ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಬಿಜೆಪಿಯಿಂದ ಟಿಕೆಟ್ ರಹಿತ ಪ್ರಯಾಣ ಚಳವಳಿ

ಕಾಸರಗೋಡು,ಫೆ.14: ಕಾಸರಗೋಡು - ಮಂಗಳೂರು ರೂಟಿನಲ್ಲಿ ಬಸ್ಸು ಪ್ರಯಾಣ ದರ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಕೆಎಸ್ಸಾರ್ಟಿಸಿ ಬಸ್ ಟಿಕೆಟ್ ರಹಿತ ಪ್ರಯಾಣ ಚಳವಳಿ ನಡೆಸಿದರು.
ತಲಪಾಡಿಯಲ್ಲಿ ಟೋಲ್ ವಸೂಲಿ ಆರಂಭಿಸಿದ ಬಳಿಕ ಕಾಸರಗೋಡು - ಮಂಗಳೂರು ನಡುವಿನ ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ದರವನ್ನು ಮೂರು ರೂ . ಹೆಚ್ಚಳ ಮಾಡಲಾಗಿದ್ದು , ಏಕಾ ಏಕಿ ಪ್ರಯಾಣ ದರ ಏರಿಕೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಳವಳಿ ಹಿನ್ನೆಲೆಯಲ್ಲಿ ಕಾಸರಗೋಡು ಡಿಪ್ಪೋದಿಂದ ಮಂಗಳೂರಿಗೆ ಹೊರಟ ಕೆಎಸ್ಸಾರ್ಟಿಸಿಯ ಬಸ್ ಗೆ ಜಿಲ್ಲಾಧ್ಯಕ್ಷ ಕೆ . ಶ್ರೀಕಾಂತ್ ನೇತೃತ್ವದ ಲ್ಲಿ 50 ರಷ್ಟು ಕಾರ್ಯಕರ್ತರು ಟಿಕೆಟ್ ಪಡೆಯದೆ ಪ್ರಯಾಣ ಬೆಳೆಸಿದರು.
ಮಂಗಳೂರಿಗೆ ಟಿಕೆಟ್ ದರವಾಗಿ ಹಿಂದಿನ ದರವಾದ 50 ರೂ . ನೀಡಿದರೂ ನಿರ್ವಾಹಕ 53 ರೂ . ನೀಡುವಂತೆ ಸ್ಪಷ್ಟಪಡಿಸಿದರು.
ಇದರಿಂದ ಪ್ರಯಾಣಿಕರು ಟಿಕೆಟ್ ಪಡೆಯದೆ ಪ್ರಯಾಣ ಬೆಳೆಸಿದರು. ಬಳಿಕ ಕುಂಬಳೆ ಪೊಲೀಸ್ ಠಾಣೆ ಸಮೀಪ ಪ್ರಯಾಣಿಕರನ್ನು ಇಳಿಸಲಾಯಿತು. ಪೊಲೀಸರು ಮಾತುಕತೆ ನಡೆಸಿದ ಬಳಿಕ ಕಾರ್ಯಕರ್ತರು ಹಿಂತಿರುಗಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪಿ .ಆರ್ ಸುನಿಲ್ , ಅನಿತಾ ಆರ್ . ನಾಯಕ್ , ಮಣಿಕಂಠ ರೈ, ನಂಜಿಲ್ ಕುಂಞಿ ರಾಮನ್, ಹರೀಶ್ ನಾರಂಪಾಡಿ, ಅನಿತಾ ಆರ್. ನಾಯಕ್, ಕೆ.ಕೆ. ಕಯ್ಯಾರು, ಕೆ.ಪಿ.ವಲ್ಸರಾಜ್, ಬಾಬುರಾಜ್ ಮೊದಲಾದವರು ನೇತೃತ್ವ ನೀಡಿದರು.
ಕಾಸರಗೋಡು - ಮಂಗಳೂರು ನಡುವಿನ ಕರ್ನಾಟಕ ಮತ್ತು ಕೇರಳ ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಲಾಗಿದೆ.
ಈ ಹಿಂದೆ ಕಾಸರಗೋಡಿನಿಂದ ಮಂಗಳೂರಿಗೆ 50 ರೂ . ಇದ್ದರೆ ಈಗ 53 ರೂ . ಗೆ ಏರಿಸಲಾಗಿದೆ.







