ವಿವಿ ಮಟ್ಟದ ಅಂತರ್ ಕಾಲೇಜು ತುಳು ಸಾಂಸ್ಕೃತಿಕ ಜನಪದ ಸ್ಪರ್ಧೋತ್ಸವ
ಮಂಗಳೂರು, ಫೆ.4: ತುಳುನಾಡಿನ ಮಣ್ಣಿನ ಸಂಸ್ಕೃತಿಗಳನ್ನು ಅರಿಯುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು. ಜನಪದ ನಂಬಿಕೆ, ಕೃಷಿ ಬದುಕು, ಸಾಧಕರನ್ನು ಪರಿಚಯಿಸಿಕೊಂಡಾಗ ಮಾತ್ರ ಸಂಸ್ಕೃತಿ ಬೆಳೆಯಬಲ್ಲುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸದಸ್ಯೆ ರೂಪಕಲಾ ಆಳ್ವ ಹೇಳಿದರು.
ಕೊಡಿಯಾಲ್ಬೈಲ್ ಶಾರದಾ ಕಾಲೇಜು ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಂಯುಕ್ತ ಆಶ್ರಯದಲ್ಲಿ ಶಾರದಾ ಕಾಲೇಜು ಬಯಲು ರಂಗಮಂದಿರದಲ್ಲಿ ಶನಿವಾರ ನಡೆದ ‘ಪಿಂಗಾರ-2017’ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ತುಳು ಸಾಂಸ್ಕೃತಿಕ ಜನಪದ ಸ್ಪರ್ಧೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಸುಮನಾ ಘಾಟೆ ‘ಬ್ರಾಹ್ಮಿ’ ಕಾಲೇಜಿನ ವಾರ್ಷಿಕ ಅಕ್ಷರ ಸಂಪುಟವನ್ನು ಅನಾವರಣಗೊಳಿಸಿದರು.
ಮಂಗಳೂರು ವಿವಿ ನಡೆಸಿದ 2016ನೆ ಸಾಲಿನ ಬಿಎಸ್ಸಿ ಆ್ಯನಿಮೇಶನ್ನಲ್ಲಿ ರ್ಯಾಂಕ್ ಗಳಿಸಿದ ಕಾಲೇಜಿನ ವಿದ್ಯಾರ್ಥಿಗಳಾದ ಜಿಬಿನ್ ಆ್ಯಂಟನಿ (ಪ್ರ), ರಾಮಚಂದ್ರ (ದ್ವಿ), ರೀತೂ ಶಿಬಾಲಿನಿ ಕೆ. ಎಸ್. (ತೃ) ಅವರನ್ನು ಈ ವೇಳೆ ಸನ್ಮ್ಮಾನಿಸಲಾಯಿತು. ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಬ್ಯಾಂಕ್ನ ಕೊಡಿಯಾಲ್ಬೈಲ್ ಶಾಖೆಯ ಸಾನ್ರಾ, ಸುನಂದಾ ಪುರಾಣಿಕ್ ಮುಖ್ಯ ಅತಿಥಿಗಳಾಗಿದ್ದರು. ಕಸಾಪ ಜಿಲ್ಲಾಧ್ಯಕ್ಷ ಎಸ್.ಪ್ರದೀಪ್ಕುಮಾರ ಕಲ್ಕೂರ, ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಎಸ್.ಕಲ್ಲೂರಾಯ, ಪಪೂ ಕಾಲೇಜಿನ ಪ್ರಾಂಶುಪಾಲ ಶ್ರೀಪತಿ ರಾವ್ ಮತ್ತಿತರರು ಉಪಸ್ಥಿತರಿದ್ದರು. ಶಾರದಾ ಕಾಲೇಜಿನ ಪ್ರಾಂಶುಪಾಲ ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಸ್ವಾಗತಿಸಿದರು. ವರ್ಷಾ ಕಾರ್ಯಕ್ರಮ ನಿರೂಪಿಸಿದರು.







