ಕೋಟಿ ಚೆನ್ನಯರು ರಾಮಲಕ್ಷ್ಮಣರಿಗೆ ಸಮಾನ: ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ
ಕೋಟಿ ಚೆನ್ನಯರ ಗೆಜ್ಜೆಗಿರಿ ನಂದನ ಬಿತ್ತಲ್ ಪುನರುತ್ಥಾನ ಶಿಲನ್ಯಾಸ

ಪುತ್ತೂರು, ಫೆ.19: ಸಮಾಜದಲ್ಲಿ ಅಧರ್ಮ ತುಂಬಿದ್ದ ಸಂದರ್ಭ ಶಸ್ತ್ರ ಬಲದ ಮೂಲಕ ಧರ್ಮ ಸ್ಥಾಪನೆ ಮಾಡಿದ ಕೋಟಿ ಚೆನ್ನಯರು ರಾಮಲಕ್ಷ್ಮಣರಿಗೆ ಸಮಾನ ಎಂದು ಕನ್ಯಾಡಿ ಶ್ರೀ ರಾಮಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್ನ ಪುನರುತ್ಥಾನದಲ್ಲಿ ಆದಿ ದೈವ ಧೂಮಾವತಿ ಮತ್ತು ಪರಿವಾರ ಶಕ್ತಿಗಳ ದೈವಸ್ಥಾನ, ಗುರು ಸಾಯನ ಬೈದ್ಯರು ಮತ್ತು ಮಾತೆ ದೇಯಿ ಬೈದ್ಯೆತಿ ಧರ್ಮ ಚಾವಡಿ, ಬೆರ್ಮೆರ್ ಗುಂಡ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ, ದೇಯಿ ಬೈದ್ಯೆತಿ ಮಹಾ ಸಮಾಧಿ, ಮೂಲಗರಡಿ ಮುಂತಾದ ಶ್ರದ್ಧಾ ಕೇಂದ್ರಗಳಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
500 ವರ್ಷಗಳ ನಂತರ ಮೊದಲ ಬಾರಿಗೆ ಪುನರುತ್ಥಾನದ ಹಾದಿಯಲ್ಲಿರುವ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್ನ ಅಭಿವೃದ್ದಿ ಕಾಮಗಾರಿ ನಡೆಯುತ್ತಿರುವುದು ಉತ್ತಮ ವಿಚಾರ ಎಂದ ಅವರು ವಸುದೈವ ಕುಟುಂಕಂ ಎಂಬ ನಾರಾಯಣ ಗುರುಗಳ ಆಶ್ರಯದಂತೆ ಸರ್ವರ ಒಗ್ಗೂಡುವಿಕೆಯಿಂದ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್ ಅಭಿವೃದ್ದಿಹೊಂದಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಸಾಮಾಜಿಕ ಅಸಾಮಾನತೆಯಿದ್ದ ಕಾಲಘಟ್ಟದಲ್ಲಿ ಸಮಾಜಿಕ ವ್ಯವಸ್ಥೆ ಬಗ್ಗೆ ದ್ವನಿಯೆತ್ತಿದ ಕೋಟಿ ಚೆನ್ನಯರು ಸಮಾಜ ಪರಿವರ್ತನೆಯ ಯತಿಗಳು. ಸಮಸ್ತ ಪಡುಮಲೆ ಅಭಿವೃದ್ದಿಗೆ ಸರ್ಕಾರದಿಂದ ಅನುದಾನ ಬಿಡುಗಡೆಗೊಂಡಿದ್ದ, ಇನ್ನೂ ಹೆಚ್ಚಿನ ಅಭಿವೃದ್ದಿಯಾಗಿಲ್ಲ. ಮಾತೆ ದೇಯಿ ಬೈದ್ಯೆತಿ ಔಷಧೀವನದ 2ನೇ ಹಂತದ ಅಭಿವೃದ್ದಿ ಕಾರ್ಯ ನಡೆಸಲು ತೀರ್ಮಾನಿಸಿದ್ದು, ಔಷಧೀವನದ ಸಂಪೂರ್ಣ ಲೋಕಾರ್ಪಣೆಯಾಗುವ ಸಂದರ್ಭದಲ್ಲಿ ದೇಯಿಬೈದತಿ ವನ ಸುಸಜ್ಜಿತವಾಗಿ ಮೂಡಿಬರಲಿದೆ ಎಂದರು.
ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕಂಕನಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೇರಳ ಸಿವಗಿರಿ ವರ್ಕಳದ ಮಠಾಧೀಶ ಶ್ರೀ ವಿಶುದ್ದಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜ್ಯ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಸಭಾ ಸದಸ್ಯ ಬಿಕೆ ಹರಿಪ್ರಸಾದ್ ಕ್ಷೇತ್ರದ ವೆಬ್ಸೈಟ್ ಅನಾವರಣಗೊಳಿಸಿದರು.
ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ ಸುವರ್ಣ ಗೆಜ್ಜೆಗಿರಿ ನಂದನ ಸಾಕ್ಷೃ ಚಿತ್ರ ಬಿಡುಗಡೆಗೊಳಿಸಿದರು. ಶಾಸಕ ಬಿಕೆ ವಸಂತ ಬಂಗೇರ ನಿಧಿ ಸಮರ್ಪಣಾ ಪತ್ರ ಬಿಡುಗಡೆಗೊಳಿಸಿದರು. ಶಾಸಕಿ ಶಕುಂತಲಾ ಟಿ. ಶೆಟ್ಟಿ ಕ್ಷೇತ್ರದ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು.
ಶ್ರದ್ಧಾ ಕೇಂದ್ರಗಳಿಗೆ ಶಿಲಾನ್ಯಾಸ :
ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್ನ ತಂತ್ರಿ ಲೋಕೇಶ್ ಸಾಂತಿ ಅವರ ಪೌರೋಹಿತ್ಯದಲ್ಲಿ ಬೆಳಗ್ಗೆ 8ರಿಂದ ಆದಿ ದೈವ ಧೂಮಾವತಿ ಮತ್ತು ಪರಿವಾರ ಶಕ್ತಿಗಳ ದೈವಸ್ಥಾನ, ಗುರು ಸಾಯನ ಬೈದ್ಯರು ಮತ್ತು ಮಾತೆ ದೇಯಿ ಬೈದ್ಯೆತಿ ಧರ್ಮ ಚಾವಡಿ, ಬೆರ್ಮೆರ್ ಗುಂಡ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ, ದೇಯಿ ಬೈದ್ಯೆತಿ ಮಹಾ ಸಮಾಧಿ, ಮೂಲಗರಡಿಗಳಿಗೆ ಧಾನಿಗಳ ನೆರವಿನಿಂದ ನಿರ್ಮಾಣಗೊಳ್ಳುವ ಶ್ರದ್ಧಾ ಬಿಂದುಗಳಿಗೆ ಶಿಲಾನ್ಯಾಸ ನಡೆಯಿತು. ಸುಮಾರು 25 ಸಾವಿರಕ್ಕೂ ಮಿಕ್ಕಿದ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜರ್ನಾರ್ಧನ ಪೂಜಾರಿಯನ್ನು ಸೋಲಿಸಿದ ಬಿಲ್ಲವರು:
ರಾಜ್ಯ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಜ್ಯ ಸಭಾ ಸದಸ್ಯ ಬಿಕೆ ಹರಿಪ್ರಸಾದ್ ಕ್ಷೇತ್ರದ ವೆಬ್ಸೈಟ್ ಅನಾವರಣಗೊಳಿ ಮಾತನಾಡಿ, ಬಹುಸಖ್ಯಾತ ಬಿಲ್ಲವರಿರುವ ಅವಿಭಜಿತ ದ.ಕ ಜಿಲ್ಲೆಯಲ್ಲಿ 80ರ ದಶಕದಿಂದಲೂ ಬಿಲ್ಲವರ ನಾಯಕನಾಗಿ ಮೂಡಿಬಂದ ಏಕೈಕ ನಾಯಕ ಜನಾರ್ದನ ಪೂಜಾರಿ ಅವರನ್ನು ರಾಜಕೀಯವಾಗಿ ಜಿಲ್ಲೆಯ ಬಿಲ್ಲವರೇ ಸೋಲಿಸಿದರು. ಬಿಲ್ಲವರ ಏಕೀಕರಣಕ್ಕೆ ಶ್ರಮಿಸಿದ ಜರ್ನಾರ್ದನ ಪೂಜಾರಿ ಅವರು ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಭ್ರಷ್ಟಾಚಾರ ರಹಿತವಾಗಿ ಕಾರ್ಯನಿರ್ವಹಿಸಿದ್ದರು ಎಂದರು.
ಬೃಹತ್ ವಾಹನ ಜಾಥಾ:
ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್ನಲ್ಲಿ ದೇಯಿ ಬೈದೆತಿ-ಕೋಟಿ ಚೆನ್ನಯ ಮೂಲಸ್ಥಾನದ ಪುನರುತ್ಥಾನದ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ಭಾನುವಾರ ಬೆಳಗ್ಗೆ ಪುತ್ತೂರಿನಿಂದ ನಂದನ ಬಿತ್ತ್ಲ್ ಕ್ಷೇತ್ರಕ್ಕೆ ಬೃಹತ್ ವಾಹನ ಜಾಥಾ ನಡೆಯಿತು. ಜಾಥಾವನ್ನು ದರ್ಬೆ ಬೈಪಾಸ್ ವೃತ್ತದ ಬಳಿ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕಂಕನಾಡಿ ಉದ್ಘಾಟಿಸಿ ಚಾಲನೆ ನೀಡಿದರು. ಕಾರ್ಕಳ, ಮೂಡುಬಿದ್ರೆಯಿಂದ, ಮಂಗಳೂರಿನ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಿಂದ, ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಿಂದ ಆಗಮಿಸಿದ ವಾಹನಗಳು ಪುತ್ತೂರು ದರ್ಬೆ ಬೈಪಾಸ್ ವೃತ್ತದ ಬಳಿ ನಿರ್ಮಾಣಗೊಂಡ ಕೋಟಿ-ಚೆನ್ನಯ ದ್ವಾರದ ಬಳಿ ತಲುಪಿ ಅಲ್ಲಿಂದ ಜಾಥಾದಲ್ಲಿ ತೆರಳಿತು.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವಿನಯಕುಮಾರ್ ಸೊರಕೆ, ಸುನಿಲ್ ಕುಮಾರ್, ಕೋಟಿ ಶ್ರೀನಿವಾಸ ಪೂಜಾರಿ, ಮಧು ಬಂಗಾರಪ್ಪ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ, ಗ್ರಾಪಂ ಸದಸ್ಯರಾದ ಕೇಶವ ಗೌಡ, ಪಡುಮಲೆ ಕೂವೆಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂಜೀವ ರೈ ಕೆ.ಪಿ., ಗೌರವ ಅತಿಥಿಗಳಾಗಿ ಮುಂಬೈ ಬಿಲ್ಲವ ಜಾಗೃತಿ ಬಳಗದ ಸ್ಥಾಪಕಾಧ್ಯಕ್ಷ ಸುರೇಶ್ ಎಸ್.ಪೂಜಾರಿ, ಅಧ್ಯಕ್ಷ ಎನ್.ಟಿ.ಪೂಜಾರಿ, ಮುಂಬೈ ಬಿಲ್ಲವ ಅಸೋಸಿಯೇಶ್ ಅಧ್ಯಕ್ಷ ಡಿ.ನಿತ್ಯಾನಂತ ಕೋಟ್ಯಾನ್, ಬಜಪೆ ಸ್ವಯಂಭೂಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎಲ್.ವಿ.ಅಮೀನ್, ರಾಜ್ಯ ಮಹಿಳಾ ಕಲ್ಯಾಣ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ದುಬೈ ಆಂಡ್ ನಾರ್ದನ್ ಎಮಿರೇಟ್ಸ್ ಬಿಲ್ಲವಾಸ್ ಅಧ್ಯಕ್ಷ ಸತೀಶ್ ಪೂಜಾರಿ, ಒಮಾನ್ ಬಿಲ್ಲವಾಸ್ ಮಸ್ಕತ್ ಅಧ್ಯಕ್ಷ ಎಸ್.ಕೆ.ಪೂಜಾರಿ, ಬಹರೈನ್ ಶ್ರೀ ಗುರು ಸೇವಾ ಸಮಿತಿಯ ರಾಜ್ಕುಮಾರ್, ಕುವೈಟ್ ಬಿಲ್ಲವ ಸಂಘದ ಅಧ್ಯಕ್ಷ ರಘು ಸಿ.ಪೂಜಾರಿ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಅಶೋಕ್ ಸುವರ್ಣ, ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಗೋವಾ ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ಚಂದ್ರಹಾಸ ಅಮೀನ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ್ ಕೋಟ್ಯಾನ್, ಡಾ.ಸುಬ್ಬು ಪೂಜಾರಿ, ಮುಂಬೈ ಯುವ ಬಿಲ್ಲವ ಕ್ಷೇಮಾಭ್ಯುದಯ ಯುವ ಬಿಲ್ಲವ ಸಮಿತಿ ನೀಲೇಶ್ ಪೂಜಾರಿ, ಮಂಗಳೂರು ನಮ್ಮ ಕುಡ್ಲವಾಹಿನಿಯ ಆಡಳಿತ ನಿರ್ದೇಶಕ ಲೀಲಾಕ್ಷ ಕರ್ಕೇರ, ಕುಡ್ಲ ಬಿರುವೆರ್ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ, ಕಿನ್ನಿಮಾಣಿ-ಪೂಮಾಣಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿರಾಜ್ ಶೆಟ್ಟಿ ಅಣಿಲೆ. ಪರ್ಪುಂಜ ರಾಮಜಾಲ್ ಶ್ರೀಬ್ರಹ್ಮ ಬೈದರ್ಕಳ ಗರಡಿ ಆಡಳಿತ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲು, ಪಟ್ಟೆ ಶ್ರೀ ಕೃಷ್ಣ ವಿದ್ಯಾಸಂಸ್ಥೆ ಸಂಚಾಲಕ ವೇಣುಗೋಪಾಲ್ ಭಟ್, ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ಸುಭಾಷ್ ಕೌಡಿಚ್ಚಾರ್, ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ದಯಾ ವಿಷ್ಣುಪ್ರಸಾದ್ ರೈ, ತಾಪಂ ಸದಸ್ಯ ರಾಧಾಕೃಷ್ಣ ಬೋರ್ಕರ್ ಮತ್ತಿತರರು ಉಪಸ್ಥಿತರಿದ್ದರು.







