ಕುಸ್ತಿಪಟು ಹೊಸಮನಿ ಕುಟುಂಬಕ್ಕೆ 5 ಲಕ್ಷ ರೂ.: ಪ್ರಮೋದ್
ಉಡುಪಿ, ಫೆ.15: ಧಾರವಾಡದಲ್ಲಿ ನಡೆದ ರಾಜ್ಯಒಲಿಂಪಿಕ್ಸ್ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ ಸಂದರ್ಭ ಮೂಳೆಮುರಿತಕ್ಕೊಳಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಕಾರಿಯಾಗದೇ ಮೃತಪಟ್ಟ ಯುವ ಉದಯೋನ್ಮುಖ ಕುಸ್ತಿಪಟು ಸಂತೋಷ ಹೊಸಮನಿ ಕುಟುಂಬಕ್ಕೆ ಇಲಾಖೆಯ ವತಿಯಿಂದ 5 ಲಕ್ಷ ರೂ. ಪರಿಹಾರವನ್ನು ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಪ್ರಮೋದ್ ಮಧ್ವರಾಜ್ ಘೋಷಿಸಿದರು.
ೆ.8ರಂದು 97ಕೆ.ಜಿ. ವಿಭಾಗದ ಗ್ರೀಕೊ-ರೋಮನ್ ಕುಸ್ತಿ ಸ್ಪರ್ಧೆ ಸೆಣಸಾಟದ ಸಂದರ್ಭ ಎದುರಾಳಿಗೆ ಚಿತ್ ನೀಡುವ ವೇಳೆ ಬಲಗಾಲಿನ ತೊಡೆಯಲ್ಲಿ 2-3 ಮೂಳೆ ಮುರಿತದಿಂದ ತೀವ್ರವಾಗಿ ಗಾಯಗೊಂಡಿದ್ದರು. ಕಿಮ್ಸ್ ಆಸ್ಪತ್ರೆಯಲ್ಲಿ ಅವರಿಗೆ ಶಸಚಿಕಿತ್ಸೆ ನಡೆಸಿದರೂ, ಹೊಸಮನಿ ನಿನ್ನೆ ಬೆಳಗ್ಗೆ ಹೃದಯಾಘಾತದಿಂದ ನಿಧನ ರಾಗಿದ್ದರು.
ಹೊಸಮನಿ ಚಿಕಿತ್ಸೆಗೆ ಎಲ್ಲ ವ್ಯವಸ್ಥೆಯನ್ನು ಇಲಾಖೆ ಮಾಡಿದ್ದು, ತಾವು ವೈದ್ಯರೊಂದಿಗೆ ಸತತ ಸಂಪರ್ಕದಲ್ಲಿರುವುದಾಗಿ ಪ್ರಮೋದ್ ತಿಳಿಸಿದರು. ಆದರೂ ಹೃದಯಾಘಾತದಿಂದ ಅವರು ನಿಧನರಾದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ ಸಚಿವರು, ಅವರ ಆಸ್ಪತ್ರೆಯ ಸಂಪೂರ್ಣ ಖರ್ಚು ವೆಚ್ಚವನ್ನು ಸರಕಾರ ಭರಿಸಲಿದೆ ಎಂದರು.
ಶೀಘ್ರದಲ್ಲೇ 5 ಲಕ್ಷ ರೂ. ಪರಿಹಾರ ಮೊತ್ತವನ್ನು ಅವರ ಕುಟುಂಬಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚುವರಿ ಪರಿಹಾರದ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಅವರು ತಿಳಿಸಿದರು.
ಸಂತೋಷ್ ಹೊಸಮನಿಗೆ ವೈದ್ಯರು ಉತ್ತಮ ಚಿಕಿತ್ಸೆ ನೀಡಿದ್ದಾರೆ. ಆದರೂ ವೈದ್ಯರ ನಿರ್ಲಕ್ಷದ ಬಗ್ಗೆ ದೂರು ಬಂದರೆ ತನಿಖೆ ಮಾಡುತ್ತೇವೆ ಎಂದು ಹೇಳಿದರು.







