ಅಧ್ಯಾದೇಶ: ಸೋನಿಯಾ, ಸಿಂಗ್ ಜೊತೆ ಮಾತುಕತೆಗೆ ಸಿದ್ಧವೆಂದಿದ್ದ ಅಡ್ವಾಣಿ
ಹೊಸದಿಲ್ಲಿ, ಫೆ.8: ಮಂಗಳವಾರ ಬೆಳಗ್ಗೆ ಪಕ್ಷದ ಸಂಸದರ ಸಭೆಯ ಬಳಿಕ ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರು ಸರಕಾರವನ್ನು ಕಾಡುತ್ತಿರುವ ಸಮಸ್ಯೆಯೊಂದನ್ನು ಬಗೆಹರಿಸಲು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಲು ತಾನು ಸಿದ್ಧನಿದ್ದೇನೆ ಎಂದು ಮೂವರು ಹಿರಿಯ ಸಚಿವರನ್ನು ತಡೆದು ನಿಲ್ಲಿಸಿ ತಿಳಿಸಿದ್ದರು.
ಸಂಸತ್ ಭವನದಲ್ಲಿ ಸಭೆಯ ಬಳಿಕ ಹೊರಗೆ ಬರುತ್ತಿದ್ದ ವಿತ್ತಸಚಿವ ಅರುಣ್ ಜೇಟ್ಲಿ, ಕಾನೂನು ಸಚಿವ ರವಿಶಂಕರ ಪ್ರಸಾದ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಅವರೆದುರು ಅಡ್ವಾಣಿಯವರು ಈ ಕೊಡುಗೆಯನ್ನಿಟ್ಟಿದ್ದರು ಎನ್ನಲಾಗಿದೆ.
ಶತ್ರು ಆಸ್ತಿ ಕಾಯ್ದೆ ಕುರಿತು ಪದೇಪದೇ ಅಧ್ಯಾದೇಶ ಅಥವಾ ವಿಶೇಷ ಕಾರ್ಯಕಾರಿ ಆದೇಶವನ್ನು ಹೊರಡಿಸುವುದು ಸರಕಾರಕ್ಕೆ ಏಕೆ ಅನಿವಾರ್ಯವಾಗಿದೆ ಎನ್ನುವುದನ್ನು ಜೇಟ್ಲಿ ಅವರು ಸಾಪ್ತಾಹಿಕ ಸಭೆಯಲ್ಲಿ ಪಕ್ಷದ ಸಂಸದರಿಗೆ ವಿವರಿಸಿದ್ದರು. ಈ ಕಾಯ್ದೆಯು ಯುದ್ಧಗಳ ಬಳಿಕ ಪಾಕಿಸ್ತಾನ ಅಥವಾ ಚೀನಾಗಳಿಗೆ ವಲಸೆ ಹೋದವರ ಆಸ್ತಿಗಳ ವಾರಸುದಾರಿಕೆ ಅಥವಾ ವರ್ಗಾವಣೆ ಹಕ್ಕುಕೋರಿಕೆಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.
ರಾಜಾ ಮಹಮೂದಾಬಾದ್ಗೆ ಸಂಬಂಧಿಸಿದ ಪ್ರಕರಣದಲ್ಲಿರುವ ಅಸಂಗತತೆಯೊಂದನ್ನು ನಿವಾರಿಸಲು ಈ ಅಧ್ಯಾದೇಶವು ಬಯಸಿದೆ. ಉತ್ತರ ಪ್ರದೇಶದಲ್ಲಿ ಭಾರೀ ಆಸ್ತಿಯನ್ನು ಹೊಂದಿದ್ದ, ರಾಜಮನೆತನಕ್ಕೆ ಸೇರಿದ ಅವರು ಇರಾಕ್ ಮತ್ತು ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಲ್ಲಿ ವಾಸವಾಗಿದ್ದರು. ಅವರ ಪತ್ನಿ ಮತ್ತು ಪುತ್ರ ಇಲ್ಲಿಯೇ ಉಳಿದುಕೊಂಡು ಆಸ್ತಿಯನ್ನು ವಶಪಡಿಸಿಕೊಳ್ಳುವ ಸರಕಾರದ ಹಕ್ಕನ್ನು ಪ್ರಶ್ನಿಸಿದ್ದರು.
ಸರ್ವೋಚ್ಚ ನ್ಯಾಯಾಲಯವು ರಾಜಾ ಕುಟುಂಬದ ಪರವಾಗಿ ನೀಡಿದ್ದ ತೀರ್ಪನ್ನು ನಿರರ್ಥಕಗೊಳಿಸಲು 2010ರಲ್ಲಿ ಯುಪಿಎ ಸರಕಾರವು ಮೊದಲ ಬಾರಿಗೆ ಅಧ್ಯಾದೇಶವನ್ನು ಹೊರಡಿಸಿತ್ತು.
ರಾಜ್ಯಸಭೆಯಲ್ಲಿ ಸರಕಾರಕ್ಕೆ ಬಹುಮತವಿಲ್ಲದ್ದರಿಂದ ಅಧ್ಯಾದೇಶವು ಲೋಕಸಭೆಯಲ್ಲಿ ಅಂಗೀಕಾರಗೊಂಡರೂ ರಾಜ್ಯಸಭೆಯಲ್ಲಿ ಅದಕ್ಕೆ ಅವಕಾಶ ದೊರೆಯುತ್ತಿಲ್ಲ. ಹೀಗಾಗಿ ಅದನ್ನು ಜೀವಂತವಿರಿಸಲು ಅಧ್ಯಾದೇಶಗಳ ಮೇಲೆ ಅಧ್ಯಾದೇಶಗಳನ್ನು ಹೊರಡಿಸುವುದು ಸರಕಾರಕ್ಕೆ ಅನಿವಾರ್ಯವಾಗಿದೆ.
ಬಿಜೆಪಿ ಸಭೆ ಅಂತ್ಯಗೊಂಡಾಗ ಇದೊಂದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಷಯವೆಂದು ಬಣ್ಣಿಸಿದ್ದ ಅಡ್ವಾಣಿ, ತಾನೇ ಮಂಡಿಸಿದ್ದ ಶಾಸನವನ್ನು ಕಾಂಗ್ರೆಸ್ ಏಕೆ ತಡೆಯುತ್ತಿದೆ ಎಂದು ಪ್ರಶ್ನಿಸಿದ್ದರು.





