ರೋಹಿತ್ ದಲಿತನಾಗಿದ್ದ ಎನ್ನುವುದನ್ನು ಸ್ಪಷ್ಟಪಡಿಸಿದ್ದ ಅಜ್ಜನ ಪತ್ರ ಬಹಿರಂಗ
ಹೈದರಾಬಾದ್,ಫೆ.18: ಆತ್ಮಹತ್ಯೆ ಮಾಡಿಕೊಂಡಿದ್ದ ಹೈದರಾಬಾದ್ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ದಲಿತನಾಗಿರಲಿಲ್ಲ ಎಂಬ ನಿರ್ಧಾರಕ್ಕೆ ಬರುವ ಮೂಲಕ ಗುಂಟೂರು ಜಿಲ್ಲಾಡಳಿತವು ವಿವಾದವೊಂದನ್ನು ಸೃಷ್ಟಿಸಿ ಹೆಚ್ಚು ದಿನಗಳನ್ನು ಕಳೆದಿಲ್ಲ. ಇದೀಗ ರೋಹಿತ್ ದಲಿತನಾಗಿದ್ದ ಎಂದು ಸ್ಪಷ್ಟಪಡಿಸಿ ಅವರ ಅಜ್ಜ ಕಳೆದ ವರ್ಷದ ಜೂನ್ನಲ್ಲಿ ಗುಂಟೂರು ಜಿಲ್ಲಾಧಿಕಾರಿ ಕಾಂತಿಲಾಲ್ ದಾಂಡೆ ಅವರಿಗೆ ಬರೆದಿದ್ದ ಪತ್ರವು ಬಹಿರಂಗಗೊಂಡಿದೆ.
‘‘ರೋಹಿತ್ನ ತಾಯಿ ರಾಧಿಕಾ ವೇಮುಲಾ ನನ್ನ ಮಗ ಮಣಿ ಕುಮಾರನಿಂದ ವಿಚ್ಛೇದನ ಪಡೆದ ಬಳಿಕ ನಾನು ಅಪರೂಪಕ್ಕೆ ಆಕೆಯನ್ನು ಭೇಟಿಯಾಗುತ್ತಿದ್ದೆ. ಅವಳೊಮ್ಮೆ ಪಾರ್ಶ್ವವಾಯುವಿಗೆ ತುತ್ತಾಗಿದ್ದು ಗೊತ್ತಾದ ಬಳಿಕ ಆಕೆಯನ್ನು ನೋಡಲು ಹೋಗಿದ್ದೆ. ಆ ವೇಳೆ ರಾಧಿಕಾ ನಮ್ಮ ವಡ್ಡೇರ ಸಮುದಾಯಕ್ಕೆ ಸೇರಿದವಳಲ್ಲ,ಮಾಲ ಪರಿಶಿಷ್ಟ ಜಾತಿಗೆ ಸೇರಿದವಳು ಎನ್ನುವುದು ನನಗೆ ತಿಳಿದು ಬಂದಿತ್ತು. ರಾಧಿಕಾ ನನ್ನ ಕುಟುಂಬದ ಅಥವಾ ನನ್ನ ಮಗ(ಮಾಜಿ ಪತಿ)ನ ಯಾವುದೇ ನೆರವಿಲ್ಲದೆ ತನ್ನ ಮಕ್ಕಳನ್ನು ಬೆಳೆಸಿದ್ದಾಳೆ. ಹೀಗಾಗಿ ಮಕ್ಕಳೂ ಆಕೆಯ ಜಾತಿಗೆ ಸೇರಿದವರಾಗಿದ್ದಾರೆ ಎಂದು ನಾನು ದೃಢಪಡಿಸುತ್ತೇನೆ. ಅವರ ಮೇಲೆ ನಮ್ಮ ಜಾತಿಯನ್ನು ಹೇರುವಂತಿಲ್ಲ’’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ರೋಹಿತ್ರ ಎಸ್ಸಿ ಪ್ರಮಾಣಪತ್ರವನ್ನು ರದ್ದುಗೊಳಿಸಲು ಕಳೆದ ವಾರ ನಿರ್ಧರಿಸಿರುವ ರಾಜ್ಯ ಸರಕಾರವು ಈ ಸಂಬಂಧ ವೇಮುಲಾ ಕುಟುಂಬಕ್ಕೆ ನೋಟಿಸನ್ನು ಜಾರಿಗೊಳಿಸಿದೆ.
ಒಂದು ವರ್ಷಕ್ಕೂ ಅಧಿಕ ಸಮಯ ‘ತನಿಖೆ’ಯನ್ನು ಕೈಗೊಂಡಿದ್ದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿಯು ರೋಹಿತ್ ಮತ್ತು ಅವರ ತಾಯಿ ರಾಧಿಕಾ ಮೋಸದಿಂದ ಎಸ್ಸಿ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದರು ಎಂದು ಆರೋಪಿಸಿತ್ತು.
ಸೋದರ ರಾಜಾ ವೇಮುಲಾರ ಜಾತಿ ಪ್ರಮಾಣ ಪತ್ರದಲ್ಲಿ ವಡ್ಡೇರಾ ಎಂದಿರುವುದು ಬೆಳಕಿಗೆ ಬಂದ ನಂತರ ರೋಹಿತ್ರ ಜಾತಿಯ ಕುರಿತು ವಿವಾದ ಸೃಷ್ಟಿಯಾಗಿತ್ತು. ತಂದೆ ಮಣಿ ಕುಮಾರ್ ವಡ್ಡೇರ ಜಾತಿಗೆ ಮತ್ತು ತಾಯಿ ರಾಧಿಕಾ ಮಾಲ ಜಾತಿಗೆ ಸೇರಿದವರು ಎನ್ನುವುದು ಬಳಿಕ ಹೊರಬಿದ್ದಿತ್ತು.
ಆದರೆ ಮಣಿಕುಮಾರ ಮದ್ಯವ್ಯಸನಿಯಾಗಿದ್ದ ಮತ್ತು ರಾಧಿಕಾ ದಲಿತ ಎಂದು ಗೊತ್ತಾದ ಬಳಿಕ ಅವರನ್ನು ತ್ಯಜಿಸಿದ್ದ ಎಂದು ಕುಟುಂಬವು ಹೇಳಿದೆ. ಆದ್ದರಿಂದ ತಂದೆಯ ಬಗ್ಗೆ ಗೊತ್ತೇ ಇಲ್ಲದ ರೋಹಿತ್ ತನ್ನ ತಾಯಿಯ ಜಾತಿಯವನಾಗಿಯೇ ಬೆಳೆದಿದ್ದರು.
ರೋಹಿತ್ ದಲಿತನಲ್ಲ ಎಂದು ಸರಕಾರವು ಹೇಳಿರುವುದರಿಂದ ಅವರು ದಲಿತನಾಗಿದ್ದ ಎನ್ನುವುದನ್ನು ಅವರ ಕುಟುಂಬವು ಸಾಬೀತುಗೊಳಿಸ ದಿದ್ದರೆ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಮತ್ತು ಹೈದರಾಬಾದ್ ವಿವಿಯ ಕುಲಪತಿ ಅಪ್ಪಾರಾವ್ ಪೊಡಿಲೆ ವಿರುದ್ಧ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಹೈದರಾಬಾದ್ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣ ಠುಸ್ ಆಗಬಹುದು.





