ಪುತ್ತೂರು ಎಪಿಎಂಸಿ ಸಾಮಾನ್ಯ ಸಭೆ: ಶಾಖೆಗಳಲ್ಲಿ ಕ್ಯಾಂಪ್ಕೋ ಹೊರತು ಇತರ ವ್ಯಾಪಾರಿಗಳಿಗೆ ಖರೀದಿಗೆ ಅವಕಾಶವಿಲ್ಲ

ಪುತ್ತೂರು, ಫೆ.28: ಎಪಿಎಂಸಿಯ ಶಾಖೆಗಳಲ್ಲಿ ಅಡಕೆ ಖರೀದಿಗೆ ಕ್ಯಾಂಪ್ಕೋಗೆ ಅವಕಾಶ ನೀಡಿದಂತೆ ಇತರ ವ್ಯಾಪಾರಿಗಳಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಪುತ್ತೂರು ಎಪಿಎಂಸಿ ನಿರ್ಣಯ ಕೈಗೊಂಡಿತು.
ಕಡಬ ಕೃಷ್ಣ ಶೆಟ್ಟಿ ಅಧ್ಯಕ್ಷತೆಯಲ್ಲಿ ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ವಿಷಯ ಪ್ರಸ್ತಾಪಿಸಿದ ಅಧ್ಯಕ್ಷರು ಕ್ಯಾಂಪ್ಕೋದಂತಹ ಸಹಕಾರಿ ಸಂಘದಿಂದ ಎಪಿಎಂಸಿಗೆ ದೊಡ್ಡ ಪ್ರಮಾಣದ ಸೆಸ್ ಸಂಗ್ರಹ ಆಗುತ್ತಿದೆ. ವ್ಯಾಪಾರಿಗಳಿಂದ ಸಣ್ಣ ಪ್ರಮಾಣದ ಸೆಸ್ ಸಂಗ್ರಹವಾಗುತ್ತಿದೆ. ಎಪಿಎಂಸಿಯ ಉಪಶಾಖೆಗಳಲ್ಲಿ ವ್ಯಾಪಾರಿಗಳು ಅಡಕೆ ಖರೀದಿ ನಡೆಸಲು ಅನುಮತಿ ನೀಡುವಂತೆ ಕೇಂದ್ರ ಕಚೇರಿಗೆ ಶಿವಮೊಗ್ಗದ ವ್ಯಕ್ತಿಯೋರ್ವರು ಅರ್ಜಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಪ್ರಾಯ ತಿಳಿಸುವಂತೆ ಸೂಚಿಸಿದರು.
ಈ ಬಗ್ಗೆ ಸಭೆಯಲ್ಲಿ ದೀರ್ಘ ಚರ್ಚೆ ನಡೆಯಿತು. ಪುತ್ತೂರು ಎಪಿಎಂಸಿಗೆ ಅಡಕೆಯಲ್ಲಿ ಒಟ್ಟು 3 ಕೋಟಿ ರೂ. ಸೆಸ್ ಸಂಗ್ರಹವಾದರೆ, ಅದರಲ್ಲಿ 2 ಕೋಟಿ ರೂ.ನಷ್ಟು ಕ್ಯಾಂಪ್ಕೋದಿಂದಲೇ ಬರುತ್ತದೆ. ಅಂದರೆ ವ್ಯಾಪಾರಿಗಳಿಂದ ಸಂಗ್ರಹ ಆಗುತ್ತಿರುವ ಸೆಸ್ ಪ್ರಮಾಣ ತೀರಾ ಕಡಿಮೆ. ಒಂದು ವೇಳೆ ಉಪಶಾಖೆಯಲ್ಲಿ ವ್ಯಾಪಾರಿಗಳು ಅಡಕೆ ಖರೀದಿ ಮಾಡಿದರೆ, ಎಪಿಎಂಸಿಗೆ ಬರುವ ಸೆಸ್ ಕೂಡ ಕಡಿಮೆಯಾಗುತ್ತದೆ. ಮಾತ್ರವಲ್ಲ ಆನ್ಲೈನ್ ಮಾರುಕಟ್ಟೆಗೂ ಹಿನ್ನಡೆಯಾಗುತ್ತದೆ. ಈಗಾಗಲೇ ವ್ಯಾಪಾರಿಗಳು ಹೊರ ಮಾರುಕಟ್ಟೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಸಹಕಾರಿ ಸಂಘವಾದರೆ ಇಂತಹ ಸಮಸ್ಯೆ ಉದ್ಭವಿಸದು. ಆದ್ದರಿಂದ ದೂರು ಅರ್ಜಿಗೆ ಪುರಸ್ಕಾರ ನೀಡದಂತೆ ಸದಸ್ಯರು ಅಭಿಪ್ರಾಯ ಸೂಚಿಸಿದರು.
ಈ ಬಗ್ಗೆ ನಿರ್ಣಯ ಕೈಗೊಂಡ ಎಪಿಎಂಸಿ ಸಾಮಾನ್ಯ ಸಭೆ, ಸದ್ಯ ಚಾಲ್ತಿಯಲ್ಲಿರುವಂತೆ ಮುಂದುವರಿಯುವುದು ಸೂಕ್ತ. ವ್ಯಾಪಾರಿಗಳು ಎಪಿಎಂಸಿ ಯಾರ್ಡ್ ಬಿಟ್ಟು ಬೇರೆ ಕಡೆ ವ್ಯಾಪಾರ ಮಾಡುವಂತಿಲ್ಲ. ಕ್ಯಾಂಪ್ಕೋದಂತಹ ಸಹಕಾರಿ ಸಂಸ್ಥೆ ಎಪಿಎಂಸಿ ಯಾರ್ಡ್ ಜತೆಗೆ ತನ್ನ ಶಾಖೆಯಲ್ಲೂ ವ್ಯಾಪಾರ ಮಾಡುವುದು ಉತ್ತಮ ಎಂದು ನಿರ್ಣಯ ಕೈಗೊಳ್ಳಲಾಯಿತು.
ನೆಲ್ಯಾಡಿಯಲ್ಲಿ ನಡೆದ ಕೃಷಿ ಮೇಳಕ್ಕೆ 20 ಸಾವಿರ ರೂ. ಹಣದ ನೆರವು ನೀಡಿದರ ಬಗ್ಗೆ ಸದಸ್ಯ ಪ್ರಮೋದ್ ಆಕ್ಷೇಪ ವ್ಯಕ್ತಪಡಿಸಿದರು. ಈ ಹಿಂದೆ ಸಾಹಿತ್ಯ ಸಮ್ಮೇಳನಕ್ಕಾಗಿ ಹಣದ ನೆರವು ಕೇಳಿದ್ದೆ. ಆದರೆ ಅಧ್ಯಕ್ಷರು ಅದನ್ನು ಸರಾಸಗಟಾಗಿ ತಿರಸ್ಕರಿಸಿದ್ದಾರೆ. ಇದೀಗ ನೆಲ್ಯಾಡಿಯ ಕಾರ್ಯಕ್ರಮಕ್ಕೆ ಅನುದಾನ ನೀಡುತ್ತಾರೆ ಎಂದರೆ ನಾವು ಏನೆಂದು ತಿಳಿದುಕೊಳ್ಳಬೇಕು. ಸಾಜಾ ರಾಧಾಕೃಷ್ಣ ಆಳ್ವ, ಸೀತಾರಾಮ ಗೌಡ ಅವರುಗಳು ಹಣ ಕೇಳಿದರೆ ಎಲ್ಲಿಗೂ ನೀಡುತ್ತೀರೋ ಎಂದು ಪ್ರಶ್ನಿಸಿದರು.
ಇದು ಸಭೆಯಲ್ಲಿ ಸದಸ್ಯರ ನಡುವೆ ಚರ್ಚೆಗೆ ಕಾರಣವಾಯಿತು. ಉತ್ತರಿಸಿದ ಅಧ್ಯಕ್ಷರು, ಕೃಷಿ ಸಂಬಂಧಪಟ್ಟ ವಿಚಾರಕ್ಕಾಗಿ ಹಣದ ನೆರವು ನೀಡಲಾಗಿದೆ. ಅದೂ ಎಪಿಎಂಸಿ ಅನುದಾನದಿಂದ ನೀಡಿಲ್ಲ. ಗುತ್ತಿಗೆದಾರರಿಗೆ ಮಾಹಿತಿ ನೀಡಿ, ಅವರು 20 ಸಾವಿರ ರೂ. ನೀಡಿದ್ದಾರೆ. ಕೃಷಿ ಸಂಬಂಧಪಟ್ಟ ಯಾವುದೇ ವಿಚಾರಕ್ಕೆ ಹಣದ ನೆರವು ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು. ಕೃಷಿ ಹೊರತುಪಡಿಸಿ ಬೇರೆ ಯಾವುದೇ ಕಾರ್ಯಕ್ರಮಕ್ಕೆ ಹಣ ನೀಡುವುದಾದರೆ ಅದಕ್ಕೆ ವಿರೋಧವಿದೆ ಎಂದು ಸೀತಾರಾಮ ಗೌಡ ಧ್ವನಿಗೂಡಿಸಿದರು.
ಇದನ್ನು ಒಪ್ಪಿಕೊಳ್ಳದ ಪ್ರಮೋದ್, ಗುತ್ತಿಗೆದಾರರು ಸುಮ್ಮನೆ ಹಣ ನೀಡುವುದಿಲ್ಲ. ಎಪಿಎಂಸಿಯಲ್ಲಿ ನಡೆದ ಕಾಮಗಾರಿ ಹಿನ್ನೆಲೆಯಲ್ಲಿ ಹಣ ನೀಡಿದ್ದಾರೆ. ಅಲ್ಲದೇ ನೆಲ್ಯಾಡಿ ಕೃಷಿ ಮೇಳದಲ್ಲಿ ಪುತ್ತೂರು ಎಪಿಎಂಸಿಯ ಹೆಸರನ್ನೂ ಎಲ್ಲೂ ಉಲ್ಲೇಖಿಸಿಲ್ಲ. ಈ ಕಾರಣಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದ್ದೇನೆ ಎಂದರು.
ಚರ್ಚೆಗೆ ತೆರೆ ಎಳೆದ ಮಾಣಿಕ್ಯರಾಜ್ ಪಡಿವಾಳ್, ಹೆಸರು ಉಲ್ಲೇಖ ಮಾಡಿರದ ವಿಚಾರದ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚಿಸಿದ್ದೇನೆ. ಕಣ್ತಪ್ಪಿನಿಂದ ಪ್ರಮಾಣ ಉಂಟಾಗಿದೆ ಎಂದು ತಿಳಿಸಿದ್ದಾರೆ. ದೊಡ್ಡ ಕಾರ್ಯಕ್ರಮದಲ್ಲಿ ಸಣ್ಣ ತಪ್ಪಾಗುವುದು ಸಹಜ ಎಂದು ಸಭೆಗೆ ತಿಳಿಸಿದರು.





