ಗ್ರಾಮೀಣ ಪ್ರದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಉತ್ತಮ ಅವಕಾಶ: ರಮಾನಾಥ ರೈ

ಪುಂಜಾಲಕಟ್ಟೆ, ಫೆ. 28: ಪುಂಜಾಲಕಟ್ಟೆಯಂತಹ ಗ್ರಾಮೀಣ ಭಾಗದಲ್ಲಿ ಕಾಲೇಜು ಅಭಿವೃದ್ಧಿ ಪಡಿಸಿರುವುದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಮಂಗಳವಾರ ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುಂಜಾಲಕಟ್ಟೆ ಕಾಲೇಜಿನಲ್ಲಿ 592 ವಿದ್ಯಾರ್ಥಿಗಳಲ್ಲಿ ಶೇಕಡಾ 80 ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿರುವುದು ಕ್ರಾಂತಿಕಾರಕ ಬದಲಾವಣೆಯಾಗಿದೆ. ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುವುದರಿಂದ ಕುಟುಂಬ ಹಾಗೂ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರಾಜೇಂದ್ರ ಕೆ.ವಿ., ರಾಜಶೇಖರ ಶೆಟ್ಟಿ, ಶೈಲೇಶ್ ಕುಮಾರ್, ಪದ್ಮನಾಭ ಸಾಲಿಯಾನ್, ಕೆ.ಎ.ವೆಂಕಪ್ಪ ಬಂಗೇರ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮೋಹನ್ ಸಾಲ್ಯಾನ್, ಮಾಜಿ ಅಧ್ಯಕ್ಷ ದೇವಪ್ಪ ಶೆಟ್ಟಿ ಕುಂಟಜಾಲು, ಸದಸ್ಯರಾದ ಉಸ್ಮಾನ್ ಪಿ., ಹೈದರ್ ಹಳ್ಳಿಮನೆ, ಗಣೇಶ್ ಮೂಲ್ಯ, ದಿನೇಶ್ ಆಚಾರ್ಯ, ಸಾಂತಪ್ಪ ಪುರಿಯ, ಮಾಲತಿ, ವಿನೋದ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಗೌಡ ವೇದಿಕೆಯಲ್ಲಿದ್ದರು.
ಇದೇ ವೇಳೆ ಶಾಸಕ ಕೆ.ವಸಂತ ಬಂಗೇರ, ಕಟ್ಟಡ ನಿರ್ಮಾಣ ಕಾಮಗಾರಿಗೆ ಸಹಕರಿಸಿದ ರಾಜೇಂದ್ರ ಕೆ.ವಿ., ದೇವಪ್ಪ ಶೆಟ್ಟಿ, ರೈಟ್ಸ್ ಸಂಸ್ಥೆಯ ಸುನಿಲ್, ಅನೀಶ್, ಪ್ರಾ.ಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಕೆ., ಪ್ರೌ.ಶಾಲಾ ಉಪ ಪ್ರಾಂಶುಪಾಲೆ ಅರ್ಚನಾ, ಪ.ಪೂ.ಕಾಲೇಜು ಪ್ರಾಂಶುಪಾಲ ಸುಕುಮಾರ್ರನ್ನು ಸಮ್ಮಾನಿಸಲಾಯಿತು. ವಿವಿಧ ಬೇಡಿಕೆಗಳ ಮನವಿಯನ್ನು ಪ್ರಾಂಶುಪಾಲರು ಸಚಿವರಲ್ಲಿ ಮತ್ತು ಶಾಸಕರಲ್ಲಿ ಸಲ್ಲಿಸಿದರು.
ಕಾಲೇಜು ಪ್ರಾಂಶುಪಾಲ ಪ್ರೊ. ಗಣಪತಿ ಭಟ್ ಕುಳಮರ್ವ ಸ್ವಾಗತಿಸಿದರು. ಪ್ರೊ. ಚೇತನ್ ಪ್ರಸ್ತಾವಿಸಿದರು. ಪ್ರೊ. ಮಾಧವ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ಮತ್ತು ಪ್ರೊ.ಚಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.







