ಮೋದಿ ಸರ್ಕಾರವೇ ಒಪ್ಪಿಕೊಂಡ ಸತ್ಯ
ನಿರುದ್ಯೋಗ ಹೆಚ್ಚುತ್ತಿದೆ ಎಂದ ಕೇಂದ್ರ ಸಚಿವ !

ಹೊಸದಿಲ್ಲಿ,ಫೆ.6: ದೇಶದಲ್ಲಿ ವಿಶೇಷವಾಗಿ ಹಿಂದುಳಿದ ವರ್ಗಗಳಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚುತ್ತಿದೆಯೆಂಬುದನ್ನು ಕೊನೆಗೂ ಕೇಂದ್ರ ಸರಕಾರವು ಸೋಮವಾರ ರಾಜ್ಯಸಭೆಯಲ್ಲಿ ಒಪ್ಪಿಕೊಂಡಿದೆ. ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ಕೇಂದ್ರ ಯೋಜನಾ ಖಾತೆಯ ಸಹಾಯಕ ಸಚಿವ ರಾವ್ ಇಂದರ್ಜಿತ್ ಸಿಂಗ್, ಅವರು ದೇಶದಲ್ಲಿ ಒಟ್ಟಾರೆಯಾಗಿ ನಿರುದ್ಯೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಅದರಲ್ಲೂ ವಿಶೇಷವಾಗಿ ಇತರ ಹಿಂದುಳಿದ ವರ್ಗಗಳಲ್ಲಿ (ಓಬಿಸಿ) ಇದು ಅತ್ಯಧಿಕವಾಗಿದೆ ಎಂದರು.ಇದರೊಂದಿಗೆ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಉಲ್ಬಣಿಸುತ್ತಿದೆಯೆಂಬ ಪ್ರತಿಪಕ್ಷಗಳ ಆರೋಪವನ್ನು ಮೋದಿ ಸರಕಾರ ಖುದ್ದಾಗಿ ಒಪ್ಪಿಕೊಂಡಂತಾಗಿದೆ.
ದೇಶದಲ್ಲಿ ಒಟ್ಟಾರೆ ನಿರುದ್ಯೋಗದ ದರವು ಶೇ.5ರಷ್ಟಿದ್ದರೆ, ಓಬಿಸಿಗಳಲ್ಲಿ ಅದು ಶೇ.5.2 ಆಗಿದೆಯೆಂದು ಸಚಿವರು ತಿಳಿಸಿದರು. 2013ರಲ್ಲಿ ನಿರುದ್ಯೋಗದ ದರವು ಶೇ.4.9ರಷ್ಟಿದ್ದರೆ, 2012 ಶೇ.4.7 ಹಾಗೂ 2011ರಲ್ಲಿ ಶೇ.3.8 ಆಗಿತ್ತು.
ಪರಿಶಿಷ್ಟ ಜಾತಿಗಳಲ್ಲಿ ನಿರುದ್ಯೋಗದ ದರವು 2011ರಲ್ಲಿ ಶೇ. 3.1 ಆಗಿದ್ದರೆ, ಈಗ ಅದು ಶೇ.5ಕ್ಕೆ ಏರಿಕೆಯಾಗಿದೆಯೆಂದು ರಾವ್ ಇಂದರ್ಜಿತ್ ಸಿಂಗ್ ಸದನಕ್ಕೆ ತಿಳಿಸಿದರು.





