ಕುಡಿಯುವ ನೀರಿಗಾಗಿ 24 ಗಂಟೆಗಳ ಸಹಾಯವಾಣಿ ತೆರೆಯಲು ಡಿಸಿ ಸೂಚನೆ
ನೀರಿಗಾಗಿ ಪ್ರತಿಭಟನೆ ನಡೆದರೆ ಅಧಿಕಾರಿಗಳೇ ಹೊಣೆ

ಮಂಗಳೂರು, ಫೆ.13: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರ್ವಹಿಸಲು ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆ ಹಾಗೂ ತಾಲೂಕು ಕೇಂದ್ರದಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ ಕೇಂದ್ರ ತೆರೆಯುವಂತೆ ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ ಸೂಚನೆ ನೀಡಿದ್ದಾರೆ.
ಬೇಸಿಗೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಸಂಬಂಧ ಸೋಮವಾರ ತನ್ನ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಈ ಸಹಾಯವಾಣಿ ಕೇಂದ್ರದಲ್ಲಿ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಬರುವ ದೂರುಗಳನ್ನು ಸ್ವೀಕರಿಸಿ, ಅವುಗಳನ್ನು 24 ಗಂಟೆಯೊಳಗೆ ಇತ್ಯರ್ಥ ಪಡಿಸಬೇಕು. ದೂರುಗಳನ್ನು ನೋಂದಣಿ ಮಾಡಿ ಅದರ ಪರಿಹಾರವಾಗುವವರೆಗೆ ನಿಗಾವಹಿಸಲು ಸೂಚಿಸಿದ ಜಿಲ್ಲಾಧಿಕಾರಿ ಕುಡಿಯುವ ನೀರಿನ ಸಮಸ್ಯೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಸಾರ್ವಜನಿಕರು ಪ್ರತಿಭಟನೆ, ಹೋರಾಟ ಮಾಡುವಂತಹ ಸನ್ನಿವೇಶ ಉಂಟಾದರೆ ಸಂಬಂಧಪಟ್ಟ ಗ್ರಾಪಂ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಎಚ್ಚರಿಸಿದರು.
ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾದ ಅಗತ್ಯ ಬಿದ್ದರೆ ಸಂಬಂಧಪಟ್ಟ ಸಮಿತಿಯ ಅನುಮೋದನೆ ಪಡೆದು ನೀರು ಸರಬರಾಜು ಮಾಡಬೇಕು. ಬಳಿಕ ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ನೀಡಬೇಕು. ನೀರು ಸರಬರಾಜು ಘಟಕಗಳಲ್ಲಿ ಪಂಪ್ಸೆಟ್ಗಳು ಕೆಟ್ಟು ಹೋದರೆ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪರ್ಯಾಯ ಪಂಪ್ಸೆಟ್ ಹಾಗೂ ನುರಿತ ಮೆಕ್ಯಾನಿಕ್ಗಳನ್ನು ಸಿದ್ಧಗೊಳಿಸಿರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಪ್ರದೇಶಗಳನ್ನು ಮೊದಲೇ ಗುರುತಿಸಬೇಕು. ಜಿಲ್ಲೆಯ ಕೆಲವೆಡೆ ನದಿ ನೀರಿನಲ್ಲಿ ರಾಸಾಯನಿಕಗಳನ್ನು ಬೆರಸಿ ಮೀನು ಹಿಡಿಯಲಾಗುತ್ತದೆ. ಕುಡಿಯುವ ನೀರಿನ ಸುರಕ್ಷತೆ ದೃಷ್ಠಿಯಿಂದ ಇದನ್ನು ನಿಷೇಧಿಸಲಾಗುವುದು. ಪಟ್ಟಣ ನಗರ ಪ್ರದೇಶಗಳಲ್ಲಿ ನೀರಿನ ಮಿತಬಳಕೆಗೆ ಜಾಗೃತಿ ಮೂಡಿಸಬೇಕು. ಜಿಲ್ಲೆಯ ನದಿ ಪಾತ್ರದಲ್ಲಿರುವ ಖಾಸಗಿ ಡ್ಯಾಂಗಳಲ್ಲಿ ನೀರಿನ ಒಳಹರಿವು ಕಡಿಮೆಯಾದರೆ ವಿದ್ಯುತ್ ಉತ್ಪಾದನೆಯನ್ನು ಜಿಲ್ಲಾಡಳಿತದ ಪೂರ್ವಾನುಮತಿ ಇಲ್ಲದೆ ಕೈಗೆತ್ತಿಕೊಳ್ಳದಂತೆ ನಿಗಾ ವಹಿಸಲು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಡಾ. ಕೆ.ಜಿ ಜಗದೀಶ್ ಸೂಚಿಸಿದರು.
ಮಂಗಳೂರು ಹಾಗೂ ಬಂಟ್ವಾಳ ತಾಲೂಕನ್ನು ರಾಜ್ಯ ಸರಕಾರ ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ. ಈ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಜಾಗದಲ್ಲಿ ಗ್ರಾಮಕ್ಕೊಂದರಂತೆ ಆಟದ ಮೈದಾನಗಳನ್ನು ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಬರ ತಾಲೂಕುಗಳಲ್ಲಿ ಕೆರೆಗಳು ಬತ್ತಿ ಹೋಗಿದ್ದರೆ ಕೆರೆ ಸಂಜೀವಿನಿ ಯೋಜನೆಯಡಿ ಅವುಗಳಲ್ಲಿ ಹೊಳೆತ್ತಲು ಪ್ರಸ್ತಾವ ಸಲ್ಲಿಸಬೇಕು. ಬರಪರಿಹಾರ ಕಾಮಗಾರಿಗಳನ್ನು ಪಾರದರ್ಶಕವಾಗಿ ನಿರ್ವಹಿಸಬೇಕು. ಜಿಲ್ಲೆ ಅಥವಾ ಇತರ ಜಿಲ್ಲೆಯಿಂದ ದ.ಕ. ಮೂಲಕ ಕೇರಳಕ್ಕೆ ಮೇವು ಸಾಕಾಣಿಕೆ ಸಂಪೂರ್ಣವಾಗಿ ನಿರ್ಬಂಧಿಸಬೇಕು. ಬರಪೀಡಿತ ತಾಲೂಕುಗಳಲ್ಲಿ ಬೆಳೆ ನಷ್ಟವನ್ನು ಅಂದಾಜಿಸಲು ಕೃಷಿ, ತೋಟಗಾರಿಕೆ ಮತ್ತು ಕಂದಾಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಲು ಮತ್ತು ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ತಹಶೀಲ್ದಾರ್ಗಳು ಪ್ರತಿ ವಾರ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ನೇತ್ರಾವತಿ ಅಣೆಕಟ್ಟು: ಮನಪಾಕ್ಕೆ ನೀರು ಸರಬರಾಜು ಮಾಡುವ ನೇತ್ರಾವತಿ ನೂತನ ಡ್ಯಾಂನಲ್ಲಿ 7+1 ಮೀಟರ್ ಎತ್ತರಕ್ಕೆ ನೀರು ಸಂಗ್ರಹ ಮಾಡಿದರೆ ಮನಪಾ ವ್ಯಾಪ್ತಿಯಲ್ಲಿ ನೀರಿನ ಬೇಡಿಕೆಯನ್ನು ನಿರ್ವಹಿಸಬಹುದು. ಈ ಹಿನ್ನೆಲೆಯಲ್ಲಿ ಮುಳುಗಡೆ ಜಮೀನಿನ ಸಂಪೂರ್ಣ ಮಾಹಿತಿ, ಬೆಳೆ ಮಾಹಿತಿಯನ್ನು ಈ ಮಾಸಾಂತ್ಯದೊಳಗೆ ಸಲ್ಲಿಸಲು ಜಿಲ್ಲಾಧಿಕಾರಿ ಡಾ.ಜಗದೀಶ್ ಬಂಟ್ವಾಳ ತಹಶೀಲ್ದಾರರಿಗೆ ಸೂಚಿಸಿದರು.
ಬೋರ್ವೆಲ್: ಜಿಪಂ ಉಪಕಾರ್ಯದರ್ಶಿ ಎನ್.ಆರ್. ಉಮೇಶ್ ಮಾತನಾಡಿ, ಮಂಗಳೂರು, ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕುಗಳಲ್ಲಿ ಖಾಸಗಿಯವರು ಬೋರ್ವೆಲ್ ಕೊರೆಯಲು ರಾಜ್ಯ ಸರಕಾರ ಅನುಮತಿ ನೀಡಿದೆ. ಆದರೆ ಇದಕ್ಕೆ ಸ್ಥಳೀಯ ಗ್ರಾಪಂಗಳಿಂದ ನಿರಾಪೇಕ್ಷಣೆ ಪತ್ರ ಕಡ್ಡಾಯವಾಗಿದೆ. ಅಲ್ಲದೆ ಸಾರ್ವಜನಿಕ ಕುಡಿಯುವ ನೀರಿನ 500 ಮೀಟರ್ ವ್ಯಾಪ್ತಿಯೊಳಗೆ ಬೋರ್ವೆಲ್ ಕೊರೆಯಲು ಅವಕಾಶವಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ತಹಶೀಲ್ದಾರ್ಗಳು, ತಾಪಂ ಇಒಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.







