ಆಲಪ್ಪುಝದಲ್ಲಿ ಡಿವೈಎಫ್ಐ ನಾಯಕನ ಇರಿದು ಕಗ್ಗೊಲೆ

ಆಲಪ್ಪುಝ,ಫೆ. 10: ಇಲ್ಲಿಗೆ ಸಮೀಪದ ಹರಿಪ್ಪಾಡ್ ಕರುವಾಟ್ಟ ಎಂಬಲ್ಲಿ ಡಿವೈಎಫ್ಐ ನಾಯಕನನ್ನು ದುಷ್ಕರ್ಮಿಗಳು ಬೆನ್ನಟ್ಟಿ ಇರಿದು ಕೊಲೆಗೈದ ಘಟನೆ ನಡೆದಿದೆ. ಮೃತರನ್ನು ಕರುವಾಟ್ಟ ಉತ್ತರ ವಲಯದ ಜಂಟಿಕಾರ್ಯದರ್ಶಿ ಜಿಷ್ಣು(24) ಎಂದು ಗುರುತಿಸಲಾಗಿದೆ.
ಇನ್ನೋರ್ವ ಡಿವೈಎಫ್ಐ ಕಾರ್ಯಕರ್ತನೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಎಂಟು ಮಂದಿಯ ತಂಡ ತಡೆದು ನಿಲ್ಲಿಸಿ ದಾಳಿ ನಡೆಸಿದೆ. ದುಷ್ಕರ್ಮಿಗಳಿಂದ ತಪ್ಪಿಸಿ ಓಡಿ ಜೀವವುಳಿಸಲು ಜಿಷ್ಣು ಪ್ರಯತ್ನಿಸಿದರೂ ಬೆಂಬತ್ತಿದ ತಂಡ ಅವರನ್ನು ಕಡಿದು ಕೊಲೆಗೈದಿದೆ.
ಊರಿನವರು ಸುದ್ದಿ ತಿಳಿಸಿದ ಕೂಡಲೇ ಧಾವಿಸಿ ಬಂದ ಪೊಲೀಸರು ಜಿಷ್ಣುರನ್ನು ವಂಡಾನಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ದರೂ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಮಧ್ಯಾಹ್ನ ಹನ್ನೆರಡು ಗಂಟೆಗೆ ದಾಳಿ ನಡೆದಿದೆ ಎಂದು ವರದಿ ತಿಳಿಸಿದೆ.
Next Story





