ಮಾ.18ರಂದು ವಿಜಯ-ವಿಕ್ರಮ ಕಂಬಳ
.jpg)
ಉಪ್ಪಿನಂಗಡಿ, ಫೆ.19: ಉಪ್ಪಿನಂಗಡಿಯ ವಿಜಯ-ವಿಕ್ರಮ ಕಂಬಳವನ್ನು ಪ್ರತೀ ವರ್ಷದಂತೆ ಈ ಬಾರಿಯೂ ಮಾ.18ಕ್ಕೆ ನಡೆಸಲು ಉದ್ದೇಶಿಸಲಾಗಿದೆ. ಕಂಬಳಕ್ಕಿರುವ ಕಂಟಕ ನಿವಾರಣೆಯಾದರೆ ವಿಜಯೋತ್ಸವದ ಕಂಬಳ ಇದಾಗಲಿದ್ದು, ಅಡೆತಡೆಗಳು ಎದುರಾದರೆ ಪ್ರತಿಭಟನಾರ್ಥಕ ಕಂಬಳ ಇದಾಗಲಿದೆ ಎಂದು ಉಪ್ಪಿನಂಗಡಿ ವಿಜಯ-ವಿಕ್ರಮ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದ್ದಾರೆ. ಉಪ್ಪಿನಂಗಡಿಯ ಹಳೆಗೇಟು ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿರುವ ಕಂಬಳ ಕೆರೆಯ ಬಳಿ ರವಿವಾರ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯ ಸರಕಾರ ಪಿಸಿಎ ಆ್ಯಕ್ಟ್ಗೆ ತಿದ್ದುಪಡಿ ತಂದಿದ್ದು, ಅದಕ್ಕೆ ರಾಜ್ಯಪಾಲರ ಅಂಕಿತ ಬೀಳಬೇಕಿದೆ. ಅವರು ಅಂಕಿತ ಹಾಕುವ ಭರವಸೆಯಿದೆ. ಈ ನಿಟ್ಟಿನಲ್ಲಿ ಸೋಮವಾರ ಅವರನ್ನು ನಾನು ಭೆೇಟಿಯಾಗಲಿದ್ದೇನೆ. ರಾಜ್ಯಪಾಲರ ಅಂಕಿತದ ಬಳಿಕ ರಾಜ್ಯ ಹೈಕೋರ್ಟ್ನಲ್ಲಿ ಇದನ್ನು ಮಂಡಿಸಿ, ನ್ಯಾಯಾಲಯದ ಸಮ್ಮತಿ ಪಡೆಯಬೇಕಿದೆ. ಇಲ್ಲೆಲ್ಲಾ ಜಯ ನಮ್ಮದಾಗುವ ವಿಶ್ವಾಸವಿದೆ. ಈ ನಡುವೆ ಹೈಕೋರ್ಟ್ನ ಆದೇಶ ಪ್ರಶ್ನಿಸಿ ಪೆಟಾದವರು ಸುಪ್ರೀಂ ಕೋರ್ಟ್ಗೆ ಹೋದರೆ ಕಂಬಳ ನಡೆಸಲು ಮತ್ತೆ ತಡೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ ಅವರು, ಕಂಬಳಕ್ಕಿರುವ ಕಂಟಕ ನಿವಾರಣೆಯಾದರೂ ಸರಿ, ನಿವಾರಣೆಯಾಗದಿದ್ದರೂ ಸರಿ, ಮಾ.18ರಂದು ಉಪ್ಪಿನಂಗಡಿಯಲ್ಲಿ ವಿಜಯ-ವಿಕ್ರಮ ಜೋಡುಕರೆ ನಡೆಸಿಯೇ ಸಿದ್ಧ ಎಂದರು.
ಜಿಲ್ಲಾ ಕಂಬಳ ತೀರ್ಪುಗಾರ ನಿರಂಜನ್ ರೈ ಮಠಂತಬೆಟ್ಟು ಮಾತನಾಡಿದರು.
ಬಳಿಕ ಸಭೆಯಲ್ಲಿ ಚರ್ಚೆ ನಡೆದು ಫೆ.24ರಂದು 9:30ಕ್ಕೆ ಕೆರೆ ಮುಹೂರ್ತ ನಡೆಸಿ, ಕೆರೆ ನಿರ್ಮಾಣದ ಕೆಲಸ ಪ್ರಾರಂಭಿಸುವುದು. ಫೆ.26ರಂದು ಹಳೆಗೇಟಿನ ಕೆರೆಯ ಬಳಿ ಶ್ರಮದಾನ ನಡೆಸಲು ನಿರ್ಧರಿಸಲಾಯಿತು.
ಕಂಬಳದ ದಿನ ಊಟೋಪಚಾರದ ವ್ಯವಸ್ಥೆಗೆ ಸಮಿತಿ ರಚಿಸಲಾಯಿತು. ಸಭೆೆಯಲ್ಲಿ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ ನಂದಾವರ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪ ಬೆಳ್ಳಿಪ್ಪಾಡಿ, ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ, ಉಪಾಧ್ಯಕ್ಷ ವಿಠಲ ಶೆಟ್ಟಿ ಕುಲ್ಲೊಟ್ಟು, ಸಂಕಪ್ಪಶೆಟ್ಟಿ ಮಠಂತಬೆಟ್ಟು, ಪ್ರವೀಣ್ ಕುಮಾರ್ ಕದಿಕ್ಕಾರುಬೀಡು, ಗಂಗಾಧರ ಶೆಟ್ಟಿ ಮಠಂತಬೆಟ್ಟು, ಆದರ್ಶ ಶೆಟ್ಟಿ ಕಜೆಕ್ಕಾರು, ಬಾಲಕೃಷ್ಣ ಶೆಟ್ಟಿ ಮಠಂತಬೆಟ್ಟು, ಸುರೇಶ್ ಅತ್ರಮಜಲು, ರಾಮಚಂದ್ರಮಣಿಯಾಣಿ, ಕೇಶವ ರಂಗಾಜೆ, ಮಹಾಲಿಂಗ ಕಜೆಕ್ಕಾರು, ಮುನೀರ್ ದಾವೂದ್ ಮತ್ತಿತರರು ಉಪಸ್ಥಿತರಿದ್ದರು.







