ಅಕ್ರಮ ಮರಳು ಸಾಗಾಟ: ಮೂರು ಲಾರಿಗಳು ವಶಕ್ಕೆ

ಮಂಗಳೂರು, ಫೆ.1: ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಮತ್ತು ಭೂಗರ್ಭ ಇಲಾಖಾ ಅಧಿಕಾರಿಗಳು ಇಂದು ವಿವಿಧೆಡೆ ದಾಳಿ ನಡೆಸಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಅಡ್ಯಾರ್ ಬಳಿಯಿಂದ ಮರಳು ತುಂಬಿಸಿಕೊಂಡು ಉಡುಪಿಯತ್ತ ಸಾಗುತ್ತಿದ್ದ ಲಾರಿಯೊಂದನ್ನು ಬಿಕರ್ನಕಟ್ಟೆಯ ಬಳಿ ಗ್ರಾಮಾಂತರ ಠಾಣಾ ಪಿಎಸ್ಐ ವೆಂಕಟೇಶ್ ಹಾಗೂ ಸಿಬಂದಿ ವಶಪಡಿಸಿಕೊಂಡು ಲಾರಿ ಚಾಲಕ ಉಪ್ಪಿನಂಗಡಿಯ ರಝಾಕ್ (35)ನನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ 10 ಲಕ್ಷದ 5 ಸಾವಿರ ರೂ. ಗಿಂತಲೂ ಮಿಕ್ಕಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ನೀರು ಮಾರ್ಗದಲ್ಲಿ ಅಕ್ರಮವಾಗಿ ಲಾರಿಯಲ್ಲಿ ಮರಳು ಸಾಗಿಸುತ್ತಿದ್ದಾಗ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ಹರೀಶ್ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಆರೋಪಿ ಲಾರಿ ಚಾಲಕ ಕಿರಣ್ ಪರಾರಿಯಾಗಿದ್ದಾನೆ. ಲಾರಿ ಸೇರಿ 20 ಲಕ್ಷಕ್ಕೂ ಅಧಿಕ ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಭೂಗರ್ಭ ಇಲಾಖಾ ಅಧಿಕಾರಿ ಹರೀಶ್ ಮೋಹನ್ ಅವರು ಕೇರಳಕ್ಕೆ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಪಡಿಸಿ, ಚಾಲಕ ಉಪ್ಪಿನಂಗಡಿಯ ಶಿವಾನಂದ (34)ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಬಳಿಕ ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಅಕ್ರಮ ಮರಳು ಸಾಗಾಟದಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.







