ಹಫೀಝ್ ಪಾಕಿಸ್ತಾನಕ್ಕೆ ಗಂಭೀರ ಬೆದರಿಕೆ :ರಕ್ಷಣಾ ಸಚಿವ ಖ್ವಾಜ ಆಸಿಫ್

ಲಾಹೋರ್, ಫೆ. 21: ಜಮಾಅತ್ ಉದ್ ದಾವಾ ಮುಖ್ಯಸ್ಥ ಹಫೀಝ್ ಸಯೀದ್ ಪಾಕಿಸ್ತಾನಕ್ಕೆ ‘ಗಂಭೀರ ಬೆದರಿಕೆ’ಯಾಗಬಲ್ಲನು, ಹಾಗಾಗಿಯೇ ಅತನನ್ನು ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಆ ದೇಶದ ರಕ್ಷಣಾ ಸಚಿವ ಖ್ವಾಜ ಆಸಿಫ್ ಹೇಳಿದ್ದಾರೆ.
ಜರ್ಮನಿಯಲ್ಲಿ ಮ್ಯೂನಿಕ್ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಭದ್ರತಾ ಸಮ್ಮೇಳನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂಬೈ ಭಯೋತ್ಪಾದಕ ದಾಳಿಯ ರೂವಾರಿಯೆನ್ನಲಾದ ಹಫೀಝ್ ಸಯೀದ್ನನ್ನು ಭಯೋತ್ಪಾದನೆ ನಿಗ್ರಹ ಕಾಯ್ದೆಯ ನಾಲ್ಕನೆ ಪರಿಚ್ಛೇದದ ವ್ಯಾಪ್ತಿಗೆ ಸೇರಿಸಿದ ಬಳಿಕ, ಜನವರಿ 30ರಂದು ಲಾಹೋರ್ನಲ್ಲಿ ಆತನನ್ನು ಗೃಹಬಂಧನದಲ್ಲಿರಿಸಲಾಗಿದೆ.
ಭಯೋತ್ಪಾದನೆ ಮತ್ತು ತೀವ್ರವಾದವನ್ನು ಎದುರಿಸುವ ಕುರಿತ ಚರ್ಚೆಯಲ್ಲಿ ಮಾತನಾಡಿದ ಆಸಿಫ್, ‘‘ಭಯೋತ್ಪಾದನೆ ಯಾವುದೇ ಧರ್ಮದೊಂದಿಗೆ ಸೇರಿಕೊಂಡಿಲ್ಲ. ಭಯೋತ್ಪಾದಕರು ಕ್ರೈಸ್ತರಲ್ಲ, ಮುಸ್ಲಿಮರಲ್ಲ, ಬೌದ್ಧರಲ್ಲ ಅಥವಾ ಹಿಂದೂಗಳಲ್ಲ. ಅವರು ಭಯೋತ್ಪಾದಕರು, ಅವರು ಕೇಡಿಗಳು’’ ಎಂದರು.
Next Story





