ವಿದ್ಯಾರ್ಥಿವೇತನಕ್ಕೆ 'ಆಧಾರ್' ಕಡ್ಡಾಯ
ಹೊಸದಿಲ್ಲಿ, ಫೆ. 21: ಹಿಂದುಳಿದ- ಬಡ ವಿದ್ಯಾರ್ಥಿಗಳಿಗೆ ಕೇಂದ್ರಸರಕಾರದ ಸೌಲಭ್ಯಗಳು ಲಭಿಸಬೇಕಿದ್ದರೆ ಆಧಾರ್ ಕಡ್ಡಾಯವಾಗಿದೆ . ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯ ಮತ್ತು ಸಾಮಾಜಿಕ ನ್ಯಾಯ ಸಶಕ್ತೀಕರಣ ಸಚಿವಾಲಯದ ವಿದ್ಯಾರ್ಥಿವೇತನಕ್ಕೆ ಆಧಾರ್ ಕಡ್ಡಾಯಗೊಳಿಸಿ ಪ್ರಕಟನೆ ಹೊರಡಿಸಲಾಗಿದೆ. ಯೋಜನೆ ನಿರ್ವಹಣೆಯ ಹೊಣೆಗಾರಿಕೆ ಶಾಲಾ ಪ್ರಾಂಶುಪಾಲರಿಗೆ ನೀಡಲಾಗಿದೆ. ಈವರ್ಷವೇ ಯೋಜನೆ ಜಾರಿಗೊಳ್ಳಲಿದೆ. 2018ರಿಂದ ಅಂಗನವಾಡಿ ಸೌಲಭ್ಯಗಳಿಗೆ ಆಧಾರ್ ಕಡ್ಡಾಯಗೊಳಿಸಿ ಕಳೆದವಾರ ಪ್ರಕಟನೆ ನೀಡಲಾಗಿತ್ತು.
ಮಾನವಾಭಿವೃದ್ಧಿ ಸಚಿವಾಲಯದ ನ್ಯಾಶನಲ್ ಮೀನ್ಸ್- ಕಂ- ಮೆರಿಟ್ ವಿದ್ಯಾರ್ಥಿವೇತನ, ಸೆಕಂಡರಿ ಸ್ಕೂಲ್ ವಿದ್ಯಾರ್ಥಿನಿಗಳ ರಾಷ್ಟ್ರೀಯ ವಿದ್ಯಾರ್ಥಿವೇತನಗಳಿಗೆ ಅರ್ಹರಾಗುವ ವಿದ್ಯಾರ್ಥಿಗಳು ಜೂನ್ ಮೂವತ್ತರೊಳಗೆ ಆಧಾರ್ ಕಾರ್ಡನ್ನು ಪಡೆದಿರಬೇಕು. ಇದರ ಒಳಗೆ ಆಧಾರ್ ಲಭಿಸದಿದ್ದರೆ ಆಧಾರ್ಗೆ ಹಾಕಿದ ಅರ್ಜಿಯ ಕಾಪಿ, ಬ್ಯಾಂಕ್ಪಾಸ್ಬುಕ್,ಶಿಕ್ಷಣ ಇಲಾಖೆಯ ಗುರುತು ಚೀಟಿ ದಾಖಲೆ ವಿದ್ಯಾರ್ಥಿವೇತನಕ್ಕಾಗಿ ನೀಡಬೇಕಾಗುತ್ತದೆ.
ಒಂಬತ್ತು ಮತ್ತು 10ನೆ ತರಗತಿಯ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗಾಗಿರುವ ಮೆಟ್ರಿಕ್ ಪೂರ್ವವಿದ್ಯಾರ್ಥಿವೇತನ, ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಪರಿಶಿಷ್ಟಜಾತಿ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ತರಬೇತಿ ವಿದ್ಯಾರ್ಥಿವೇತನ,ಡಾ. ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ, ಮೆಟ್ರಿಕ್ ನಂತರ ವಿದ್ಯಾರ್ಥಿವೇತನ, ಉನ್ನತ ವಿದ್ಯಾಭ್ಯಾಸಕ್ಕಾಗಿರುವ ರಾಷ್ಟ್ರೀಯ ಫೆಲೊಶಿಪ್ ಮುಂತಾದ ವಿದ್ಯಾರ್ಥಿವೇತನ ಗಳನ್ನು ಕೇಂದ್ರ ಸಾಮಾಜಿಕ ಸಶಕ್ತೀಕರಣ ಸಚಿವಾಲಯದ ಮೂಲಕ ವಿತರಿಸಲಾಗುತ್ತಿದೆ. ಇದಕ್ಕೆ ಅರ್ಹರಿರುವ ವಿದ್ಯಾರ್ಥಿಗಳು ಮಾರ್ಚ್ 30ರೊಳಗೆ ಆಧಾರ್ ಗಳಿಸಿರಬೇಕೆಂದು ವರದಿ ತಿಳಿಸಿದೆ.