವುದು ಸಹಜವಾಗಿದೆ. ದಡಾರ-ರುಬೆಲ್ಲಾ ತಡೆ ಅಭಿಯಾನದ ಸೂಚನೆ ಶಾಲೆಗಳಿಗೆ ತಲುಪಿದ ತಕ್ಷಣ ಆಡಳಿತ ಮಂಡಳಿಯು ಈ ಬಗ್ಗೆ ಶಾಲೆಗಳಲ್ಲಿ ಹಮ್ಮಿಕೊಳ್ಳಲಾದ ಮಾಹಿತಿ ಶಿಬಿರಕ್ಕೆ ಹಾಜರಾಗಬೇಕು ಮತ್ತು ಚುಚ್ಚುಮದ್ದು ಕೊಡಲು ಒಪ್ಪಿಗೆ ನೀಡುವಂತೆ ಪ್ರತಿಯೊಂದು ಮಕ್ಕಳ ಹೆತ್ತವರಿಗೆ ಪತ್ರ ಬರೆದಿದೆ. ಕೆಲವರು ಇದಕ್ಕೆ ಒಪ್ಪಿಗೆ ನೀಡಿದರೆ, ಇನ್ನು ಕೆಲವರು ಈ ಸಂದೇಶ ಹರಡಿದ ಬಳಿಕ ಒಪ್ಪಿಗೆ ನೀಡಲು ನಿರಾಕರಿಸುತ್ತಿದ್ದಾರೆ. ಒಟ್ಟಿನಲ್ಲಿ ಮಕ್ಕಳ ಹಿತದೃಷ್ಟಿಯಿಂದ ಹಮ್ಮಿಕೊಳ್ಳಲಾದ ಈ ಅಭಿಯಾನದ ವಿರುದ್ಧ ಗೊಂದಲ, ವದಂತಿ ಸೃಷ್ಟಿಸಿರುವುದು ಜಿಲ್ಲಾ ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಆರೋಗ್ಯ ಅಧಿಕಾರಿಯ ಹೇಳಿಕೆ: ದಡಾರ ಮತ್ತು ರುಬೆಲ್ಲಾ ವಿಶ್ವದಲ್ಲಿ ಅದರಲ್ಲೂ ಭಾರತದಲ್ಲಿ ತೀವ್ರಗತಿಯಲ್ಲಿ ಹರಡುತ್ತಿರುವ ಮಾರಣಾಂತಿಕ ಕಾಯಿಲೆಗಳಾಗಿವೆ. ಮಕ್ಕಳಲ್ಲಿ ಜ್ವರ, ತುರಿಕೆ, ನೆಗಡಿ,ಕಣ್ಣು ಕೆಂಪಾಗುವುದು ದಡಾರದ ಪ್ರಮುಖ ಲಕ್ಷಣವಾಗಿದೆ. ಹೆಚ್ಚಾಗಿ ಎರಡು ವರ್ಷದೊಳಗಿನ ಮಕ್ಕಳಲ್ಲಿ ಮತ್ತು ದೊಡ್ಡವರಲ್ಲೂ ವೈರಾಣು ಪತ್ತೆಯಾಗುತ್ತಿದೆ.
ರುಬೆಲ್ಲಾ ಕಾಯಿಲೆಯು ದಡಾರವನ್ನು ಹೋಲುತ್ತದೆ. ಇದು ಬೇಗ ಹರಡುವುದಿಲ್ಲ. ಆದರೆ ನಿರ್ಲಕ್ಷಿಸಿದರೆ ಅಪಾಯವಿದೆ. ಮೆದುಳು ಜ್ವರ, ಕಿವುಡು, ಕುರುಡುತನ, ಬುದ್ದಿಮಾಂದ್ಯ, ರಕ್ತದ ಸಮಸ್ಯೆಯೂ ಇದರಿಂದ ಬರುತ್ತದೆ. ವೈರಾಣು ತಗಲಿದ ಮನೆಯಲ್ಲಿ ಗರ್ಭಿಣಿ ಮಹಿಳೆಯೂ ಇದ್ದರೆ ಶೇ.90ರಷ್ಟು ರೋಗ ಹರಡುವ ಸಾಧ್ಯತೆಯೇ ಹೆಚ್ಚು. ಮಗುವಿಗೆ ಆಸ್ಪತ್ರೆಯಲ್ಲಿ ಎಂಎಂಆರ್ ಅಥವಾ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಈ ಹಿಂದೆ ಲಸಿಕೆ ನೀಡಿದ್ದರೂ ಕೂಡ ಇದೀಗ ಮತ್ತೆ ಹೆಚ್ಚುವರಿಯಾಗಿ ಈ ಲಸಿಕೆಯನ್ನು ನೀಡಲೇಬೇಕಾಗುತ್ತದೆ. ಜಿಲ್ಲೆಯಲ್ಲಿ ಶೇ.100 ಲಸಿಕೆ ಗುರಿ ಇಟ್ಟುಕೊಂಡು ವ್ಯಾಪಕ ಪ್ರಚಾರ ಮಾಡಲಾಗುತ್ತದೆ. ನಗರದ ಪ್ಲೇ ಹೋಮ್ಸ್, ಕಿಂಡರ್ ಗಾರ್ಡನ್, ಫ್ಲ್ಯಾಟ್ ಗಳಿಗೆ ತೆರಳಿ ಮಾಹಿತಿ ನೀಡಲಾಗುತ್ತದೆ. ಕಾರ್ಮಿಕರ ಮಕ್ಕಳನ್ನು ತಲುಪಲು ಬಿಲ್ಡರ್ಸ್, ಗುತ್ತಿಗೆದಾರರ ಸಭೆ ನಡೆಸಲಾಗುತ್ತಿದೆ.
9 ತಿಂಗಳ ಮಗುವಿನಿಂದ ಹಿಡಿದು 15 ವರ್ಷದೊಳಗಿನ ಸುಮಾರು 5 ಲಕ್ಷ ಮಕ್ಕಳಿಗೆ ಫೆ.7ರಿಂದ ಫೆ.28ರೊಳಗೆ ಈ ಚುಚ್ಚುಮದ್ದನ್ನು ಒಂದು ಬಾರಿ ನೀಡಲಾಗುತ್ತದೆ. ಇದಕ್ಕೆ ಯಾವುದೇ ಶುಲ್ಕವಿಲ್ಲ. ಉಚಿತವಾಗಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಯ ಸುಮಾರು 2,500ಕ್ಕೂ ಅಧಿಕ ಶಾಲೆಗಳಲ್ಲಿ ಈ ಬಗ್ಗೆ ಅಭಿಯಾನ ನಡೆಸಲಾಗುತ್ತದೆ. ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮೊದಲು ಆದ್ಯತೆ ನೀಡಲಾಗುತ್ತದೆ. ಆ ಬಳಿಕ ಮನೆ ಮನೆಗೆ ತೆರಳಿ ನೀಡಲಾಗುತ್ತದೆ. ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಂದು ಶಾಲೆಯ ಮುಖ್ಯ ಶಿಕ್ಷಕರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯುಕ್ತಿ ಮಾಡಲಾಗಿದೆ. ಅಲ್ಲದೆ ನುರಿತ 500 ಸಿಬ್ಬಂದಿ ವರ್ಗಕ್ಕೆ ಸೂಕ್ತ ತರಬೇತಿ ನೀಡಲಾಗಿದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ದೇಶದಲ್ಲಿ ಮೊದಲ ಅವಧಿಗೆ ಕರ್ನಾಟಕ, ತಮಿಳುನಾಡು, ಗೋವಾ, ಲಕ್ಷದ್ವೀಪ, ಪುದುಚೇರಿ ರಾಜ್ಯಗಳನ್ನು ಆಯ್ಕೆ ಮಾಡಲಾಗಿದೆ. ಆ ಬಳಿಕ ಎಲ್ಲೆಡೆ ಇದನ್ನು ವಿಸ್ತರಿಸಲಾಗುತ್ತದೆ.
ಮುಸ್ಲಿಮ್ ವಲಯದಲ್ಲಿ ಈ ಬಗ್ಗೆ ವ್ಯಾಪಕ ಅಪಪ್ರಚಾರ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿ ಪ್ರಮುಖ ಮಸೀದಿಗಳ ಧರ್ಮಗುರುಗಳು, ಮುಖ್ಯಸ್ಥರು, ಸಂಘಟನೆಗಳ ಪದಾಧಿಕಾರಿಗಳನ್ನು ಸಂಪರ್ಕಿಸಿ ವಸ್ತುಸ್ಥಿತಿ ಮನವರಿಕೆ ಮಾಡಲಾಗಿದೆ. ಮತ್ತು ಅವರ ಮೂಲಕ ತಪ್ಪು ಸಂದೇಶ ನಿವಾರಿಸಲು ಮನವಿ ಮಾಡಿಕೊಳ್ಳಲಾಗಿದೆ. ಈ ಚುಚ್ಚುಮದ್ದು ಕೊಡುವುದರಿಂದ ಯಾವುದೇ ತೊಂದರೆಯಿಲ್ಲ. ಅರ್ಹ ಮಕ್ಕಳು ಇದನ್ನು ನಿರ್ಭೀತಿಯಿಂದ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಅಶೋಕ.ಎಚ್ ಹೇಳಿದ್ದಾರೆ.
ಧರ್ಮವನ್ನು ಬೆರೆಯದಿರಿ: ಮಕ್ಕಳ ಹಿತದೃಷ್ಟಿಯಿಂದ ಕೇಂದ್ರ ಸರಕಾರದ ಉತ್ತಮ ಯೋಜನೆ ಇದಾಗಿದೆ. ಆರೋಗ್ಯದ ವಿಷಯದಲ್ಲಿ ಧರ್ಮವನ್ನು ಎಳೆದು ತರುವ ಅಗತ್ಯವಿಲ್ಲ. ಯಾರೋ, ಎಲ್ಲೋ ಕುಳಿತು ಸೃಷ್ಟಿಸಲಾಗುವ ಗೊಂದಲ, ವದಂತಿಗೆ ಕಿವಿಕೊಡುವ ಅಗತ್ಯವಿಲ್ಲ. ಈ ಚುಚ್ಚುಮದ್ದನ್ನು ಕೊಡದೇ ಹೋದಲ್ಲಿ ಭವಿಷ್ಯದಲ್ಲಿ ಮಕ್ಕಳಲ್ಲಿ ರೋಗ ಕಾಣಿಸಬಹುದು. ಅದನ್ನು ತಡೆಗಟ್ಟಲು ಈಗಲೇ ಈ ಚುಚ್ಚುಮದ್ದು ಕೊಡಲೇಬೇಕು. ಇದರಲ್ಲಿ ಖಾಸಗಿ ಕಂಪೆನಿಗಳ ಲಾಬಿ ಇದೆ ಅಥವಾ ಮುಸ್ಲಿಮರ ಜನಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶವಿದೆ ಎಂಬ ಆರೋಪಗಳಲ್ಲಿ ಹುರುಳಿಲ್ಲ. ದಯವಿಟ್ಟು, ಎಲ್ಲರೂ ತಮ್ಮ ಮಕ್ಕಳಿಗೆ ಈ ಚುಚ್ಚುಮದ್ದು ಹಾಕಿಸಿಕೊಳ್ಳಿ ಎಂದು ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದ್ದಾರೆ.







