ಫೆ.28ರಂದು ದೇವರಾಜು ಅರಸು ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭ
ಮದರ್ ತೆರೆಸಾ ಸಂತ ಪದವಿ ಪಾಪ್ತಿ ಸಂಭ್ರಮಾಚರಣೆ

ಮಂಗಳೂರು.ಫೆ.26:ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಬಿ.ಸುಬ್ಬಯ್ಯ ಶೆಟ್ಟಿ,ಮಾಜಿ ಸಚಿವ ಹಾಗೂ ಹಿರಿಯ ರಾಜಕೀಯ ಮುತ್ಸದ್ಧಿ ಬಿ.ಎ.ಮೊಯ್ದಿನ್ ಹಾಗೂ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ರವರಿಗೆ ಹಾಗೂ ಮದರ್ ತೆರೆಸಾ ಸಂತ ಪದವಿ ಪ್ರಾಪ್ತಿ ಸಂಭ್ರಮಾಚರಣೆ ಸಮಾರಂಭ ಫೆ,28ರಂದು ಬಂಟ್ವಾಳದಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ,ಪಾಣೆ ಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಬಂಟ್ವಾಳದ ಶಾಸಕ,ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಅರಣ್ಯ,ಪರಿಸರ ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಫೆ.28ರಂದು ಬಂಟ್ವಾಳದ ಶ್ರೀ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಸಂಜೆ 3ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬಡವರಿಗೆ ಭೂರಹಿತರಿಗೆ ಭೂಮಿಯ ಒಡೆತನದ ಹಕ್ಕು ಪ್ರಾಪ್ತವಾದಗಲೇ ಪ್ರಜಾಪ್ರಭುತ್ವದ ಆಶಯ ಈಡೇರಿಕೆಯಾಗುತ್ತದೆ ಎಂದು ನಂಬಿದ್ದ ದೇವರಾಜು ಅರಸು ಅವರ ದೂರದೃಷ್ಟಿಯ ಫಲವಾಗಿ ಜಿಲ್ಲೆಯಲ್ಲಿ ಬಹುತೇಕ ಜನರು ಪಟ್ಟಾದಾರರಾಗುವಂತಾಗಿದೆ.ಇಂದಿರಾ ಗಾಂಧಿಯವರ 20 ಅಂಶದ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ ದೇವರ ರಾಜ ಅರಸು ಅವರನ್ನು ಸ್ಮರಿಸುವ ನಿಟ್ಟಿನಲ್ಲಿ ಹಾಗೂ ಅರಸು ಅವರ ಆಶಯವನ್ನು ಸಾಕಾರಗೊಳಿಸಲು ಶ್ರಮಿಸಿದ, ಈ ಪ್ರಶಸ್ತಿಯನ್ನು ಪಡೆದ ಜಿಲ್ಲೆಯ ಮೂವರು ಗಣ್ಯರನ್ನು ಅಭಿನಂದಿಸಲು ತೀರ್ಮಾನಿಸಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಮಾನಾಥ ರೈ ತಿಳಿಸಿದರು.
ಈ ಸಮಾರಂಭದಲ್ಲಿ ಸಂಸದ ಆಸ್ಕರ್ ಫೆರ್ನಾಂಡೀಸ್,ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್,ವಂ.ಡಾ.ಆ್ಯಂಟೋನಿ ಪ್ರಕಾಶ್ ಮೊಂತೆರೋ,ಸಚಿವರಾದ ಯು.ಟಿ.ಖಾದರ್,ಪ್ರಮೋದ್ ಮಧ್ವರಾಜ್,ಮಾಜಿ ಸಚಿವ ಅಭಯ ಚಂದ್ರ ಜೈನ್,ಜಿಲ್ಲೆಯ ಎಲ್ಲಾ ಶಾಸಕರು, ಡಾ.ಸದಾನಂದ ಪೆರ್ಲ,ಮುದ್ದು ಮೂಡುಬೆಳ್ಳೆ, ಮುಹಮ್ಮದಾಲಿ ,ಹಾಗೂ ಇತರ ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ ಎಂದು ರಮಾನಾಥ ರೈ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ,ಮನಪಾ ಸದಸ್ಯೆ ಕವಿತಾ ಸನಿಲ್ ಶಾಲೆಟ್ ಅಂಬೇಡ್ಕರ್,ನಝೀರ್ ಬಜಾಲ್,ಶಬೀರ್ ಮೊದಲಾದವರು ಉಪಸ್ಥಿತರಿದ್ದರು.







