ನನ್ನ ಮೇಲೆ ನಡೆದ ಶೂಟೌಟ್ಗೆ ಬಿಜೆಪಿ ಶಾಸಕ ಸಹಿತ ಮೂವರು ಕಾರಣ: ಕಡಬಗೆರೆ ಶ್ರೀನಿವಾಸ್

ಬೆಂಗಳೂರು, ಫೆ. 16: ನನ್ನ ಮೇಲೆ ನಡೆದ ಶೂಟೌಟ್ಗೆ ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಸೇರಿ ಮೂವರು ನೇರ ಕಾರಣ ಎಂದು ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಗಂಭೀರ ಆರೋಪ ಮಾಡಿದ್ದಾರೆ.
ಗುರುವಾರ ನಗರದ ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊಠಡಿಯಿಂದಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ.3ರಂದು ರೈತ ಸಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮನೆಗೆ ವಾಪಸ್ಸು ಆಗುತ್ತಿದ್ದ ವೇಳೆ ನಗರದ ಯಲಹಂಕ ಬಳಿಯ ಕೋಗಿಲು ಕ್ರಾಸ್ ಬಳಿ ಬೈಕ್ನಲ್ಲಿ ಬಂದ ಇಬ್ಬರು ನನ್ನ ಮೇಲೆ ಬಂದೂಕಿನಿಂದ ಮೂರು ಗುಂಡುಗಳನ್ನು ಹಾರಿಸಿ ಪರಾರಿಯಾದರು. ಅಲ್ಲದೆ, ಈ ಶೂಟೌಟ್ ಕೃತ್ಯದ ಹಿಂದೆ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಸೇರಿ ಮೂವರ ಕೈವಾಡವಿದೆ ಎಂದು ಆರೋಪಿಸಿದರು.
ಶೂಟೌಟ್ ಕೃತ್ಯದಲ್ಲಿ ಶಾಸಕ ವಿಶ್ವನಾಥ್, ಈತನ ಆಪ್ತ ಡಾನ್ ಸತೀಶ್ ಯಾನೆ ನಾಗಶೆಟ್ಟಿಹಳ್ಳಿ ಸತೀಶ್ ಹಾಗೂ ಬೂನ್ಬಾಬು ಯಾನೆ ರಾಜೇಂದ್ರ ಪ್ರಸಾದ್ ಭಾಗಿಯಾಗಿರುವ ಬಗ್ಗೆ ನನಗೆ ಶಂಕೆ ಇದೆ. ಅಲ್ಲದೆ, ನನಗೆ ಗೊತ್ತಿಲ್ಲದಿದ್ದಂತೆ ಗುಂಡಿನ ದಾಳಿ ನಡೆಸಿದರು. ಈ ಸಂಬಂಧ ಒಟ್ಟು ಐದು ಜನರ ವಿರುದ್ಧ ವಕೀಲರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ಕಡಬಗೆರೆ ಶ್ರೀನಿವಾಸ್ ತಿಳಿಸಿದರು.
ಬೂನ್ಬಾಬು ಎಂಬಾತ ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಗೆ ಸೇರಿದ್ದು, ಸತೀಶ್ ಈಗಾಗಲೇ ಪೊಲೀಸರ ವಶದಲ್ಲಿದ್ದಾನೆ. ಇನ್ನೂ ಪ್ರಕರಣ ಸಂಬಂಧ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಲ್ಲಿಬೇಕಾದರೂ, ಬರುತ್ತೇನೆ..!
‘ಈ ಶೂಟೌಟ್ ಕೃತ್ಯದಲ್ಲಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಕೈವಾಡವಿದೆ. ಈ ಸಂಬಂಧ ಎಲ್ಲಿ ಬೇಕಾದರೂ ಬಂದು ನಾನು ದೂರು ನೀಡುತ್ತೇನೆ ಎಂದು ಕಡಬಗೆರೆ ಶ್ರೀನಿವಾಸ್ ನುಡಿದರು’.
ಬಿಜೆಪಿ ಶಾಸಕ ಮೊದಲ ಆರೋಪಿ
‘ ಈ ಕೃತ್ಯಕ್ಕೆ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಮೊದಲ ಆರೋಪಿ ಎಂದು ಕಡಬಗೆರೆ ಶ್ರೀನಿವಾಸ್ ಗಂಭೀರವಾಗಿ ಆರೋಪ ಮಾಡಿದಲ್ಲದೆ, ಎಂಎಲ್ಎ ಮೈನ್, ಎಂಎಲ್ಎ ಮೈನ್ ಎಂದು ಸುದ್ದಿಗಾರರಿಗೆ ಹೇಳಿದರು.’







