ಭುಗಿಲೆದ್ದ ರೆಡ್ಡಿ-ಶ್ರೀರಾಮುಲು ನಡುವಣ ವೈಮನಸ್ಸು : ಮಾಜಿ ಸಚಿವ ಕರುಣಾಕರ ರೆಡ್ಡಿ ವಿರುದ್ಧ ಜಾತಿ ನಿಂದನೆ ಕೇಸ್

ಬಳ್ಳಾರಿ, ಫೆ.19: ಮಾಜಿ ಸಚಿವ ಕರುಣಾಕರ ರೆಡ್ಡಿ ಹಾಗೂ ಅವರ ಭಾಮೈದ ವಿಶ್ವನಾಥ ರೆಡ್ಡಿ ವಿರುದ್ಧ ಜಾತಿ ನಿಂದನೆ ದೂರೊಂದು ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮಾಜಿ ಸಚಿವ ಶ್ರೀರಾಮುಲು ಅವರ ಆಪ್ತ ಎನ್ನಲಾದ ಬಳ್ಳಾರಿಯ ಹವಂಬಾವಿ ಗ್ರಾಮದ ನಾಗಪ್ಪ ಈ ದೂರನ್ನು ನೀಡಿದ್ದಾರೆ. ಈ ಮೂಲಕ ಗಾಲಿ ಜನಾರ್ದನರೆಡ್ಡಿ ಸಹೋದರ, ಮಾಜಿ ಸಚಿವ ಕರುಣಾಕರ ರೆಡ್ಡಿ ಹಾಗೂ ಸಂಸದ ಶ್ರೀರಾಮುಲು ನಡುವಣ ವೈಮನಸ್ಸು ಭುಗಿಲೆದ್ದಿದ್ದಂತಾಗಿದೆ.
ಬಳ್ಳಾರಿ ಗ್ರಾಮೀಣ ಠಾಣಾ ಪೊಲೀಸರು, ರವಿವಾರ ಕರುಣಾಕರ ರೆಡ್ಡಿ ಮತ್ತು ವಿಶ್ವನಾಥ ರೆಡ್ಡಿ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆ ಸೇರಿದಂತೆ ಇನ್ನಿತರೆ ಸೆಕ್ಷನ್ ಅಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಾಗಪ್ಪ ದೂರಿನ ವಿವರ: ಹವಂಬಾವಿ ಗ್ರಾಮದ ಆಂಜನೇಯ ದೇವಸ್ಥಾನದ ಬಳಿಯೇ ಕರುಣಾಕರ ರೆಡ್ಡಿ ನಿವಾಸವಿದ್ದು, ಇದೇ ಮಾರ್ಗದಲ್ಲಿ ನಾನು ಮತ್ತು ವಾಲ್ಮೀಕಿ ಜನಾಂಗದ ಟಿ.ಸತ್ಯನಾರಾಯಣ ಸೇರಿ ಪ್ರಮುಖರು ಓಡಾಡುವಾಗ ಕರುಣಾಕರ ರೆಡ್ಡಿ ಮತ್ತು ಭಾಮೈದ ವಿಶ್ವನಾಥ ರೆಡ್ಡಿ ಇಬ್ಬರು ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಾವು ಹೋಗಲಿ ಬಿಡು ಎಂದು ಸುಮ್ಮನಿದ್ದೆವು.
ಆದರೆ, ಫೆ.9ರ ಗುರುವಾರ ರಾತ್ರಿ 7ಗಂಟೆ ಸುಮಾರಿಗೆ ಸಮುದಾಯದ ಮುಖಂಡರೊಂದಿಗೆ ಹೋಗುತ್ತಿದ್ದ ವೇಳೆ 'ಸಣ್ಣ ಜಾತಿ ನನ್ನ ಮಕ್ಕಳೇ, ಇಲ್ಲಿ ತಿರುಗಾಡ ಬೇಡಿ, ಎಲ್ಲರೂ ಇಲ್ಲಿಯೇ ತಿರುಗಾಡುತ್ತೀರಿ' ಎಂದು ಕರುಣಾಕರ ರೆಡ್ಡಿ ಮತ್ತು ಭಾಮೈದ ವಿಶ್ವನಾಥ ರೆಡ್ಡಿ ಇಬ್ಬರು ಸೇರಿಕೊಂಡು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದಾರೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ನಾಗಪ್ಪ ಉಲ್ಲೇಖ ಮಾಡಿದ್ದಾರೆ.
ರಾಮುಲು ವಿರುದ್ಧ ಕೋರ್ಟ್ ಮೇಟ್ಟಿಲೆರಿದ್ದ ರೆಡ್ಡಿ: ಬಳ್ಳಾರಿ ನಗರದ ಸುಷ್ಮಾ ಸ್ವರಾಜ್ ಕಾಲನಿಯಲ್ಲಿರುವ ನಿವೇಶನಗಳ ಮಾಲಕತ್ವದ ವಿವಾದಕ್ಕೆ ಸಂಬಂಧ ಸಂಸದ ಶ್ರೀರಾಮುಲು ಸೇರಿ ಮೂವರ ವಿರುದ್ಧ ಮಾಜಿ ಸಚಿವ ಕರುಣಾಕರ ರೆಡ್ಡಿ ಇತ್ತೀಚೆಗೆ ಬಳ್ಳಾರಿಯ ಸಿಜೆಎಂ ನ್ಯಾಯಾಲಯದಲ್ಲಿ ಆಸ್ತಿ ಮಾಲಕತ್ವದ ಘೋಷಣೆಯ ದಾವೆ ಹೂಡಿದ್ದರು. ಇದಕ್ಕೆ ಸಂಬಂಧಿಸಿ ನ್ಯಾಯಾಲಯ ಸಂಸದ ಬಿ.ಶ್ರೀೀರಾಮುಲು ಸೇರಿ ಮೂವರಿಗೆ ಸಮನ್ಸ್ ಜಾರಿಗೊಳಿಸಿದೆ ಎನ್ನಲಾಗಿದ್ದು, ಇದರ ವಿರುದ್ಧವಾಗಿ ಕರುಣಾಕರ ರೆಡ್ಡಿ ವಿರುದ್ಧ ರಾಮುಲು ಆಪ್ತರೊಬ್ಬರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಸಣ್ಣ ಜಾತಿ ನನ್ನ ಮಕ್ಕಳೇ, ಇಲ್ಲೇ ತಿರುಗಾಡುತ್ತೀರಿ..!
'ಸಣ್ಣ ಜಾತಿ ನನ್ನ ಮಕ್ಕಳೇ, ಇಲ್ಲಿ ತಿರುಗಾಡ ಬೇಡಿ, ಎಲ್ಲರೂ ಇಲ್ಲಿಯೇ ತಿರುಗಾಡುತ್ತೀರಿ'. ಹೀಗೆ, ಇನ್ನಿತರೆ ಅವಾಚ್ಯ ಶಬ್ದಗಳಿಂದ ಮಾಜಿ ಸಚಿವ ಕರುಣಾಕರ ರೆಡ್ಡಿ ಮತ್ತು ಭಾಮೈದ ವಿಶ್ವನಾಥ ರೆಡ್ಡಿ ಇಬ್ಬರು ಸೇರಿಕೊಂಡು ಜಾತಿನಿಂದನೆ ಮಾಡಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು'
ನಾಗಪ್ಪ ದೂರುದಾರ, ಸಂಸದ ಶ್ರೀರಾಮುಲು ಆಪ್ತ







