ಮೂಡುಬಿದಿರೆ: ರಾಜ್ಯಮಟ್ಟದ ಹೊನಲು ಬೆಳಕಿನ ಹಗ್ಗಜಗ್ಗಾಟ
ಮೂಡುಬಿದಿರೆ, ಫೆ.2: ನಮ್ಮ ಜವನೆರ್ ಮಂಜನಕಟ್ಟೆ ಬೆಳುವಾಯಿ ಇದರ ಆಶ್ರಯದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಲಾವಣ್ಯ ಎನ್ನುವ ಮಗುವಿನ ವೈದ್ಯಕೀಯ ಚಿಕಿತ್ಸೆಯ ಆರ್ಥಿಕನೆರವಿಗಾಗಿ ದ್ವಿತೀಯ ವರ್ಷದ ರಾಜ್ಯ ಮಟ್ಟದ ಹೊನಲು ಬೆಳಕಿನ (7+1 ಜನರ 480 ಕೆ.ಜಿ ವಿಭಾಗದ) ಹಗ್ಗಜಗ್ಗಾಟ ಪಂದ್ಯಾಟ (ಗ್ರಿಪ್)ವು ಬೆಳುವಾಯಿ ಮಂಜನಕಟ್ಟೆ ಬಳಿ ನಡೆಯಿತು.
ಮೂಡುಬಿದಿರೆ ಶಾಸಕ ಕೆ.ಅಭಯ ಚಂದ್ರ ಜೈನ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಅನಂತ ಆಸ್ರಣ್ಣ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾನಾಥ್ ಕೋಟ್ಯಾನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಜೆಡಿಎಸ್ ಮೂಡುಬಿದಿರೆ ವಿಧಾನಸಭಾ ಅಧ್ಯಕ್ಷ ಅಶ್ವಿನ್ ಜೆ.ಪಿರೇರಾ, ಬಿಜೆಪಿ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಜೊಯ್ಲಸ್ ಡಿಸೋಜ ಉಪಸ್ಥಿತರಿದ್ದರು. ನಿತಿನ್ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಪೂಜಾರಿ ವಂದಿಸಿದರು. ಸ್ಥಳೀಯ ಪ್ರತಿಭೆೆಗಳಿಂದ ವಿವಿಧ ವಿನೋದಾವಳಿಗಳನ್ನು ಹಾಗೂ ಅಂತಾ ರಾಷ್ಟ್ರೀಯ ಖ್ಯಾತಿಯ ಅಶೋಕ್ ಪೊಳಲಿ ಇವರಿಂದ ವಿಭಿನ್ನ ಶೈಲಿಯ ನೃತ್ಯ, ಬೃಹತ್ ಕೋಳಿ ನೃತ್ಯ ನಡೆಯಿತು.
ಹಗ್ಗ ಜಗ್ಗಾಟದಲ್ಲಿ ಜೋಕುಲ ಕಂಬಲ ಪಟ್ಟೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ನಗದನ್ನು ಮಗುವಿನ ವೈದ್ಯಕೀಯ ಚಿಕಿತ್ಸೆಗಾಗಿ ನೀಡಿದರು. ದ್ವಿತೀಯ, ಕಾಡಬೆಟ್ಟು ಹಾಗೂ ತೃತೀಯ ಬೀರಿ ತಂಡ ಪಡೆದುಕೊಂಡಿದೆ. ಸಿ.ಎ. ಬ್ಯಾಂಕ್ ಬೆಳುವಾಯಿ ವತಿಯಿಂದ 10,000, ಅಭಯಚಂದ್ರ ಜೈನ್ ಶಾಸಕರು 10,000, ಮುಖ್ಯಮಂತ್ರಿ ನಿಧಿಯಿಂದ ಮಗುವಿನ ವೈದ್ಯಕೀಯ ವೆಚ್ಚವನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು. ಮಿಥುನ್ ರೈ 6,000 ರೂ. ನಗದು ಸಹಿತ ಕಾರ್ಯಕ್ರಮದಲ್ಲಿ 70,000 ರೂ. ನಗದನ್ನು ನಮ್ಮ ಜವನೆರ್ ಸಂಘದವರು ಮಗುವಿನ ವೈದ್ಯಕೀಯ ಚಿಕಿತ್ಸೆಯ ಆರ್ಥಿಕ ನೆರವಿಗಾಗಿ ಮಗುವಿನ ಹೆತ್ತವರಿಗೆ ಹಸ್ತಾಂತರಿಸಿದರು.