ಬ್ಯಾರಿಕೇಡ್ಗೆ ಕಾರು ಢಿಕ್ಕಿ : ಓರ್ವ ಗಂಭೀರ

ಮುಲ್ಕಿ,ಫೆ.5: ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ಬಿಲ್ಲವ ಸಂಘದ ಬಳಿಯ ವಿಜಯ ಬ್ಯಾಂಕ್ ಎದುರುಗಡೆ ರಾಷ್ತ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಘಟನೆ ನಡೆದಿದ್ದು ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.ಗಾಯಾಳನ್ನು ಉಡುಪಿ ಜಿಲ್ಲೆಯ ಉಚ್ಚಿಲ ಬಳಿಯ ನಿವಾಸಿ ಮೊಜಾಕ್ ಎಂದು ಗುರುತಿಸಲಾಗಿದೆ.
ಭಾನುವಾರ ಬೆಳಿಗ್ಗೆ ಬಜಪೆ ವಿಮಾನ ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಡುಪಿ ಜಿಲ್ಲೆಯ ಉಚ್ಚಿಲದತ್ತ ಹೋಗುತ್ತಿದ್ದ ಕಾರೊಂದು ಅತೀ ವೇಗದಿಂದ ಬರುವಾಗ ಮೂಲ್ಕಿಯ ವಿಜಯ ಬ್ಯಾಂಕ್ ಎದುರುಗಡೆ ರಾಷ್ತ್ರೀಯ ಹೆದ್ದಾರಿಯ ಕಿನ್ನಿಗೋಳಿ ಕಡೆಗೆ ಅವೈಜ್ಞಾನಿಕ ತಿರುವಿನಲ್ಲಿ ವೇಗ ತಡೆಗೆ ಇಟ್ಟಿದ್ದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದಿದೆ.ಬ್ಯಾರಿಕೇಡ್ ಸಂಪೂರ್ಣ ತುಂಡು ತುಂಡಾಗಿದ್ದು ಕಾರಿನ ಎದುರು ಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ..ಅಪಘಾತದಿಂದ ಕಾರಿನಲ್ಲಿದ್ದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಕಾರಿನ ಚಾಲಕ ಉಚ್ಚಿಲ ನಿವಾಸಿ ಮೊಜಾಕ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಅಪಘಾತದಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಸುರತ್ಕಲ್ ಉತ್ತರ ಸಂಚಾರಿ ಪೋಲಿಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಅಪಘಾತ ವಲಯವಾಗಿರುವ ಮುಲ್ಕಿಯ ವಿಜಯ ಬ್ಯಾಂಕ್ ಎದುರುಗಡೆ ಅವೈಜ್ಞಾನಿಕ ಕ್ರಾಸಿಂಗ್ನಿಂದ ಕಳೆದ ಕೆಲ ತಿಂಗಳಿನಿಂದ ಹಲವಾರು ಅಪಘಾತಗಳಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





