ಐಸಿವೈಎಂ ಯೂತ್ ಫಿಯೆಸ್ಟಾ: ಕಾರ್ಕಳ ನಗರ ಘಟಕಕ್ಕೆ ಸಮಗ್ರ ಪ್ರಶಸ್ತಿ

ಉಡುಪಿ, ಫೆ.20: ಭಾರತೀಯ ಕೆಥೊಲಿಕ್ ಯುವ ಸಂಚಾಲನ ಉಡುಪಿ ಧರ್ಮಪ್ರಾಂತದ ವತಿಯಿಂದ ರವಿವಾರ ಶಿರ್ವ ಸಂತ ಮೇರಿ ಕಾಲೇಜಿನ ವಠಾರದಲ್ಲಿ ಏರ್ಪಡಿಸಲಾದ ಯೂತ್ ಫಿಯೆಸ್ಟಾದಲ್ಲಿ ಐಸಿವೈಎಂ ಕಾರ್ಕಳ ನಗರ ಘಟಕ ಸಮಗ್ರ ಪ್ರಶಸ್ತಿ ಹಾಗೂ ಕಟಪಾಡಿ ಮತ್ತು ಮುಂಡ್ಕೂರು ಘಟಕಗಳು ದ್ವಿತೀಯ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಉಡುಪಿ ಧರ್ಮಪ್ರಾಂತ ವ್ಯಾಪ್ತಿಯ ಸುಮಾರು 500ಕ್ಕೂ ಅಧಿಕ ಕ್ರೈಸ್ತ ಯುವಜನರು ಭಾಗವಹಿಸಿದ್ಧ ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮೈಮ್ ಶೋ, ರಸಪ್ರಶ್ನೆ, ಕೋಲಾಜ್, ಫೇಸ್ ಪೈಂಟಿಂಗ್ ಹಾಗೂ ಹಾಸ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಬಹುಮಾನ ವಿತರಣಾ ಸಮಾರಂಭದಲ್ಲಿ ಉಡುಪಿ ಧರ್ಮಪ್ರಾಂತದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್ ಮುಖ್ಯ ಅತಿಥಿ ಯಾಗಿದ್ದರು. ಕಾರ್ಯಕ್ರಮವನ್ನು ಶಿರ್ವ ವಲಯದ ಪ್ರಧಾನ ಧರ್ಮಗುರು ಹಾಗೂ ಆರೋಗ್ಯ ಮಾತಾ ಇಗರ್ಜಿಯ ಧರ್ಮಗುರು ವಂ ಸ್ಟ್ಯಾನಿ ತಾವ್ರೊ ಉದ್ಘಾಟಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಧರ್ಮಪ್ರಾಂತ ವ್ಯಾಪ್ತಿಯ ಶೈನಿ ಮಿನೇಜಸ್, ಅವಿಲ್ ಮೆಂಡೊನ್ಸಾ, ರೋಯ್ ಮಥಾಯಸ್(ಸಿಎ), ಜಾಸ್ಮೀನ್ ಡಿಸೋಜ(ಕರಾಟೆ), ಜೊವಿಟಾ ಅಂದ್ರಾದೆ (ಎನ್ಸಿಸಿ), ವೊಲಿಟಾ ಲೋಬೊ, ಲವಿಟಾ ಪಿಂಟೊ, ನತಾಶ ಪಾಯಸ್, ನಿಲೀಮಾ ಡಿಸೋಜ, ಜಾಕ್ಸನ್ ಡಿಸೋಜ, ಮೆಕ್ಲಿನ್ ಲೋಬೊ(ಶಿಕ್ಷಣ), ಅನ್ಸಿಲ್ಲಾ ಸಲ್ಡಾನ, ರೈಸನ್ ರೆಬೆಲ್ಲೊ, ಜೊಸ್ಲಿಟಾ ಫೆರ್ನಾಂಡಿಸ್, ಅಲಿಸ್ಟನ್ ಕೊರೆಯಾ (ಕ್ರೀಡೆ) ಅವರಿಗೆ ಯುವ ಪುರಸ್ಕಾರ ನೀಡಲಾಯಿತು. ಯುವ ನಿರ್ದೇಶಕ ವಂ.ಎಡ್ವಿನ್ ಡಿಸೋಜರನ್ನು ಸನ್ಮಾನಿಸಿದರು.
ಇತ್ತೀಚೆಗೆ ನಡೆದ ರಾಷ್ಟ್ರೀಯ ಯುವ ಸಮ್ಮೇಳನ ಪ್ರಯುಕ್ತ ಏರ್ಪಡಿಸಲಾದ ಡೇಸ್ ಇನ್ ಡಯಾಸಿಸ್ ಡೊಕ್ಯುಮೆಂಟರಿ ರಚನೆಯಲ್ಲಿ ಪೆರಂಪಳ್ಳಿ, ತೊಟ್ಟಂ, ಉಡುಪಿ ಮತ್ತು ಬ್ರಹ್ಮಾವರ ಘಟಕಗಳು ಕ್ರಮವಾಗಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಬಹುಮಾನಗಳನ್ನು ಗೆದ್ದುಕೊಂಡವು.
ಶಿರ್ವ ವಲಯ ಯುವ ನಿರ್ದೇಶಕ ವಂ.ಪಾವ್ಲ್ ರೇಗೊ, ಡೋನ್ ಬೊಸ್ಕೋ ಶಾಲೆಯ ಪ್ರಾಂಶುಪಾಲ ವಂ.ಮಹೇಶ್ ಡಿಸೋಜ, ವಂ. ಹೆರಾಲ್ಡ್ ಪಿರೇರಾ, ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್, ಶಿರ್ವ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ವಿಲ್ಸನ್ ಡಿಸೋಜ, ಬಿಗ್ ಎಫ್ಎಂ ಆರ್ಜೆ ಎರೊಲ್ ಗೊನ್ಸಾಲ್ವಿಸ್, ಶಿರ್ವ ಘಟಕ ಅಧ್ಯಕ್ಷ ಆವಿಲ್ ಸಲ್ಡಾನ, ಸಚೇತಕರಾದ ವಾಲ್ಟರ್ ಡಿಸೋಜ, ಸಿಸ್ಟರ್ ಹಿಲ್ಡಾ ಉಪಸ್ಥಿತರಿದ್ದರು.
ಕೇಂದ್ರಿಯ ಅಧ್ಯಕ್ಷ ಲೊಯಲ್ ಡಿಸೋಜ ಸ್ವಾಗತಿಸಿದರು. ಕಾರ್ಯದರ್ಶಿ ಫೆಲಿನಾ ಡಿಸೋಜ ವಂದಿಸಿದರು, ರೋಯ್ಟನ್ ಡಿಸೋಜ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.







