’ತುಂಬೆ ಶಾಶ್ವತ ಕುಡಿಯುವ ನೀರು ಹೋರಾಟ ಸಮಿತಿ’ ಅಸ್ತಿತ್ವಕ್ಕೆ
ಬಂಟ್ವಾಳ, ಫೆ. 10: ತುಂಬೆ ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಶುಕ್ರವಾರ ತುಂಬೆ ಗ್ರಾಮ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಕ್ಷಾತೀತವಾಗಿ 27 ಮಂದಿಯನ್ನೊಳಗೊಂಡ ಹೋರಾಟ ಸಮಿತಿಯೊಂದನ್ನು ರಚಿಸಲಾಯಿತು.
ಹೋರಾಟದ ಪ್ರಥಮ ಹಂತವಾಗಿ ತುಂಬೆಯಿಂದ ಮಂಗಳೂರು ಮಹಾ ನಗರ ಪಾಲಿಕೆಗೆ ನೀರು ಪೂರೈಕೆಯಾಗುತ್ತಿರುವ 18 ಎಂಜಿಡಿ ಪೈಪ್ಲೈನ್ನಿಂದ ಕಳ್ಳಿಗೆ ಗ್ರಾಮಕ್ಕೆ ನೀರು ಸರಬರಾಜು ಮಾಡಿರುವ ಹಾಗೆ ತುಂಬೆ ಗ್ರಾಮಕ್ಕೂ ನೀರು ಸರಬರಾಜು ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ, ಸ್ಥಳೀಯ ಶಾಸಕ, ವಿಪ ಸದಸ್ಯರು, ಜಿಲ್ಲಾಧಿಕಾರಿ, ಜಿಪಂ ಮುಖ್ಯಕಾರ್ಯನಿರ್ವಾಹಣಾಧಿಕಾರಿ, ಮಂಗಳೂರು ಮಹಾ ನಗರ ಪಾಲಿಕೆಗೆ ಮನವಿ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಇದಕ್ಕೆ ಸೂಕ್ತ ರೀತಿಯ ಸ್ಪಂದನೆ ಸಿಗದೆ ಇದಲ್ಲಿ ತುಂಬೆ ರೇಚಕ ಸ್ಥಾವರಕ್ಕೆ ಮುತ್ತಿಗೆ ಹಾಕುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಭೆ ನಿರ್ಣಯ ಕೈಗೊಂಡಿತ್ತು.
ಪ್ರಸ್ತಾವಿಕವಾಗಿ ಮಾತನಾಡಿದ ತುಂಬೆ ಗ್ರಾಪಂ ಉಪಾಧ್ಯಕ್ಷ ಪ್ರವೀಣ್ ಬಿ. ತುಂಬೆ, ಮಂಗಳೂರು ಮಹಾ ನಗರ ಪಾಲಿಕೆ, ಉಳ್ಳಾಲ ನಗರಸಭೆ, ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಗೆ ತುಂಬೆಯಿಂದಲೇ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ನೀರಿನ ಸ್ಥಾವರ ನಿರ್ಮಾಣ ಹಾಗೂ ಪೈಪ್ಲೈನ್ ಅಳವಡಿಸಲು ಜಮೀನು ಕಳೆದುಕೊಂಡ ತುಂಬೆ ಗ್ರಾಮದ ಜನರಿಗೆ ಕುಡಿಯಲು ನೀರಿಲ್ಲ.
ಪ್ರತೀ ಜನವರಿ ಬಳಿಕ ತುಂಬೆ ವೆಂಟೆಡ್ ಡ್ಯಾಂನ ಕೆಳ ಭಾಗಕ್ಕೆ ಸಿಹಿ ನೀರು ಹರಿಯದೆ ನೇತ್ರಾವತಿ ನದಿಯಲ್ಲಿ ಉಬ್ಬರ ಇಳಿತದ ಉಪ್ಪು ನೀರು ಬರುತ್ತದೆ. ಪರಿಣಾಮ ತುಂಬೆ ಗ್ರಾಮದ ಬಾವಿ, ಕೊಳವೆ ಬಾವಿಯ ನೀರೂ ಉಪ್ಪಾಗುತ್ತದೆ. ಇದನ್ನೇ ಗ್ರಾಮಸ್ಥರು ಬಳಕೆಮಾಡುವಂತಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ತುಂಬೆಗೆ ಶಾಸ್ವತ ಶುದ್ದ ಕುಡಿಯುವ ನೀರಿನ ಅಗತ್ಯವಿದೆ. ಕಳ್ಳಿಗೆ ಪಂಚಾಯತ್ ವ್ಯಾಪ್ತಿಗೆ ಕಲ್ಪಿಸಿದ ರೀತಿಯಲ್ಲೇ ಮಂಗಳೂರು ಮಹಾ ನಗರ ಪಾಲಿಕೆಗೆ ಕುಡಿಯುವ ನೀರು ಸರಬರಾಜಾಗುತ್ತಿರುವ ಪೈಪ್ಲೈನ್ನಿಂದಲೇ ತುಂಬೆ ಗ್ರಾಮಕ್ಕೂ ನೀರು ಒದಗಿಸಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಒತ್ತಡ ಹೇರಲು ಗ್ರಾಮಸ್ಥರ ಬೇಡಿಕೆಯಂತೆ ಈ ಹೋರಾಟ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಎಲ್ಲ ಪಕ್ಷಗಳ ಮುಖಂಡರು ಇದ್ದರೂ ಸಮಿತಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಸಭೆಯಲ್ಲಿ ಹೇಮ ಜಿ. ಪೂಜಾರಿ, ಚಂದ್ರಪ್ರಕಾಶ್ ಶೆಟ್ಟಿ, ರವೀಂದ್ರ ಕಂಬಳಿ, ಗಣೇಶ್ ಸುವರ್ಣ, ಮುಹಮ್ಮದ್ ವಳವೂರು, ಝಹೂರು ಅಹ್ಮದ್, ಗಣೇಶ್ ಸಲ್ಯಾನ್, ಪ್ರಕಾಶ್ ಬಿ. ಶೆಟ್ಟಿ, ಲೋಕನಾಥ ತುಂಬೆ, ಅಬ್ದುಲ್ ಅಝೀರ್, ಅರುಣ್ ಕುಮಾರ್ ಬೊಳ್ಳಾರಿ, ಅಮೀರ್ ಕೆ.ಎಸ್., ಮುಹಮ್ಮದ್ ಇರ್ಫಾನ್, ಟಿ.ಕೆ.ಶರೀಫ್, ಕಿಶೋರ್ ರಾಮಲ್ಕಟ್ಟ, ಮುಹಮ್ಮದ್ ಕಾನೆಮಾರ್, ಮನೋಹರ್ ಕೊಟ್ಟಾರಿ, ಇಮ್ತಿಯಾರ್ ಎ.ಕೆ., ಪ್ರಕಾಶ್ ರೊಟ್ಟಿಗುಡ್ಡೆ, ಸಂಜೀವ ಪೂಜಾರಿ, ದೇವದಾಸ್, ಆತಿಕಾ ಬಾನು, ಹರಿಣಾಕ್ಷಿ, ರಾಜು ಗಾಣದಲಚ್ಚಿಲು, ಅಬ್ದುಲ್ಲಾ, ಪ್ರಕಾಶ್ ಆಚಾರಿ, ಮೋನಪ್ಪ ಮಜಿ, ಜಗದೀಶ್ ಗಟ್ಟಿ ಇವರನ್ನೊಳಗೊಂಡ ಸಮಿತಿ ರಚಿಸಲಾಗಿದೆ.







