ಬಿಸಿಸಿಐ ಹಠಾತ್ ಬೌನ್ಸರ್ ಗೆ ಯೂಸುಫ್ ಪಠಾಣ್ ಔಟ್ !

ಹೊಸದಿಲ್ಲಿ, ಫೆ.15: ಆಲ್ರೌಂಡರ್ ಯೂಸುಫ್ ಪಠಾಣ್ಗೆ ಹಾಂಕಾಂಗ್ ಟ್ವೆಂಟಿ-20 ಲೀಗ್ನಲ್ಲಿ ಆಡಲು ನೀಡಿದ್ದ ನಿರಾಕ್ಷೇಪಣಾ ಪತ್ರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಹಿಂಪಡೆದ ವಿಚಾರ ಬೆಳಕಿಗೆ ಬಂದಿದೆ.
ವಿಶ್ವಕಪ್ ಜಯಿಸಿದ ಭಾರತ ತಂಡದ ಆಲ್ರೌಂಡರ್ಗಳಲ್ಲಿ ಒಬ್ಬರಾಗಿರುವ ಯೂಸುಫ್ ಪಠಾಣ್ ಅವರಿಗೆ ಆರಂಭದಲ್ಲಿ ಹಾಂಕಾಂಗ್ ಟ್ವೆಂಟಿ-20 ಲೀಗ್ನಲ್ಲಿ ಆಡಲು ಎನ್ಒಸಿ ನೀಡಲಾಗಿತ್ತು. ಆದರೆ ಬಳಿಕ ಕೆಲವು ಆಟಗಾರರು ಇದೇ ಮಾದರಿಯ ವಿದೇಶಿಟೂರ್ನಿಗಳಲ್ಲಿ ಆಡಲು ಆಸಕ್ತಿ ವಹಿಸಿದ ಕಾರಣಕ್ಕಾಗಿ ಬಿಸಿಸಿಐ ಪಠಾಣ್ಗೆ ನೀಡಿದ ಎನ್ಒಸಿ ಹಿಂಪಡೆದಿದೆ ಎಂದು ತಿಳಿದು ಬಂದಿದೆ.
ಹಾಂಕಾಂಗ್ ಲೀಗ್ನಲ್ಲಿ ಆಡಲು ಯೂಸುಫ್ ಪಠಾಣ್ ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದರೊಂದಿಗೆ ವಿದೇಶಿ ಲೀಗ್ನಲ್ಲಿ ಆಡಲಿರುವ ಭಾರತದ ಮೊದಲ ಪುರುಷ ಆಟಗಾರ ಎಂಬ ಕೀರ್ತಿಗೆ ಭಾಜನರಾಗಲಿದ್ದ ಯೂಸುಫ್ ಪಠಾಣ್ ಅವರಿಂದ ಎನ್ಒಸಿ ಹಿಂದಕ್ಕೆ ಹಿಂಪಡೆಯುವ ಮೂಲಕ ಆಘಾತ ನೀಡಿದೆ.
ಯೂಸುಫ್ ಪಠಾಣ್ ಅವರಂತೆ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರು ಕೆರೆಬಿಯನ್ ಲೀಗ್ನಲ್ಲಿ ಆಡುವ ಆಸಕ್ತಿ ವಹಿಸಿ ಅನುಮತಿಗಾಗಿ ಬಿಸಿಸಿಐಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಯನ್ನು ಬಿಸಿಸಿಐ ತಿರಸ್ಕರಿಸಿದೆ ಎಂದು ಗೊತ್ತಾಗಿದೆ.
ಪಠಾಣ್ಗೆ ಆಡಲು ಎನ್ಒಸಿ ನೀಡಿದರೆ ಬೇರೆ ಆಟಗಾರರು ಇವರ ಹಾದಿಯನ್ನೇ ಅನುಸರಿಸುತ್ತಾರೆ ಎಂಬ ಭೀತಿಯಿಂದಲೇ ಬಿಸಿಸಿಐ ಪಠಾಣ್ಗೆ ನೀಡಲಾಗಿದ್ದ ಎನ್ಒಸಿಯನ್ನು ರದ್ದು ಮಾಡಿದೆ ಎಂದು ತಿಳಿದು ಬಂದಿದೆ.







