ಕಾಂತಿ ಕಳೆದುಕೊಳ್ಳುತ್ತಿರುವ ಕಾನ್ಪುರ ಚರ್ಮೋದ್ಯಮ
![ಕಾಂತಿ ಕಳೆದುಕೊಳ್ಳುತ್ತಿರುವ ಕಾನ್ಪುರ ಚರ್ಮೋದ್ಯಮ ಕಾಂತಿ ಕಳೆದುಕೊಳ್ಳುತ್ತಿರುವ ಕಾನ್ಪುರ ಚರ್ಮೋದ್ಯಮ](https://www.varthabharati.in/sites/default/files/images/articles/2017/02/18/51fgfgfbfgg.jpg)
ಜಿಲ್ಲೆ ಇಂದಿಗೂ ಚರ್ಮ ಮತ್ತು ಚರ್ಮದ ಉತ್ಪನ್ನ ಅದರಲ್ಲೂ ಪ್ರಮುಖವಾಗಿ ಪಾದರಕ್ಷೆ ಉತ್ಪಾದನೆಯಲ್ಲಿ ದೇಶದಲ್ಲಿ ನಂಬರ್ ವನ್. ದೇಶದ ಒಟ್ಟು ಪಾದರಕ್ಷೆ ಘಟಕಗಳ ಪೈಕಿ 268 ಅಂದರೆ ಶೇ. 25ರಷ್ಟು ಕೈಗಾರಿಕೆಗಳು ಇಲ್ಲೇ ಇವೆ. ಭಾರತದ ಒಟ್ಟು ಚರ್ಮದ ಉತ್ಪನ್ನಗಳ ರಫ್ತಿನ ಪೈಕಿ ಶೇ. 40ರಷ್ಟು ಪಾದರಕ್ಷೆಗಳು. ಆ ಪೈಕಿ ಶೇ. 30ರಷ್ಟು ಕಾನ್ಪುರದಿಂದ ರಫ್ತಾಗುತ್ತವೆ. ತಮಿಳುನಾಡಿನ ವಿವಿಧ ವಿಭಾಗಗಳಿಂದ ಶೇ. 34ರಷ್ಟು ರಫ್ತಾಗುತ್ತಿವೆ. ಆದರೆ ನಗರದ ಜನಸಂಖ್ಯಾ ಪ್ರಗತಿ ಪ್ರಮಾಣ ಕುಸಿದಿರುವುದರಿಂದ, ದೊಡ್ಡ ಪ್ರಮಾಣದ ವಲಸೆ ಅನಿವಾರ್ಯವಾಗಿದೆ.
ಶಾದಬ್ ಹುಸೈನ್ (23) ತಮ್ಮ 11ನೆ ವಯಸ್ಸಿನಲ್ಲೇ ಶಾಲೆಗೆ ಗುಡ್ಬೈ ಹೇಳಿ, ದೇಶದ ಜನನಿಬಿಡ ರಾಜ್ಯದ ಅತೀ ಹಳೆಯ ಹಾಗೂ ಅತೀ ದೊಡ್ಡ ಕೈಗಾರಿಕಾ ನಗರವಾದ ಕಾನ್ಪುರದ ಚರ್ಮ ಫ್ಯಾಕ್ಟರಿ ಸೇರಿದ್ದರು. ತಂದೆ-ತಾಯಿ ಹಾಗೂ ನಾಲ್ವರು ಸಹೋದರ- ಸಹೋದರಿಯರಿಗೆ ನೆರವಾಗುವ ಸಲುವಾಗಿ ಉದ್ಯೋಗಕ್ಕೆ ಸೇರಿದ್ದರು. ದಿನಕ್ಕೆ 8 ಗಂಟೆ ದುಡಿಯುವ ಅವರು ಮಾಸಿಕ 9 ಸಾವಿರ ರೂಪಾಯಿ ವೇತನ ಪಡೆಯುತ್ತಾರೆ.
ಕಳೆದ ಎಂಟು ವರ್ಷಗಳಿಂದ ಅವರು ಅರೆ ಅನಕ್ಷರಸ್ಥ; ಆದರೆ ಚಿತ್ರಗಳಲ್ಲಿ ನೋಡಿದ ಹೊಸ ವಿನ್ಯಾಸದ ಶೂ ತಯಾರಿಸುವ ಅದ್ಭುತ ಕೌಶಲ ಅವರಲ್ಲಿದೆ. ಬೂಟು ಅತ್ಯಂತ ಸಮರ್ಪಕವಾಗಿ, ದೀರ್ಘಕಾಲ ಬಾಳಿಕೆ ಬರುವಂತೆ ಹಾಗೂ ಆರಾಮದಾಯಕವಾಗುವಂತೆ ಮಾಡುವುದರಲ್ಲಿ ಎತ್ತಿದ ಕೈ. ಆದರೆ ಅವರ ಕೌಶಲ, ಅವರಿಗೆ ಉದ್ಯೋಗ ಭಡ್ತಿಗೆ ಕಾರಣವಾಗಿಲ್ಲ. ಸಾಂದರ್ಭಿಕ ಕೆಲಸಗಾರನಾಗಿಯೇ ಉಳಿದಿರುವ ಅವರಿಗೆ ವೈದ್ಯಕೀಯ ಅಥವಾ ಇತರ ಸೌಲಭ್ಯಗಳಾಗಲೀ, ಪಿಂಚಣಿಯ ಖಾತ್ರಿಯಾಗಲೀ ಇಲ್ಲ. ದನದ ಚರ್ಮದ ನಡುವೆಯೇ ಅವರ ಕೆಲಸ. ಒಂದು ಕಾಲದಲ್ಲಿ ವಿಪುಲವಾಗಿ ಬೆಳೆದಿದ್ದ ಕಾನ್ಪುರದ ಚರ್ಮೋದ್ಯಮ ಈಗ ಕುಸಿಯುತ್ತಿದೆ. ಜಾಗತಿಕಮಟ್ಟದಲ್ಲಿ ಬೇಡಿಕೆ ಕುಸಿಯುತ್ತಿರುವುದು ಇದಕ್ಕೆ ಕಾರಣ. ಪರಿಸರ ನಿಯಂತ್ರಣ ಹಾಗೂ ಗೋ ರಾಜಕೀಯ ಕೂಡಾ ಈ ಉದ್ಯಮಕ್ಕೆ ವ್ಯತಿರಿಕ್ತವಾಗಿದೆ.
ಮೂರು ವರ್ಷದ ಹಿಂದೆ, ಯಾವುದೇ ಉತ್ತಮ ಭವಿಷ್ಯ ಅಥವಾ ಉತ್ತಮ ವೇತನ ಭಡ್ತಿಯ ಆಸೆ ಬಿಟ್ಟ ಹುಸೈನ್ ಹಾಗೂ ಮೊಹಲ್ಲಾದ ಐದು ಮಂದಿ ಸ್ನೇಹಿತರು ಉದ್ಯೋಗ ತೊರೆದರು. ಈಗ ಆತ ಆಟೊರಿಕ್ಷಾ ಚಾಲಕ. ಇತರರು ರಸ್ತೆ ಬದಿ ತಿಂಡಿತಿನಸುಗಳ ಮಳಿಗೆ ನಡೆಸುತ್ತಿದ್ದಾರೆ.
1990ರ ದಶಕದಲ್ಲಿ, ಕಾನ್ಪುರ ಚರ್ಮೋದ್ಯಮ ಹತ್ತು ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಉದ್ಯೋಗ ನೀಡಿತ್ತು. ಕಳೆದ 10 ವರ್ಷದಲ್ಲಿ 400 ಚರ್ಮ ಘಟಕಗಳ ಪೈಕಿ 176 ಬಾಗಿಲು ಹಾಕಿವೆ ಎಂದು ಉನ್ನತ ಮೂಲಗಳು ಹೇಳಿವೆ. ಆಟೊರಿಕ್ಷಾದಿಂದ ತಿಂಗಳಿಗೆ 15ರಿಂದ 20 ಸಾವಿರ ಬರುತ್ತದೆ. ಆದರೆ ಬರುವ ಆದಾಯ ನಿಯತವಲ್ಲ. ಈ ಹಿನ್ನೆಲೆಯಲ್ಲಿ ಹುಸೈನ್ ಈಗ ನೋಯ್ಡೆದ ಕಂಪೆನಿಯೊಂದರಲ್ಲಿ ಬೂಟಿನ ಮೇಲ್ಭಾಗದ ವಿನ್ಯಾಸ ಮತ್ತು ಜೋಡಣೆಯ ಕೆಲಸಕ್ಕೆ ಮುಂದಾಗಿದ್ದಾರೆ.
‘‘ಇವರು 12 ಸಾವಿರ ವೇತನ ನೀಡುತ್ತಾರೆ. ಆದರೆ ಕೆಲಸದ ವಾತಾವರಣ ಚೆನ್ನಾಗಿದೆ. ಹವಾನಿಯಂತ್ರಿತ ಕಾರ್ಯಾಗಾರದಲ್ಲಿ ಕೆಲಸ. ವಿತರಣಾ ವಲಯವನ್ನು ನಿರ್ವಹಿಸುವ ಉದ್ಯೋಗ. ಇದರಿಂದ ವಿವಾಹದ ಅವಕಾಶವೂ ಹೆಚ್ಚಿದೆ.
‘‘ನಾನು ಎಷ್ಟು ದಿನಗಳ ಕಾಲ ಆಟೊ ಓಡಿಸುತ್ತಾ ಜೀವನ ಸಾಗಿಸಲು ಸಾಧ್ಯ? ದೀರ್ಘಾವಧಿಯಲ್ಲಿ ನನಗೂ ಒಳ್ಳೆಯ ಉದ್ಯೋಗ ಬೇಡವೇ?’’ ಎಂದು ಅವರು ಪ್ರಶ್ನಿಸುತ್ತಾರೆ. 15 ರಿಂದ 34 ವರ್ಷ ವಯಸ್ಸಿನ 7 ಕೋಟಿ ನಿರುದ್ಯೋಗಿಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಹುಸೈನ್ ಕಥೆಯಂಥ ಹಲವು ಕಥೆಗಳು ಕಾಣಸಿಗುತ್ತವೆ. ಅಂದರೆ ಭಾರತದ ಪ್ರತೀ ನಾಲ್ವರು ನಿರುದ್ಯೋಗಿಗಳ ಪೈಕಿ ಒಬ್ಬರು ಉತ್ತರಪ್ರದೇಶದವರು. ಇಲ್ಲಿನ ಸರಾಸರಿ ವಯಸ್ಸು 23. ಇದು ಈ ಚುಣಾವಣೆಯ ಪ್ರಮುಖ ವಿಷಯಗಳಲ್ಲೊಂದು.
ಕೈಗಾರಿಕೆ ಇಳಿಮುಖ
13.8 ಕೋಟಿ ಮತದಾರರಿರುವ ಉತ್ತರಪ್ರದೇಶದಂಥ ರಾಜ್ಯಗಳಲ್ಲಿ ಹುಸೈನ್ನಂಥ ಯುವಜನತೆಗೆ ಉದ್ಯೋಗ ಒದಗಿಸಲು ಉತ್ತರ ಪ್ರದೇಶ ಏಕೆ ವಿಫಲವಾಗುತ್ತಿದೆ ಎನ್ನುವುದನ್ನು ಕೆದಕಿದರೆ, ಕಾನ್ಪುರದ ಮುಂಚೂಣಿ ಉದ್ಯಮವಾದ ಚರ್ಮೋದ್ಯಮ ನೆಲ ಕಚ್ಚಿರುವುದು ಮುಖ್ಯ ಕಾರಣ ಎಂದು ತಿಳಿದುಬರುತ್ತದೆ.
ಕಾನ್ಪುರದ ಹಣಕಾಸು ವ್ಯವಸ್ಥೆ ಸರಿಹೋಗುವುದು ಉತ್ತರ ಪ್ರದೇಶಕ್ಕೆ ಅನಿವಾರ್ಯ. ರಾಜ್ಯದ ಜಿಡಿಪಿಯಲ್ಲಿ ಶೇ. 4ರಷ್ಟು ಪಾಲು ಅಂದರೆ 19 ಸಾವಿರ ಕೋಟಿ ಈ ನಗರದ ಕೊಡುಗೆ. ರಾಜ್ಯದ ಒಟ್ಟು ಜಿಡಿಪಿ 4.6 ಲಕ್ಷ ಕೋಟಿ ರೂಪಾಯಿ ಎಂದು ಉತ್ತರ ಪ್ರದೇಶದ ಅಧಿಕೃತ ಅಂಕಿ ಅಂಶಗಳು ತಿಳಿಸುತ್ತವೆ. ಲಕ್ನೋ, ಆಗ್ರಾ ಹಾಗೂ ಗೌತಮಬುದ್ಧ ಜಿಲ್ಲೆಗಳನ್ನು ಬಿಟ್ಟರೆ, ಜಿಡಿಪಿಗೆ ಅತೀ ಹೆಚ್ಚು ಕೊಡುಗೆ ನೀಡುವ ಜಿಲ್ಲೆ ಇದು.
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 2ರಷ್ಟು ಜನಸಂಖ್ಯೆ ಹೊಂದಿರುವ ಈ ಜಿಲ್ಲೆಯಲ್ಲಿ ಶೇ. 6ರಷ್ಟು ಉದ್ಯೋಗಿಗಳಿದ್ದಾರೆ ಎನ್ನುವುದು 2012-13ರ ಆರ್ಥಿಕ ಜನಗಣತಿಯಿಂದ ತಿಳಿದು ಬರುತ್ತದೆ. ಕೇವಲ ನೋಯ್ಡಾದಲ್ಲಿ ಮಾತ್ರ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಇಲ್ಲಿ ಇಡೀ ರಾಜ್ಯದ ಶೇ. 10ರಷ್ಟು ಉದ್ಯೋಗಿಗಳನ್ನು ಹೊಂದಿದೆ.
ದೇಶದ ಒಟ್ಟು ಉದ್ಯೋಗಿಬಲದಲ್ಲಿ (15ರಿಂದ 34 ವರ್ಷ) ಶೇ. 16ರಷ್ಟು ಭಾಗವನ್ನು ಉತ್ತರ ಪ್ರದೇಶ ಹೊಂದಿದೆ. ಅಂತೆಯೇ ದೇಶದ 5-14 ವರ್ಷ ವಯೋಮಿತಿಯವರಲ್ಲಿ ಶೇ. 20ರಷ್ಟು ಮಕ್ಕಳು ಈ ರಾಜ್ಯದಲ್ಲಿದ್ದಾರೆ. ಮುಂದಿನ ದಶಕದಲ್ಲಿ ಇವರು ಉದ್ಯೋಗ ಮಾರುಕಟ್ಟೆಗೆ ಬರುತ್ತಾರೆ. ಉತ್ತರ ಪ್ರದೇಶದ ಒಟ್ಟು ಮತದಾರರಲ್ಲಿ ಶೇ. 45ರಷ್ಟು ಮಂದಿ 35 ವರ್ಷಕ್ಕಿಂತ ಕೆಳಗಿನವರು ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಯ ವೆಬ್ಸೈಟ್ ಹೇಳುತ್ತದೆ. ಬಿಹಾರದ ಜತೆಗೆ ಉತ್ತರಪ್ರದೇಶ ದೇಶದಲ್ಲೇ ಅತ್ಯಧಿಕ ಯುವ ಮತದಾರರ ಸಮೂಹ ಹೊಂದಿರುವ ರಾಜ್ಯ.
ಆದರೆ ಇಲ್ಲಿನ ಮಕ್ಕಳ ಭವಿಷ್ಯ ಉತ್ತಮವಾಗಿಲ್ಲ. ಹುಸೈನ್ನಂತೆ ರಾಜ್ಯದ ಪ್ರತೀ 100 ವಿದ್ಯಾರ್ಥಿಗಳ ಪೈಕಿ 9 ಮಂದಿ, ನಾಲ್ಕನೆ ತರಗತಿಗೆ ಮುನ್ನವೇ ಶಾಲೆ ಬಿಡುತ್ತಾರೆ.
ದೇಶದ ಅತೀ ದೊಡ್ಡ ರಾಜ್ಯದಲ್ಲಿ ಶಾಲೆ ಬಿಡುವ ಮಕ್ಕಳ ಪ್ರಮಾಣವೂ ಅತ್ಯಧಿಕ ಎಂದು ಜಿಲ್ಲಾ ಮಾಹಿತಿ ವ್ಯವಸ್ಥೆಯ ಅಂಕಿ ಅಂಶ ಹೇಳುತ್ತದೆ. ರಾಜ್ಯದಲ್ಲಿ 39 ವಿದ್ಯಾರ್ಥಿಗಳಿಗೆ ಕೇವಲ ಒಬ್ಬರು ಶಿಕ್ಷಕರಿದ್ದಾರೆ.
ರಾಜ್ಯದಲ್ಲಿ 70 ದಶಲಕ್ಷ ಅರೆ ಶಿಕ್ಷಿತ ವರ್ಗಕ್ಕೆ ಕೈಗಾರಿಕಾ ವಲಯದಲ್ಲಿ ಯಾವ ಅವಕಾಶವೂ ಇಲ್ಲ. ಹಿಂದೆ ಉದ್ಯೋಗದಲ್ಲಿದ್ದ ಹುಸೈನ್ನಂಥ ಹಲವು ಮಂದಿ ಬೇರೆಡೆಗೆ ತೆರಳುತ್ತಿದ್ದಾರೆ.
ಕಳೆಗುಂದಿದ್ದು ಹೇಗೆ?
ರಾಜರ ಕಾಲದಿಂದಲೇ ಕಾನ್ಪುರ ಭಾರತದ ಮುಂಚೂಣಿ ನಗರಗಳ ಪೈಕಿ ಒಂದು. 1907ರಲ್ಲೇ ಮುಂಬೈ ಜತೆಗೆ ಮೊದಲ ಎಲೆಕ್ಟ್ರಿಕ್ ರೈಲು ಇಲ್ಲಿ ಓಡಿತ್ತು. ಕೊಲ್ಕತ್ತಾದಲ್ಲಿ ರೈಲು ಸೇವೆ ಆರಂಭವಾದ ಏಳೇ ವರ್ಷಗಳಲ್ಲಿ ಕಾನ್ಪುರ ಈ ಸಾಧನೆ ಮಾಡಿತ್ತು.
ದೇಶದ ಮೊದಲ ಜವಳಿ ಕಂಪೆನಿ ‘ಎಲ್ಜಿನ್ ಮಿಲ್ಸ್’ ಮೊದಲ ಸ್ವಾತಂತ್ರ್ಯ ಸಂಗ್ರಾಮವಾದ ಐದೇ ವರ್ಷಗಳಲ್ಲಿ ಇಲ್ಲಿ ಆರಂಭವಾಯಿತು. ಇದು 20ನೆ ಶತಮಾನದ ಆರಂಭದೊಳಗೆ 9 ಹೊಸ ಜವಳಿ ಉದ್ದಿಮೆಗಳ ಬೆಳವಣಿಗೆಗೆ ಕಾರಣವಾಯಿತು. ಈ ಮೂಲಕ ಕಾನ್ಪುರ ಉತ್ತರ ಭಾರತದ ಅತೀ ದೊಡ್ಡ ಕೈಗಾರಿಕಾ ನಗರವಾಗಿ ರೂಪುಗೊಂಡಿತು.
ಸ್ವಾತಂತ್ರ್ಯದ ಬಳಿಕ, ಕಾನ್ಪುರದ ಪ್ರಮುಖ ಕೈಗಾರಿಕೆಗಳ ಬೆಳವಣಿಗೆಗೆ ತಡೆ ಉಂಟಾಯಿತು. 1970ರ ದಶಕದಲ್ಲಿ ರಾಷ್ಟ್ರೀಕರಣದ ಬಳಿಕ ಜವಳಿ ಕಾರ್ಖಾನೆಗಳು ಅವನತಿಯತ್ತ ಸಾಗಿದವು. 1876ರಲ್ಲಿ ಬ್ರಿಟಿಷ್ ಇಂಡಿಯಾ ಕಾರ್ಪೊರೇಷನ್ ಆರಂಭಿಸಿದ್ದ ಇತರ ದೊಡ್ಡ ಕಾನ್ಪುರ ಬ್ರಾಂಡ್ ಎನಿಸಿದ ‘ಲಾಲ್ಮಲಿ ಬ್ಲಾಂಕೆಟ್ಸ್’ ಕೂಡಾ ನಿಧಾನವಾಗಿ ಸತ್ತಿತು. ಆ ಬಳಿಕ ಕಾನ್ಪುರದ ಉತ್ಪಾದನಾ ವಲಯವನ್ನು ಕೈ ಹಿಡಿದದ್ದು ಚರ್ಮೋದ್ಯಮ.
ಜಿಲ್ಲೆ ಇಂದಿಗೂ ಚರ್ಮ ಮತ್ತು ಚರ್ಮದ ಉತ್ಪನ್ನ ಅದರಲ್ಲೂ ಪ್ರಮುಖವಾಗಿ ಪಾದರಕ್ಷೆ ಉತ್ಪಾದನೆಯಲ್ಲಿ ದೇಶದಲ್ಲಿ ನಂಬರ್ ವನ್. ದೇಶದ ಒಟ್ಟು ಪಾದರಕ್ಷೆ ಘಟಕಗಳ ಪೈಕಿ 268 ಅಂದರೆ ಶೇ. 25ರಷ್ಟು ಕೈಗಾರಿಕೆಗಳು ಇಲ್ಲೇ ಇವೆ. ಭಾರತದ ಒಟ್ಟು ಚರ್ಮದ ಉತ್ಪನ್ನಗಳ ರಫ್ತಿನ ಪೈಕಿ ಶೇ. 40ರಷ್ಟು ಪಾದರಕ್ಷೆಗಳು. ಆ ಪೈಕಿ ಶೇ. 30ರಷ್ಟು ಕಾನ್ಪುರದಿಂದ ರಫ್ತಾಗುತ್ತವೆ. ತಮಿಳುನಾಡಿನ ವಿವಿಧ ವಿಭಾಗಗಳಿಂದ ಶೇ. 34ರಷ್ಟು ರಫ್ತಾಗುತ್ತಿದೆ. ಆದರೆ ನಗರದ ಜನಸಂಖ್ಯಾ ಪ್ರಗತಿ ಪ್ರಮಾಣ ಕುಸಿದಿರುವುದರಿಂದ, ದೊಡ್ಡ ಪ್ರಮಾಣದ ವಲಸೆ ಅನಿವಾರ್ಯವಾಗಿದೆ.
2011ರಲ್ಲಿ ಕೊನೆಗೊಂಡ ದಶಕದಲ್ಲಿ ಉತ್ತರ ಪ್ರದೇಶದ ಜನಸಂಖ್ಯೆ ಶೇ. 20ರಷ್ಟು ಬೆಳೆದಿದೆ. ಉತ್ತರ ಪ್ರದೇಶದ ದೊಡ್ಡ ನಗರಗಳೆನಿಸಿದ ಲಕ್ನೋ, ಆಗ್ರಾ ಹಾಗೂ ಮೀರಠ್ನಲ್ಲೂ ಈ ಸಂಖ್ಯೆಗೆ ಹತ್ತಿರ ಪ್ರಮಾಣದ ಬೆಳವಣಿಗೆ ಇದೆ. ಏಳು ದಶಕಗಳ ಕಾಲದಲ್ಲಿ ಶೇ. 20ರಷ್ಟು ಪ್ರಗತಿ ಸಾಧಿಸಿದ್ದ ಕಾನ್ಪುರದಲ್ಲಿ ಪ್ರಗತಿದರ ಶೇ. 9 ಇದೆ. ನೋಯ್ಡಿದ ಬೆಳವಣಿಗೆ ದರ ಶೇ. 40ರಷ್ಟಿದೆ. ಇದು ಕ್ಷಿಪ್ರ ಅಭಿವೃದ್ಧಿಯನ್ನು ಸೂಚಿಸುತ್ತದೆ.
ಕುಸಿದ ಜಾಗತಿಕ ಬೇಡಿಕೆ
ಚರ್ಮದ ಜಾಗತಿಕ ಬೇಡಿಕೆ 2014ರ ಬಳಿಕ ಕುಸಿದಿದೆ. ಅದರಲ್ಲೂ ಪ್ರಮುಖವಾಗಿ ಶ್ರೀಮಂತ ದೇಶಗಳಿಂದ ಬೇಡಿಕೆ ಪ್ರಮಾಣ ಕಡಿಮೆಯಾಗಿದೆ. ಯೂರೋಪಿಯನ್ ಆರ್ಥಿಕತೆ ಹಾಗೂ ಚೀನಾ ಆರ್ಥಿಕತೆಯಿಂದ ಇದನ್ನು ಅಳೆಯಬಹುದು. ಭಾರತದಿಂದ ಚರ್ಮ ರಫ್ತು 2015-16ರಲ್ಲಿ ಶೇ. 4ರಷ್ಟು ಕಡಿಮೆಯಾಗಿದೆ. ಆದರೆ ಇದೇ ವೇಳೆ ಕಾನ್ಪುರದಿಂದ ಆಗುವ ರಫ್ತು ಪ್ರಮಾಣ ಶೇ. 11ರಷ್ಟು ಕುಸಿದಿದೆ. ಹದಮಾಡಿದ ಚರ್ಮದ ಉತ್ಪನ್ನ ಕ್ಷೇತ್ರದಲ್ಲಿ ಕಾನ್ಪುರ ಪ್ರಮಾಣ ಗಣನೀಯವಾಗಿ ಕುಸಿದಿದೆ.
‘‘ಯೂರೋಪ್ ಹಾಗೂ ಇತರ ದೇಶಗಳಿಂದ ಇದ್ದ ಬೇಡಿಕೆ ಕಳೆದ ಒಂದು ದಶಕದಿಂದ ಕುಸಿದಿದೆ’’ ಎಂದು ಚರ್ಮ ರಫ್ತು ಮಂಡಳಿ ಪ್ರಾದೇಶಿಕ ನಿರ್ದೇಶಕ ಅಲಿ ಅಹ್ಮದ್ ಹೇಳುತ್ತಾರೆ.
ಇದರ ಜತೆಗೆ ಪರಿಸರ ನಿಯಮಾವಳಿಗಳನ್ನು ಟ್ಯಾನರಿಗಳ ಮೇಲೆ ಕಟ್ಟುನಿಟ್ಟಾಗಿ ಹೇರುತ್ತಿರುವುದು ಕೂಡಾ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿವೆ. 2010ರಲ್ಲಿ ಹಸಿರುಪೀಠ ನಿರ್ಮಾಣವಾದ ಬಳಿಕ ಕಾನ್ಪುರದ 400 ಟ್ಯಾನರಿಗಳ ಪೈಕಿ 128 ಮುಚ್ಚಿವೆ. ಚರ್ಮದ ಫ್ಯಾಕ್ಟರಿಗಳ ವಿರುದ್ಧ ಕನಿಷ್ಠ 500 ಪ್ರಕರಣಗಳು ಎನ್ಜಿಟಿ ಎದುರು ಬಾಕಿ ಇವೆ.
‘‘ಚರ್ಮ ಹದಮಾಡುವ ಘಟಕಗಳು ಮಾಲಿನ್ಯಕಾರಕ. ಜೈವಿಕ ಹಾಗೂ ಅಜೈವಿಕ ತ್ಯಾಜ್ಯಗಳು ಹಾಗೂ ಘನ ಅಂಶಗಳು ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ’’ ಎಂದು 2007ರ ಪರಿಸರ ವರದಿ ಹೇಳುತ್ತದೆ. ಚರ್ಮ ಹದಮಾಡಲು ಬಳಸುವ ರಾಸಾಯನಿಕಗಳು ಹೀರಿಕೊಳ್ಳದೆ, ವಾತಾವರಣಕ್ಕೆ ಬಿಡಲ್ಪಡುತ್ತವೆ.
ಗೋರಾಜಕೀಯ
2014ರ ಪೂರ್ವದಲ್ಲಿ ಕಾನ್ಪುರದ ಅತೀದೊಡ್ಡ ಕಸಾಯಿಖಾನೆಗೆ 1000 ಹಸುಗಳನ್ನು ತರಲಾಗುತ್ತಿತ್ತು. ಕಳೆದ ವರ್ಷ ಅಂದರೆ ಗೋ ರಾಜಕೀಯ ಆರಂಭವಾಗಿ ಮೂರು ವರ್ಷ ಕಳೆದ ಬಳಿಕ ಇದು 500ಕ್ಕೆ ಇಳಿದಿವೆ. ನೋಟುಬಂದಿ ಬಳಿಕವಂತೂ ಈ ಪ್ರಮಾಣ 100ಕ್ಕೆ ಕುಸಿದಿದೆ ಎಂದು ಕೈಗಾರಿಕಾ ಮೂಲಗಳು ಹೇಳುತ್ತವೆ. ಇದು ಅತ್ಯಂತ ಸೂಕ್ಷ್ಮ ವಿಷಯವಾಗಿರುವುದು ಇದಕ್ಕೆ ಕಾರಣ.
‘‘ಹಸುಗಳು ಈಗ ರೈತರಿಗೆ ಹೊರೆಯಾಗಿ ಪರಿಣಮಿಸಿವೆ. ಆದರೆ ವಾಸ್ತವವಾಗಿ ಇದು 12 ಕೈಗಾರಿಕೆಗಳಿಗೆ ಸಂಬಂಧಪಟ್ಟಿದೆ’’ ಎನ್ನುವುದು ಉತ್ತರ ಪ್ರದೇಶ ಚರ್ಮೋದ್ಯಮ ಸಂಘದ ಉಪಾಧ್ಯಕ್ಷ ರಾಜ್ ಅಹ್ಮದ್ ಅವರ ಅನಿಸಿಕೆ. ಔಷಧ, ಜಿಲೆಟಿನ್ ಮತ್ತಿತರ ಕ್ಷೇತ್ರಗಳಲ್ಲಿ ಹಸುವಿನ ಚರ್ಮ ಬಳಕೆಯಾಗುತ್ತದೆ. ಚರ್ಮ ಮತ್ತು ಕೊಂಬನ್ನು ಕೂಡಾ ವಿವಿಧ ಉದ್ದೇಶಕ್ಕೆ ಬಳಸಲಾಗುತ್ತದೆ.
ಸಣ್ಣ ಉದ್ಯಮಿಗಳಿಗೆ ಸಂಕಷ್ಟ
ಚರ್ಮೋದ್ಯಮ ಕುಸಿತವಾಗಿರುವುದು ಸಣ್ಣ ಉದ್ಯಮಿಗಳ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. ‘‘ಫ್ಯಾಶನ್ ಉದ್ಯಮದಲ್ಲೂ ಈಗ ಚರ್ಮ ದುಬಾರಿ ಸರಕು ವರ್ಗಕ್ಕೆ ಸೇರಿದೆ’’ ಎಂದು ಕಾನ್ಪುರದ ಸಾಂಪ್ರದಾಯಿಕ ಸಣ್ಣ ಕೈಗಾರಿಕೆಗಳಿರುವ ಬೇಗಮ್ಗಂಜ್ನ ಮುಹಮ್ಮದ್ ರಯೀಸ್ ಅಭಿಪ್ರಾಯಪಡುತ್ತಾರೆ. ‘‘ಅಗ್ಗದ ಫೂಟ್ವೇರ್ ಹಾಗೂ ಮಹಿಳೆಯರ ಪರ್ಸ್ಗಳನ್ನು ಈಗ ಹೊಸದಾಗಿ ಅಭಿವೃದ್ಧಿಪಡಿಸಿದ ಪಾಲಿಮರ್ನಿಂದ ಅಗ್ಗದ ದರದಲ್ಲಿ ಸಿದ್ಧಪಡಿಸಬಹುದು’’ ಎಂದು ಅವರು ಹೇಳುತ್ತಾರೆ.
ಬೇಗಮ್ಗಂಜ್ ಹಾಗೂ ಪಕ್ಕದ ಚಮನ್ಗಂಜ್ನಲ್ಲಿ ಕನಿಷ್ಠ 1000 ಚರ್ಮದ ಘಟಕಗಳಿವೆ. ಸಣ್ಣ ಉದ್ಯಮಿಗಳು ಬದಲಾಗುವ ಅಗತ್ಯಕ್ಕೆ ಅನುಗುಣವಾಗಿ ಹಾಗೂ ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಬದಲಾವಣೆ ಮಾಡುತ್ತಾರೆ. ಇದೀಗ ಅಗ್ಗದ ವಸ್ತುಗಳನ್ನು ಜನ ಬಯಸುತ್ತಿದ್ದು, ಈ ಬದಲಾವಣೆಗೂ ಒಗ್ಗಿಕೊಳ್ಳಬೇಕಾಗುತ್ತದೆ.
ಬೇಗಮ್ಗಂಜ್ನಲ್ಲಿ, ಏಕೈಕ ಕುಟುಂಬದ ಬೂಟು ತಯಾರಿಕಾ ಕಂಪೆನಿ ಉಳಿದುಕೊಂಡಿದ್ದು, ಗುಡ್ಡು ಮುಹಮ್ಮದ್ (50) ಹಾಗೂ ನಾಲ್ವರು ಕೆಲಸಗಾರರು ಮಾತ್ರ ಉಳಿದುಕೊಂಡಿದ್ದಾರೆ. ‘‘ನಾನು ಬಾಲ್ಯದಲ್ಲಿದ್ದಾಗ ಇಂಥ ಹಲವು ಘಟಕಗಳಿದ್ದವು’’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ದೊಡ್ಡ ಪ್ರಮಾಣದ ಕೈಗಾರಿಕಾ ಕ್ರಾಂತಿಯಿಂದಾಗಿ, ಸಣ್ಣ ಬೂಟು ತಯಾರಿಕಾ ಘಟಕಗಳು ಮುಚ್ಚಿವೆ. ಇದರಿಂದಾಗಿ ಈ ಕ್ಷೇತ್ರ ಎಲ್ಲ ಕೌಶಲಭರಿತ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದು ಅಸಾಧ್ಯ.
scroll.in