ಡೈರಿ ಪ್ರಕರಣ: ತನಿಖೆ ನಡೆಸುವಂತೆ ಕೇಂದ್ರಕ್ಕೆ ದಿಗ್ವಿಜಯ್ಸಿಂಗ್ ಸವಾಲು

ಬೆಂಗಳೂರು, ಫೆ.26: ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜುಗೆ ಸಂಬಂಧಿಸಿದ ಡೈರಿ ಎಂದು ಆಪಾದಿಸಲಾಗುತ್ತಿರುವ ಪ್ರಕರಣದ ಕುರಿತು ಕೇಂದ್ರ ಸರಕಾರ ತನಿಖೆ ನಡೆಸಿ, ಸತ್ಯಾಂಶ ಹೊರತರಲಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ಸಿಂಗ್ ಸವಾಲು ಹಾಕಿದ್ದಾರೆ.
ರವಿವಾರ ನಗರದ ಕ್ವೀನ್ಸ್ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಧಾರ ರಹಿತವಾಗಿರುವ ಡೈರಿಯ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರದ ತೇಜೋವಧೆ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಿಡಿಗಾರಿದರು.
ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಎರಡು ಪ್ರಮುಖ ಸಂಸ್ಥೆಗಳು ಕೇಂದ್ರ ಸರಕಾರದ ಅಧೀನದಲ್ಲಿವೆ. ಈ ಡೈರಿ ಪ್ರಕರಣದ ಕುರಿತು ಸತ್ಯಾಸತ್ಯತೆಯನ್ನು ಜನತೆಯ ಮುಂದಿಡಲು ಈ ಕೂಡಲೆ ತನಿಖೆಗೆ ಒಳಪಡಿಸಿ ಸತ್ಯಾಂಶವನ್ನು ಬಯಲು ಮಾಡಲಿ ಎಂದು ಅವರು ಆಗ್ರಹಿಸಿದರು.
ಬಿಜೆಪಿ ಸಂಸದರು, ಕೇಂದ್ರ ಸಚಿವರು ರಾಜ್ಯದಲ್ಲಿರುವ ಬರಗಾಲದ ಬಗ್ಗೆ ಗಮನ ಹರಿಸದೆ, ಸುಳ್ಳು ಡೈರಿಗಳನ್ನು ಸೃಷ್ಠಿಸಿ, ಅದಕ್ಕೆ ಕತೆಗಳನ್ನು ಕಟ್ಟಿ ಜನರನ್ನು ದಿಕ್ಕು ತಪ್ಪಿಸುವ ಕಾಯಕದಲ್ಲಿ ತಲ್ಲೀನರಾಗಿದ್ದಾರೆ. ಬಿಜೆಪಿಯ ವಿಧಾನಪರಿಷತ್ ಸದಸ್ಯ ಲೇಹರ್ಸಿಂಗ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ವಶಪಡಿಸಿಕೊಂಡ ಡೈರಿ ಬಗ್ಗೆ ಯಾಕೆ ಇವರೆಲ್ಲ ವೌನವಹಿಸಿದ್ದಾರೆ ಎಂದು ದಿಗ್ವಿಜಯ್ಸಿಂಗ್ ಪ್ರಶ್ನಿಸಿದರು.
ನರೇಂದ್ರಮೋದಿಗೆ 100 ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ಪಾವತಿಸಿರುವ ಅಂಶವನ್ನು ಲೇಹರ್ಸಿಂಗ್ ಡೈರಿಯಲ್ಲಿ ಉಲ್ಲೇಖಿಸಲಾಗಿದೆ. ಸಹಾರಾ-ಬಿರ್ಲಾ ಡೈರಿ, ಲ್ಯಾಪ್ಟಾಪ್ನಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿಗೆ 40 ಕೋಟಿ ರೂ.ಸಂದಾಯ ಮಾಡಿರುವುದನ್ನು ನಮೂದಿಸಲಾಗಿದೆ. ಆದರೆ, ಈ ವಿಚಾರಗಳನ್ನು ಯಾವ ಬಿಜೆಪಿ ನಾಯಕನು ಬಾಯಿ ಬಿಡುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜು ಈಗಾಗಲೆ ಆ ಡೈರಿ ತನ್ನದಲ್ಲ. ಅದರಲ್ಲಿ ಇರುವ ಹಸ್ತಲಿಪಿಯು ತನ್ನದಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ. ಅಲ್ಲದೆ, ಕಳೆದ ವರ್ಷವೆ ಈ ಡೈರಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ದ್ದಾರೆ. 11 ತಿಂಗಳುಗಳಿಂದ ಸುಮ್ಮನೆ ಕುಳಿತಿದ್ದ ಬಿಜೆಪಿ ನಾಯಕರು, ಇದೀಗ ಏಕಾಏಕಿ ಮೈಕೊಡವಿ ಎದ್ದು ನಿಂತಿದ್ದಾರೆ ಎಂದು ದಿಗ್ವಿಜಯ್ಸಿಂಗ್ ವ್ಯಂಗ್ಯವಾಡಿದರು.
ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಆದಾಯ ತೆರಿಗೆ ಇಲಾಖೆಯು ಗೋವಿಂದರಾಜು ಪ್ರಕರಣವನ್ನು ತನಿಖೆ ನಡೆಸಿ, ಮುಕ್ತಾಯಗೊಳಿಸಿದೆ. ಆದರೆ, ಪ್ರಧಾನಮಂತ್ರಿ ಕಚೇರಿಯ ಒತ್ತಡಕ್ಕೆ ಮಣಿದು, ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಮತ್ತೊಮ್ಮೆ ಈ ಪ್ರಕರಣಕ್ಕೆ ಜೀವ ಕೊಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಗೋವಿಂದರಾಜುಗೆ ಸೇರಿದೆ ಎನ್ನಲಾದ ಡೈರಿಯ ಬಗ್ಗೆ ಇಷ್ಟೊಂದು ಪ್ರಶ್ನೆಗಳನ್ನು ಕೇಳುವ ಮಾಧ್ಯಮಗಳು, ಲೇಹರ್ಸಿಂಗ್ ಡೈರಿ, ಸಹಾರ-ಬಿರ್ಲಾ ಡೈರಿ ಬಗ್ಗೆ ಯಾಕೆ ಪ್ರಶ್ನಿಸುತ್ತಿಲ್ಲ. ಕೇಂದ್ರ ಸಚಿವ ಅನಂತ್ಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಈ ಡೈರಿ ವಿಚಾರದಲ್ಲಿ ಏನೆಲ್ಲಾ ಮಾತನಾಡಿದ್ದಾರೆ ಎಂಬುದು ಜಗಜ್ಜಾಹೀರು ಆಗಿದೆ ಎಂದು ದಿಗ್ವಿಜಯ್ಸಿಂಗ್ ಕಿಡಿಗಾರಿದರು.
2013ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಗೆ ನಾವು ನೀಡಿದ್ದ 165 ಭರವಸೆಗಳ ಪೈಕಿ ಈಗಾಗಲೆ 136 ಭರವಸೆಗಳನ್ನು ಅನುಷ್ಠಾನ ಮಾಡಿದ್ದೇವೆ. ಶೇ.85ರಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ. ಅದರ ಆಧಾರದಲ್ಲೆ 2018ರಲ್ಲಿ ಜನತೆಯ ಮುಂದೆ ಹೋಗುತ್ತೇವೆ ಎಂದು ಅವರು ಹೇಳಿದರು.
ರಾಜ್ಯ ಬಜೆಟ್ ಅಧಿವೇಶನ ಮುಗಿದ ನಂತರ ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಅಥವಾ ಬೇರೆ ಸೂಕ್ತವಾದ ಸ್ಥಳದಲ್ಲಿ ಕೆಪಿಸಿಸಿಯ ಎರಡು ದಿನಗಳ ಅಧಿವೇಶನವನ್ನು ನಡೆಸಲಾಗುವುದು. ಅಲ್ಲದೆ, ಜಿಲ್ಲಾ ಸಮಿತಿ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ರೈತರು, ಕಾರ್ಮಿಕರು ಸೇರಿದಂತೆ ವಿವಿಧ ವಿಭಾಗಗಳ ಸಭೆಯನ್ನು ನಡೆಸಲಾಗುವುದು ಎಂದು ದಿಗ್ವಿಜಯ್ಸಿಂಗ್ ತಿಳಿಸಿದರು.
ರಾಜ್ಯವು ಕಳೆದ ಆರು ವರ್ಷಗಳಿಂದ ತೀವ್ರ ಬರಗಾಲ ಎದುರಿಸುತ್ತಿದ್ದು, 176 ತಾಲೂಕುಗಳ ಪೈಕಿ 160 ತಾಲೂಕುಗಳು ಬರಪೀಡಿತವಾಗಿವೆ. ರಾಜ್ಯ ಸರಕಾರವು ಕುಡಿಯುವ ನೀರು, ರೈತರಿಗೆ ಬೆಳೆ ನಷ್ಟ ಪರಿಹಾರ, ಉದ್ಯೋಗ ಕಲ್ಪಿಸಲು ಕೇಂದ್ರ ಸರಕಾರಕ್ಕೆ 4702 ಕೋಟಿ ರೂ.ನೆರವು ಕೋಡಿ ಪ್ರಸ್ತಾವನೆ ಕಳುಹಿಸಿದೆ. ಆದರೆ, ಘೋಷಣೆ ಮಾಡಿರುವುದು 1700 ಕೋಟಿ ರೂ., ಈ ಪೈಕಿ ಬಿಡುಗಡೆ ಮಾಡಿರುವುದು ಕೇವಲ 450 ಕೋಟಿ ರೂ.ಮಾತ್ರ. ರಾಜ್ಯ ಸರಕಾರವು ಬರಪರಿಸ್ಥಿತಿ ಅಧ್ಯಯನಕ್ಕಾಗಿ ನಾಲ್ಕು ಸಚಿವ ಸಂಪುಟ ಉಪ ಸಮಿತಿಗಳನ್ನು ರಚಿಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿದೆ.
-ದಿಗ್ವಿಜಯ್ಸಿಂಗ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ







