ಸ್ಕೂಬಾ ಡೈವಿಂಗ್ ಕ್ರೀಡೆ ವಿರುದ್ಧ ಮೀನುಗಾರರ ಪ್ರತಿಭಟನೆ
12ಮಂದಿ ವಿರುದ್ಧ ಪ್ರಕರಣ ದಾಖಲು

ಭಟ್ಕಳ, ಫೆ.13: ಜಲಕ್ರೀಡೆಯಾದ ಸ್ಕೂಬಾ ಡೈವಿಂಗ್ ನಡೆಸುವುದಕ್ಕೆ ಉತ್ತರಕನ್ನಡ ಜಿಲ್ಲಾಡಳಿತದಿಂದ ಅನುಮತಿ ನೀಡಿರುವುದನ್ನು ವಿರೋಧಿಸಿ ನೂರಾರು ಮೀನುಗಾರರು ಪ್ರತಿಭಟನೆ ನಡೆಸಿದ ಘಟನೆ ರವಿವಾರ ಮುರುಡೇಶ್ವರದಲ್ಲಿ ನಡೆಯಿತು.
ಇದರಿಂದಾಗಿ ಸಮುದ್ರದಲ್ಲಿನ ಜೀವಸಂಕುಲಕ್ಕೆ ತೊಂದರೆಯಾಗುತ್ತದೆ ಎಂದು ನೂರಾರು ಮೀನುಗಾರರು ಆರೋಪಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಆದೇಶದ ವಿರುದ್ಧ ಪ್ರತಿಭಟನೆ ನಡೆಸಿದ ಹಾಗೂ ಪ್ರವಾಸಿಗರ ಮೇಲೆ ಹಲ್ಲೆಗೈದ ಆರೋಪದಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮುರುಡೇಶ್ವರದ ಶಾಂತಿ ಹರಿಕಂತ್ರ, ಕುಸುಮಾ ಹರಿಕಾಂತ, ಮಾದೇವಿ ಹರಿಕಾಂತ, ವನಿತಾ ಹರಿಕಾಂತ, ಜಯಶ್ರೀ ಹರಿಕಾಂತ, ಮೋಹಿನಿ ಹರಿಕಾಂತ, ರಾಘು ಹರಿಕಂತ್ರ, ಮಂಜು ಹರಿಕಾಂತ, ಈಶ್ವರ ಹರಿಕಾಂತ, ಮಂಜುನಾಥ ಹರಿಕಾಂತ, ಗೋಪಿ ಹರಿಕಾಂತ ಅವರ ಮೇಲೆ ಪ್ರಕರಣ ದಾಖಲಾಗಿದೆ.
ಘಟನೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಕಾರಣ ನೀಡಿ ಇಲ್ಲಿನ ನಾಡದೋಣಿ ಮೀನುಗಾರರ ಸಂಘಟನೆಯ ಅಧ್ಯಕ್ಷ ಕೃಷ್ಣ ನಾರಾಯಣ ಹರಿಕಾಂತ ಎಂಬವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಹಿನ್ನೆಲೆ: ಉತ್ತರಕನ್ನಡ ಜಿಲ್ಲಾಡಳಿತದಿಂದ ಅಧಿಕೃತ ಪರವಾನಿಗೆ ಪಡೆದ ಸ್ಕೂಬಾ ಡೈವಿಂಗ್ ಕ್ರೀಡೆಯ ವಿರುದ್ಧ ರವಿವಾರದಂದು ಪ್ರತಿಭಟನೆ ನಡೆಸಿದ ಸ್ಥಳೀಯ ಮೀನುಗಾರರು ನೇತ್ರಾಣಿ ದ್ವೀಪಜೀವ ವೈವಿಧ್ಯತೆಗೆ ಹೆಸರುವಾಸಿಯಾಗಿದೆ.
ಈ ದ್ವೀಪದ ಆಸುಪಾಸಿನಲ್ಲಿ ವಿಶಿಷ್ಟ ಜಾತಿಯ ಮೀನುಗಳು, ಮುತ್ತು, ಹವಳಗಳು ಹೇರಳವಾಗಿವೆೆ. ಈ ದ್ವೀಪದ ಬಳಿ ಸ್ಕೂಬಾ ಡೈವಿಂಗ್ ನಡೆಸುವುದರಿಂದ ಮೀನಿನ ಸಂತತಿಯ ಮೇಲೆ ಗಂಭೀರವಾದ ಪರಿಣಾಮ ಬೀರುತ್ತ್ತದೆ. ಇದು ನೈಸರ್ಗಿಕ ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವ ಮೀನುಗಾರರ ಬದುಕಿಗೂ ತೊಂದರೆಯನ್ನುಂಟು ಮಾಡುತ್ತಿದೆ ಎಂದು ಆರೋಪಿಸಿ ಪ್ರವಾಸಿಗರನ್ನು ಕೊಂಡೊಯ್ಯುತ್ತಿದ್ದ ಸ್ಕೂಬಾ ಡೈವಿಂಗ್ನ್ನು ನಿಲ್ಲಿಸಬೇಕು ಎಂದು ಪ್ರತಿಭಟನೆಗಿಳಿದ ಮಹಿಳೆಯರು ಪ್ರವಾಸಿಗರ ಮೇಲೆ ಹಲ್ಲೆಯನ್ನು ಮಾಡಲು ಮುಂದಾಗಿದ್ದರು ಎಂದು ಹೇಳಲಾಗುತ್ತಿದೆ.
ಸ್ಕೂಬಾ ಡೈವಿಂಗ್ ಪರವಾನಿಗೆಯ ಬಗ್ಗೆಯೂ ಅಧಿಕಾರಿಗಳು ದ್ವಂದ್ವದ ಹೇಳಿಕೆಯನ್ನು ನೀಡುತ್ತ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸ್ಕೂಬಾ ಡೈವಿಂಗ್ಗೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳಿಂದ ಅನುಮತಿಯನ್ನು ಪಡೆದುಕೊಂಡೇ ಸ್ಕೂಬಾ ಡೈವಿಂಗ್ಪ್ರವಾಸಿಗರನ್ನು ಕರೆದೊಯ್ಯುತ್ತಿರುವುದಾಗಿ ದೋಣಿಯ ಮಾಲಕರು ಹೇಳುತ್ತಿದ್ದಂತೆಯೇ ಜನರು ಇನ್ನಷ್ಟು ಕುಪಿತರಾಗಿ ದೋಣಿಯನ್ನು ದಡಕ್ಕೆ ಎಳೆಯಲು ಮುಂದಾದರು. ಇದರಿಂದ ಕೆಲ ಕಾಲ ಉದ್ವಿಗ್ನದ ವಾತಾವರಣ ನಿರ್ಮಾಣವಾಗಿತ್ತು.
ಪ್ರತಿಭಟನೆಯನ್ನು ಹಿಮ್ಮೆಟ್ಟಿಸಲು ಪೊಲೀಸರು ಲಘು ಲಾಠಿ ಪ್ರಹಾರಕ್ಕೆ ಮುಂದಾಗಿದ್ದರಾದರೂ, ಪ್ರತಿಭಟನಾಕಾರರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದ್ದುದರಿಂದ ಕಸಿವಿಸಿಗೊಂಡ ಪೊಲೀಸರು ಹಿಂದಡಿ ಇಟ್ಟರು. ಪ್ರತಿಭಟನೆ ಇನ್ನೊಂದು ಮಗ್ಗಲಿಗೆ ವಾಲುವ ಲಕ್ಷಣದ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕ ಮಂಕಾಳು ವೈದ್ಯ, ಜಿಪಂ ಸದಸ್ಯ ಆಲ್ಬರ್ಟ್ ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಸುದ್ದಿ ತಿಳಿದ ಪೊಲೀಸರು ಸಿಪಿಐ ಸುರೇಶ ನಾಯಕ್ ನೇತೃತ್ವದಲ್ಲಿ ಸ್ಥಳಕ್ಕೆ ದೌಡಿಯಿಸಿ ಬಂದು ಪ್ರತಿಭಟನಾಕಾರರನ್ನು ಚೆದುರಿಸಲು ಯತ್ನಿಸಿದರು. ಈ ಹಂತದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದ ನಡೆಯಿತು.
ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ: ಜಿಲ್ಲಾಧಿಕಾರಿ
ಜಿಲ್ಲಾಧಿಕಾರಿಯಿಂದ ಅಧಿಕೃತ ಆದೇಶ ಪಡೆದು ನಡೆಸುತ್ತಿರುವ ಸ್ಕೂಬಾ ಡೈವಿಂಗ್ನ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಈ ಪ್ರಕರಣಕ್ಕೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರಗಿಸಲು ಮುಂದಾಗಿದ್ದು, ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಮುರುಡೇಶ್ವರ ಪೊಲೀಸರಿಗೆ ಆದೇಶಿಸಿದ್ದ ಹಿನ್ನೆಲೆಯಲ್ಲಿ 12 ಮೀನುಗಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮುರುಡೇಶ್ವರ ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಭೇಟಿ ಮಾಡಲು ಬಂದ ಮೀನುಗಾರರನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಮೀನುಗಾರರಿಗೆ ಮೀಸಲಿಟ್ಟ ಪ್ರದೇಶದಲ್ಲಿ ಸ್ಕೂಬಾ ಡೈವಿಂಗ್ ಸಲಕರಣೆ ಇಡದಂತೆ ಮನವಿ







