ಮಂಗಳೂರು: ಫೆ.23ರಂದು 'ಬೊಳ್ಳಿ ಸಾಂಸ್ಕೃತಿಕ ಸಂಭ್ರಮ-17'
ಮಂಗಳೂರು, ಫೆ.20: ಬೊಳ್ಳಿ ಕಲ್ಚರಲ್ ಅಸೋಸಿಯೇಶನ್ ವತಿಯಿಂದ ಪ್ರಥಮ ಬಾರಿಗೆ 'ಬೊಳ್ಳಿ ಸಾಂಸ್ಕೃತಿಕ ಸಂಭ್ರಮ-17' ವನ್ನು ನಗರದ ಪುರಭವನದಲ್ಲಿ ಫೆ.23ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ ಎಂದು ಬೊಳ್ಳಿ ಕಲ್ಚರಲ್ ಅಸೋಸಿಯೇಶನ್ನ ಸ್ಥಾಪಕಾಧ್ಯಕ್ಷ ಸಂತೋಷ್ಕುಮಾರ್ ಕೊಲ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸುವರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಉದ್ಘಾಟಿಸಲಿದ್ದಾರೆ.
ಭಾಸ್ಕರ್ ರೈ ಕುಕ್ಕುವಳ್ಳಿ ಅಧ್ಯಕ್ಷತೆಯಲ್ಲಿ 'ಕವಿ ಕಾವ್ಯ ಗಾಯನ ಸಂಗೀತ ಕವಿಗೋಷ್ಠಿ' ನಡೆಯಲಿದೆ. 'ಎಂದಿಗೂ ಮರೆಯದ ಹಾಡುಗಳು ಇಂದಿಗೂ ಎದೆ ತಟ್ಟುವ ಸಾಲುಗಳು' ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ರೋಹಿತ್ ಪೂಜಾರಿ ನಿರ್ದೇಶನದ 'ನೆನಪಾದೆ ಅಮ್ಮ' ಕಿರುಚಿತ್ರ ಬಿಡುಗಡೆಗೊಳಿಸಲಾಗುವುದು. ಸಂತೋಷ್ ಕುಮಾರ್ ಕೊಲ್ಯ ನಿರ್ದೇಶನದ 'ಲೈಫ್ ಲೋಕೇಸೆ' ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಚಿತ್ರರಂಗದ ಹಾಸ್ಯ ನಟ ಬ್ಯಾಂಕ್ ಜನಾರ್ಧನ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬೊಳ್ಳಿ ಕಲ್ಚರಲ್ ಅಸೋಸಿಯೇಶನ್ನ ಗೌರವಾಧ್ಯಕ್ಷ ಮೋಹನ್ ದಾಸ್ ಪೈ, ಕಾರ್ಯದರ್ಶಿ ಯೋಗೀಶ್ ರೈ ಜೆ., ಶೇಖರ್ ಪೂಜಾರಿ, ಸಾಹಿತಿ ಮಾಲತಿ ಶೆಟ್ಟಿ ಮಾಣೂರು ಉಪಸ್ಥಿತರಿದ್ದರು.





