ಬಂಟ್ವಾಳ : ರಾಷ್ಟ್ರೀಯ ಲೋಕಾದಾಲತ್ನಲ್ಲಿ 156 ವಿವಾದ ಪೂರ್ವ ವ್ಯಾಜ್ಯಗಳು ಇತ್ಯಾರ್ಥ
ಬಂಟ್ವಾಳ,ಫೆ.13: ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲ ಸಂಘ ಬಂಟ್ವಾಳ ಇದರ ಆಶ್ರಯದಲ್ಲಿ ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕಾದಾಲತ್ನಲ್ಲಿ 156 ವಿವಾದ ಪೂರ್ವ ವ್ಯಾಜ್ಯಗಳು ಇತ್ಯಾರ್ಥವಾಗಿದೆ ಎಂದು ವಕೀಲರ ಸಂಘದ ಪ್ರಕಟನೆ ತಿಳಿಸಿದೆ.
ತಾಲೂಕಿನ ಸಿಂಡಿಕೆಟ್ ಬ್ಯಾಂಕಿನ 8 ಶಾಖೆಗಳ ಮುಖ್ಯಸ್ಥರು ಈ ಅದಾಲತ್ನಲ್ಲಿ ಭಾಗವಹಿಸಿದ್ದು ಒಟ್ಟು 1,26,34,046 ರೂಪಾಯಿ ಸಾಲ ಮರುಪಾವತಿಯಾಗಿದೆ. ಜೊತೆಗೆ ಎಸ್ಬಿಐ ಮತ್ತು ಕಾರ್ಪೊರೇಶನ್ ಬ್ಯಾಂಕ್ಗಳ ಮುಖ್ಯಸ್ಥರು ಭಾಗವಹಿಸಿದ್ದು ಗ್ರಾಹಕರ ಸಾಲ ಮರು ಪಾವತಿಯಾಗಿದೆ.
ಹಾಗೆಯೇ ಹತ್ತು ಕ್ರಿಮಿನಲ್, 16 ಸಿವಿಲ್ ಪ್ರಕರಣಗಳು ಕೂಡಾ ಇತ್ಯರ್ಥವಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ್ ಯು., ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಆರ್. ಮಹೇಶ್ ಉಪಸ್ಥಿತರಿದ್ದು ನ್ಯಾಯವಾದಿಗಳಾದ ಅಶ್ವತ್ ಎನ್. ಮತ್ತು ಚಂದ್ರಶೇಖರ ಕೆ.ವಿ. ಅವರು ಸಂದಾನಕಾರರಾಗಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ವೆಂಕಟರಮನ ಶೆಣೈ, ಪ್ರಧಾನ ಕಾರ್ಯದರ್ಶಿ ರಾಜರಾಂ ನಾಯ್ಕಾ, ಕೋಶಾಧಿಕಾರಿ ವಿರೇಂದ್ರ ಎಂ., ಗೌರವ ಸಲಹೆಗಾರ ಎಂ.ಅಶ್ವನಿ ಕುಮಾರ್ ರೈ, ಪ್ಯಾನಲ್ ವಕೀಲರಾದ ಸತೀಶ್ ಬಿ. ಮತ್ತು ಸಕೀನಾ, ಸಿಂಡಿಕೆಟ್ ಬ್ಯಾಂಕಿನ ರೀಜನಲ್ ಕಚೇರಿಯ ಹಿರಿಯ ಮೆನೇಜರ್ ಸದಾಶಿವ, ವಸೂಲಾತಿ ಅಧಿಕಾರಿ ದೇವರಾಯ ಶೆಣೈ, ಬಂಟ್ವಾಳ ಶಾಖೆಯ ಸ್ವಪ್ನ ಭಾಸ್ಕರ್ ಮೊದಲಾದವರು ಉಪಸ್ಥಿತರಿದ್ದರು.







