ಫೆ.12ರಂದು ಮುಟ್ಟಾಜೆಯಲ್ಲಿ ಉಚಿತ ವೈದ್ಯಕೀಯ ಶಿಬಿರ
ಮಂಗಳೂರು, ಫೆ.9: ಮುಟ್ಟಾಜೆ ಕುಂಞಾಲಿ ಹಾಜಿ ಫ್ಯಾಮಿಲಿ ಅಸೋಸಿಯೇಶನ್ ವತಿಯಿಂದ ಮರ್ಹೂಂ ಎಂ.ಪಿ. ಇಸ್ಮಾಯೀಲ್ ಹಾಜಿ ಪಾರೆ ಮತ್ತು ಮರ್ಹೂಂ ನೆಫೀಸಾ ಇಸ್ಮಾಯೀಲ್ ಮುಟ್ಟಾಜೆ ದಂಪತಿಯ ಸ್ಮರಣಾರ್ಥ ದ.ಕ. ಜಿಲ್ಲೆಯ ನರಿಂಗಾನ ಗ್ರಾಮದ ಕೊಲ್ಲರಕೋಡಿಯ ಸರಕಾರಿ ಪ್ರೌಢಶಾಲೆಯ ವಠಾರದಲ್ಲಿ ಫೆ.12ರಂದು ಬೆಳಗ್ಗೆ 8:30ರಿಂದ 12:30ರವರೆಗೆ ಉಚಿತ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಂಡಿದೆ ಎಂದು ಮುಟ್ಟಾಜೆ ಕುಂಞಾಲಿ ಹಾಜಿ ಫ್ಯಾಮಿಲಿ ಅಸೋಸಿಯೇಶನ್ನ ಕಾರ್ಯದರ್ಶಿ ಹಮೀದ್ ಪಾರೆ ತಿಳಿಸಿದರು.
ಗುರುವಾರ ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಟ್ಟಾಜೆ ಕುಂಞಾಲಿ ಹಾಜಿ ಕುಟುಂಬವು ಮೂಲತಃ ಕೃಷಿಕರಾಗಿದ್ದರೂ ಕೂಡ ಈ ಕುಟುಂಬದಲ್ಲಿ 50ಕ್ಕೂ ಅಧಿಕ ತಜ್ಞ ವೈದ್ಯರಿದ್ದು, ವಿವಿಧ ಕ್ಷೇತ್ರಗಳ್ಲಲಿ ಸೇವೆ ಸಲ್ಲಿಸುತ್ತಿದ್ದಾರೆ. ಮುಟ್ಟಾಜೆ ಕುಟುಂಬದ ವತಿಯಿಂದ ಸಮಾಜದ ದುರ್ಬಲರ ಸೇವೆ ಮತ್ತು ಸಮಾಜ ಸೇವೆಯ ಉದ್ದೇಶವನ್ನಿಟ್ಟುಕೊಂಡು 3 ವರ್ಷಗಳಿಂದ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಈ ವೈದ್ಯಕೀಯ ಶಿಬಿರದ ಕೊನೆಯಲ್ಲಿ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ. ಸಚಿವ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಪಂ ಸದಸ್ಯೆ ಮಮತಾ ಗಟ್ಟಿ, ಮಂಜನಾಡಿ ಜಮಾಅತ್ ಅಧ್ಯಕ್ಷ ಅಬ್ದುಲ್ ಅಝೀಝ್ (ಮೈಸೂರು ಬಾವ), ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ನರಿಂಗಾನ ಗ್ರಾಪಂ ಅಧ್ಯಕ್ಷ ಇಸ್ಮಾಯೀಲ್ ಮೀನಂಗೋಡಿ, ಉಪಾಧ್ಯಕ್ಷೆ ನಳಿನಾಕ್ಷಿ, ಸದಸ್ಯ ಅಬ್ದುಲ್ ಖಾದರ್ ಉಪಸ್ಥಿತರಿರುವರು ಎಂದು ತಿಳಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಕಂಞಾಲಿ ವಹಿಸಲಿದ್ದು, ಕುಟುಂಬದ ಹಿರಿಯರಾದ ಹಾಜಿ ಅಬೂಬಕರ್ ಮುಟ್ಟಾಜೆ, ನಿವೃತ್ತ ಅಧಿಕಾರಿ ಎನ್.ಇಬ್ರಾಹೀಂ ನಾಯರ್ಮೂಲೆ, ನಿವೃತ್ತ ನ್ಯಾಯಾಧೀಶ ಎನ್. ಮೂಸಾಕುಂಞಿ ನಾಯರ್ಮೂಲೆ, ಕರ್ನಾಟಕ ಜಮಾಅತ್ ಕೌನ್ಸಿಲ್ನ ದ.ಕ. ಜಿಲ್ಲಾಧ್ಯಕ್ಷ ಹೈದರ್ ಪರ್ತಿಪ್ಪಾಡಿ ಭಾಗವಹಿಸಲಿದ್ದಾರೆ. ಸಾಧಕರನ್ನು ಪಾರೆ ಕುಟುಂಬದ ಹಿರಿಯ ಸದಸ್ಯ ಹಾಜಿ ಅಬೂಸಾಲಿ ಪಾರೆ ಸನ್ಮಾನಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಟ್ಟಾಜೆ ಕುಂಞಾಲಿ ಹಾಜಿ ಫ್ಯಾಮಿಲಿ ಅಸೋಸಿಯೇಶನ್ನ ಉಪಾಧ್ಯಕ್ಷ ಹಮೀದ್ ಕುಂಞಾಲಿ, ಅಲಿಕುಂಞಿ ಪಾರೆ ಉಪಸ್ಥಿತರಿದ್ದರು







