ನಾಳೆಯಿಂದ ನವಸುಮ ರಂಗಮಂಚದಿಂದ ‘ರಂಗೋತ್ಸವ’
ಉಡುಪಿ, ಫೆ.6: ಕೊಡವೂರು ನವಸುಮ ರಂಗಮಂಚದ ವತಿಯಿಂದ ಮೂಡುಬೆಟ್ಟು ಯುವಕ ಮಂಡಲದ ಸಹಕಾರದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಪ್ರಾಯೋಜಕತ್ವದಲ್ಲಿ ರಂಗೋತ್ಸವವನ್ನು ಫೆ.8ರಿಂದ 10ರವರೆಗೆ ಪ್ರತಿದಿನ ಸಂಜೆ 7ಕ್ಕೆ ಕೊಡವೂರು ಮೂಡಬೆಟ್ಟು ಶಾರದಾ ವಾಸುದೇವ ಕಿಣಿ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಫೆ.8ರಂದು ರಂಗೋತ್ಸವವನ್ನು ರಂಗ ಸಂಘಟಕ ಕಿಶೋರ್ ಡಿ. ಶೆಟ್ಟಿ ಉದ್ಘಾಟಿಸಲಿದ್ದು, ಮಾಜಿ ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. 10ರಂದು ಜರಗುವ ಸಮಾರೋಪ ಸಮಾರಂಭದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಭಾಗವಹಿಸಲಿರುವರು ಎಂದು ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ಕೊಡವೂರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
8ರಂದು ಮಂಗಳೂರು ಸುವರ್ಣ ಪ್ರತಿಷ್ಠಾನ ತಂಡದಿಂದ ಕೋರ್ಟ್ ಮಾರ್ಶಲ್, 9ರಂದು ಕೊಡವೂರು ನವಸುಮ ರಂಗಮಂಚ ತಂಡದಿಂದ ‘ಶೂದ್ರ ತಪಸ್ವಿ’, 10ರಂದು ಬೈಂದೂರು ಲಾವಣ್ಯ ತಂಡದಿಂದ ‘ಮುದ್ದಣನ ಪ್ರಮೋಷನ್’ ಪ್ರಸಂಗ ನಾಟಕ ಪ್ರದರ್ಶನಗೊಳ್ಳಲಿದ್ದು, 11ರಂದು ಯುವಕ ಮಂಡಲದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಂಘದ ಸದಸ್ಯರ ‘ಕಥೆ ಏರ್ ಬರೆಪೆರ್’ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಸುರೇಶ್ ಶೆಟ್ಟಿ, ಉಪಾಧ್ಯಕ್ಷ ದಿನೇಶ್ ಅಮೀನ್, ಕಾರ್ಯದರ್ಶಿ ವಿನೋದ್ ಕಾಂಚನ್, ಯುವಕ ಮಂಡಲದ ಜಗದೀಶ್ ಅಮೀನ್ ಉಪಸ್ಥಿತರಿದ್ದರು.







