ಮೇಲ್ಜಾತಿಗಳ ಬಡವರಿಗೆ ಮೀಸಲಾತಿ:ಮಾಯಾವತಿ

ಬರೇಲಿ(ಉ.ಪ್ರ),ಫೆ.4: ರಾಜ್ಯದಲ್ಲಿ ಬಿಎಸ್ಪಿ ಅಧಿಕಾರಕ್ಕೆ ಬಂದರೆ ರೈತರ ಒಂದು ಲ.ರೂ.ವರೆಗಿನ ಸಾಲಗಳನ್ನು ಮನ್ನಾ ಮಾಡಲಗುವುದು ಮತ್ತು ಮೇಲ್ಜಾತಿಗಳಲ್ಲಿಯ ಬಡವರಿಗೆ ಮೀಸಲಾತಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಇಂದಿಲ್ಲಿ ಘೋಷಿಸಿದರು.
ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಆರೆಸ್ಸೆಸ್ ಕಾರ್ಯಸೂಚಿಯನ್ನು ಅನುಸರಿಸುತ್ತಿರುವ ಬಿಜೆಪಿಯು ಅಧಿಕಾರಕ್ಕೆ ಬಂದರೆ ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಅಂತ್ಯಗೊಳ್ಳಲಿದೆ. ಬಿಎಸ್ಪಿ ಅಧಿಕಾರಕ್ಕೆ ಬಂದರೆ ಕೋಟಾ ಸೌಲಭ್ಯ ಮುಂದುವರಿಕೆಯೊಂದಿಗೆ ಮೇಲ್ಜಾತಿಗಳಲ್ಲಿಯ ಬಡವರಿಗೂ ಮೀಸಲಾತಿ ದೊರೆಯಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ನೋಟು ನಿಷೇಧಕ್ಕೆ 10 ತಿಂಗಳು ಮೊದಲೇ ತನ್ನ ನಿಕಟವರ್ತಿಗಳು ಕಪ್ಪುಹಣವನ್ನು ಬಿಳಿ ಮಾಡಿಕೊಳ್ಳಲು ನೆರವಾಗಿದ್ದರು ಎಂದು ಆರೋಪಿಸಿದ ಅವರು, ನೋಟು ಅಮಾನ್ಯ ವಿಷಯದಲ್ಲಿ ಜನರಲ್ಲಿರುವ ಸಿಟ್ಟು ಬಿಜೆಪಿಗೆ ಅರ್ಥವಾಗಿದೆ, ಹೀಗಾಗಿಯೇ ಅದು ತನ್ನ ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿಯನ್ನಾಗಿ ಯಾರನ್ನೂ ಬಿಂಬಿಸಿಲ್ಲ ಎಂದು ಹೇಳಿದರು.
ರಾಜ್ಯದ ಆಡಳಿತಾರೂಢ ಎಸ್ಪಿಯನ್ನೂ ಅವರು ಕಟುವಾಗಿ ಟೀಕಿಸಿದರು.







