ಮುಲ್ಕಿ: ಶಿಮಂತೂರು ರಸ್ತೆ ತಡೆ ಪ್ರಕರಣ ಸ್ಥಳಕ್ಕೆ ಎಸಿ ಭೇಟಿ
.jpg)
ಮುಲ್ಕಿ, ಫೆ.28: ಕಳೆದ ಕೆಲ ತಿಂಗಳಿನಿಂದ ಸ್ಥಳೀಯ ವ್ಯಕ್ತಿಯೊಬ್ಬರ ಮತ್ತು ಶಿಮಂತೂರು ದೇವಳದ ಆಡಳಿತ ಮಂಡಳಿಯ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟದಿಂದ ಅಂಗರಗುಡ್ಡೆ ಶಿಮಂತೂರು ರಸ್ತೆ ತಡೆ ಪ್ರಕರಣಕ್ಕೆ ಸಂಬಂದಿಸಿದಂತೆ ವಿವಾದ ಬಗೆಹರಿಸಲು ಮಂಗಳೂರು ಎಸಿ ರೇಣುಕಾ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎರಡು ದೂರುದಾರರ ಕಡತಗಳನ್ನು ಪರಿಶೀಲಿಸಿ ಹೇಳಿಕೆಗಳನ್ನು ಪಡೆದುಕೊಳ್ಳುವಾಗ ದೇವಳದ ಆಡಳಿತ ಮಂಡಳಿಯ ಮೊಕ್ತೇಸರರರು ಗೈರಾಗಿದ್ದು ಸ್ಥಳದಲ್ಲಿ ಮಾತಿನ ಚಕಮಕಿ ನಡೆಯಿತು.
ಬೆಳಗ್ಗೆ ಸುಮಾರು 10 ಗಂಟೆಗೆ ಮಂಗಳೂರು ಎಸಿ ರೇಣುಕಾ ಪ್ರಸಾದ್ ವಿವಾದಿತ ಜಾಗವನ್ನು ಪರಿಶೀಲಿಸಿದಾಗ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ವಿಜಯ ಕುಮಾರ್ ಶೆಟ್ಟಿ ಎಂಬವರು ಕಳೆದ ಕೆಲ ತಿಂಗಳಿನಿಂದ ಅಧಿಕಾರಿಗಳು ವಿವಾದವನ್ನು ಬಗೆಹರಿಸುವುದಾಗಿ ಅನೇಕ ಸಲ ಬಂದು ಹೋಗಿದ್ದಾರೆ. ಆದರೆ, ವಿವಾದ ಈ ವರೆಗೂ ಬಗೆಹರಿದಿಲ್ಲ. ರಸ್ತೆ ತಡೆಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಕಮಿಷನರ್ ಅವರನ್ನು ಸಮಾದಾನ ಮಾಡಿ ದೇವಳದ ಆಡಳಿತ ಮಂಡಳಿ ಹಾಗೂ ಸ್ಥಳಿಯ ದೂರುದಾರರಾದ ಸೌಭಾಗ್ಯ ರಾಜೇಶ್ ಹೇಳಿಕೆ ಪಡೆದು ಕೂಡಲೇ ರಸ್ತೆ ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಈ ನಡುವೆ ದೇವಳದ ಆಡಳಿತ ಮಂಡಳಿಯ ಮೊಕ್ತೇಸರರು ಸ್ಥಳದಲ್ಲಿ ಉಪಸ್ಥಿತರಿಲ್ಲದ ಬಗ್ಗೆ ದೇವಳದ ಮ್ಯಾನೇಜರ್ ಬಾಲಕೃಷ್ಣ ಕಾಮತ್ರನ್ನು ಎಸಿ ಪ್ರಶ್ನಿಸಿದಾಗ ನೋಟಿಸು ಸಿಕ್ಕಿದ್ದು ತಡವಾಗಿದೆ ಎಂದರು. ಕೂಡಲೇ ನೋಟೀಸು ತಡವಾದ ಬಗ್ಗೆ ಎಸಿಯವರು ಅತಿಕಾರಿಬೆಟ್ಟು ಪ್ರಬಾರ ವಿಎ ಸುನಿಲ್ರವರನ್ನು ತರಾಟೆಗೆ ತೆಗೆದುಕೊಂಡರು.
ಬಳಿಕ ಒಂದು ಕಡೆಯ ಹೇಳಿಕೆಯನ್ನು ಎಸಿ ಪಡೆದುಕೊಂಡು ಆದಷ್ಟು ಶೀಘ್ರ ರಸ್ತೆ ತಡೆ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.







