ಒಂಬತ್ತು ಮಾಗಣೆಯ ಮುಂಡಾಳ ಶಿವ ಸಮಾಜ ಸೇವಾ ಸಂಘ ; ಪ್ರತಿಬಾ ಪುರಸ್ಕಾರ
ಮುಲ್ಕಿ, ಫೆ.6: ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸದೃಡರಾಗಿ ಸಂಘಟನಾ ಶಕ್ತಿಯೊಂದಿಗೆ ಸಮಾಜದ ಅಭಿವೃದ್ಧಿಯಲ್ಲಿ ಪಾಲ್ಗೊಂಡು ಸುಶಿಕ್ಷಿತ ಸಮಾಜದ ನಿರ್ಮಾಣ ಮಾಡಬೇಕು ಎಂದು ದ.ಕ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಮುಲ್ಕಿ ಗೇರುಕಟ್ಟೆ ಒಂಬತ್ತು ಮಾಗಣೆಯ ಮುಂಡಾಳ ( ಪ.ಜಾ) ಶಿವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಮಾಗಣೆಯ ಮುಂಡಾಳ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಬಾ ಪುರಸ್ಕಾರ, ಸಂಘದ ವಾರ್ಷಿಕ ಮಹಾಸಭೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಳವೆಯಲ್ಲಿಯೇ ಮಕ್ಕಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಹೆತ್ತವರು ಗಮನಹರಿಸಿದರೆ, ಅವರ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹಿಸಿ ಶಿಕ್ಷಣ ನೀಡಿದಾಗ ಪ್ರತಿಭಾವಂತರಾಗಿ ರೂಪುಗೊಳ್ಳುತ್ತಾರೆ ಎಂದರು. ಒಂಬತ್ತು ಮಾಗಣೆಯ ಮುಂಡಾಳ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಾದ ಸಾರಿಕಾ, ವರ್ಷಾ ಬಿ. ಅಂಚನ್, ಕುಮಾರ್, ಕೃತಿಕಾ, ಉಜ್ವಲ್, ಸೌಜನ್ಯ, ವಿಕೇತ ವಿ.ಕೆ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಒಂಬತ್ತು ಮಾಗಣೆಯ ಮುಂಡಾಳ ಶಿವಸಮಾಜ ಸೇವಾ ಸಂಘದ ಅಧ್ಯಕ್ಷ ಮಾಧವ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಕಾಂತ, ಒಂಬತ್ತು ಮಾಗಣೆಯ ಮುಂಡಾಳ ಶಿವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಕೆ. ಸುಧಾಕರ, ಕಾರ್ಯದರ್ಶಿ ಪ್ರಕಾಶ್ ಕೊಡ್ಮಾನ್, ಕೋಶಾಧಿಕಾರಿ ರಮೇಶ ಬಿ., ದ.ಕ. ಪಂಚಾಯತ್ ರಾಜ್ ಇಂಜಿನಿಯರ್ ಪ್ರಶಾಂತ್ ಆಳ್ವ, ಗುತ್ತಿಗೆದಾರ ಪ್ರದೀಪ್ ಶೆಟ್ಟಿ ಎಕ್ಕಾರು ಉಪಸ್ಥಿತರಿದ್ದರು.
ಒಂಬತ್ತು ಮಾಗಣೆಯ ಮುಂಡಾಳ ಶಿವ ಸಮಾಜ ಸೇವಾ ಸಂಘದ ಅಧ್ಯಕ್ಷ ಮಾಧವ ಬಂಗೇರ ಪ್ರಸ್ತಾವನೆಗೈದು ಸ್ವಾಗತಿಸಿದರು. ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಭಾಸ್ಕರ ಮಾಬೆನ್ ಮಂಡಿಸಿದರು. ಸುಕುಮಾರ್ ವಂದಿಸಿದರು. ರವೀಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.







