ಕಲಾಪದ ನಷ್ಟ ಸಂಸದರೇ ಭರಿಸಲಿ: ವಿಜಯಕುಮಾರ್

ಉಡುಪಿ, ಫೆ.19: ಸಂಸತ್ತಿನ ಕಾರ್ಯ ಕಲಾಪವನ್ನು ನಿಲ್ಲಿಸುವುದರಿಂದ ದೇಶಕ್ಕುಂಟಾದ ಕೋಟ್ಯಂತರ ಹಣ ನಷ್ಟವನ್ನು ಸಂಸದರ ವೇತನದಿಂದ ವಸೂಲಿ ಮಾಡಬೇಕೆಂದು ಆಗ್ರಹಿಸಿ ರವಿವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹಿಂದೂ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು.
ಧರಣಿಯನ್ನುದ್ದೇಶಿಸಿ ಹಿಂದೂ ಜನಜಾಗೃತಿ ಸಮಿತಿಯ ವಿಜಯಕುಮಾರ ಮಾತನಾಡಿ, 2016ರ ಸಂಸತ್ತಿನ ಚಳಿಗಾಲದ ಅಧಿವೇಶನವು ಕೇವಲ 21.2 ತಾಸುಗಳ ಕಾರ್ಯಕಲಾಪ ನಡೆದಿದೆ. ಹಾಗೂ 111 ತಾಸು ಕಾರ್ಯ ಕಲಾಪ ನಡೆಯದೆ ವ್ಯರ್ಥಗೊಂಡಿದೆ. ಇದರಿಂದ ಜನತೆಯಿಂದ ಪಡೆದುಕೊಂಡ 198 ಕೋಟಿ ತೆರಿಗೆ ವ್ಯರ್ಥವಾಗಿದೆ. ಹೀಗೆ ಸಂಸತ್ತಿನಲ್ಲಿ ಜನಪ್ರತಿನಿಧಿಗಳು ಬಹಿರಂಗವಾಗಿ ನಾಗರಿಕರ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ. ಈ ಕೋಟ್ಯಂತರ ರೂ.ಗಳ ಹಾನಿಯನ್ನು ಸಂಸದರ ವೇತನದಿಂದ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಿಂದೂವಿಧಿಜ್ಞ ಪರಿಷತ್ತಿನ ದಿನೇಶ್ ನಾಯ್ಕಿ, ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ರಮೇಶ್ ಪೆಲತ್ತೂರು, ರಾಜೇಂದ್ರ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.





