ಒಂದು ದಿನ ಖಂಡಿತ ನ್ಯಾಯ ಸಿಗಲಿದೆ: ಝಕಿಯಾ ಜಾಫ್ರಿ
ಹೊಸದಿಲ್ಲಿ,ಮಾ.2: ಗುಜರಾತ್ ದಂಗೆ ವೇಳೆ ಜೀವಂತ ಸುಟ್ಟು ಹಾಕಲಾದ ಮಾಜಿ ಸಂಸದ ಎಹ್ಸಾನ್ ಜಾಫ್ರಿಯ ವಿಧವೆ ಪತ್ನಿ ಝಕಿಯಾ ಜಾಫ್ರಿ " ಕಳೆದ 15 ವರ್ಷಗಳಿಂದ ಗುಜರಾತ್ ದಂಗೆ ಮತ್ತು ನನ್ನ ಪತಿಯ ಹತ್ಯಾರೋಪಿಗಳ ವಿರುದ್ಧ ಹೋರಾಡುತ್ತಿದ್ದೇನೆ. ನ್ಯಾಯಾಲಯದಿಂದ ನ್ಯಾಯ ಸಿಗಲಿದೆ ಎನ್ನುವ ಭರವಸೆ ನನ್ನಲ್ಲಿದೆ" ಎಂದು ಹೇಳಿದ್ದಾರೆ.
ಝಕಿಯಾ ಜಾಫ್ರಿ 2002 ಗುಜರಾತ್ ದಂಗೆ ಕುರಿತು ಇಲ್ಲಿ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ಮಾತಾಡುತ್ತಿದ್ದರು. ಜನರ ಸಹಾನುಭೂತಿ ನನ್ನ ಜೊತೆ ಇದೆ. ಆದ್ದರಿಂದ ಅಹ್ಮದಾಬಾದ್ನ ಗುಲ್ಬರ್ಗ ಸೊಸೈಟಿ ದಾಳಿ ಮಾಡಿದವರಿಗೆ ನ್ಯಾಯಾಲಯ ಒಂದಲ್ಲ ಒಂದು ದಿನ ಶಿಕ್ಷೆ ವಿಧಿಸುತ್ತಿದೆ ಎನ್ನುವ ಭರವಸೆ ತನಗಿದೆ ಎಂದು ಝಕಿಯಾ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತಾಡಿದ ಇನ್ನೋರ್ವ ಅತಿಥಿ ಟೀಸ್ಟಾ ಸೆಟಲ್ವಾಡ್ ಯಾರದೇ ಹೆಸರೆತ್ತದೆ ಈವತ್ತು ಅತೀದೊಡ್ಡ ಸ್ಥಾನದಲ್ಲಿ ಅತ್ಯಂತ ಅಸಂವಿಧಾನಿಕ ವ್ಯಕ್ತಿ ನಿಯೋಜಿಸಲ್ಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಗುಜರಾತ್ನಲ್ಲಿ ಭಾರತೀಯ ಜನತಾಪಕ್ಷದ ಸರಕಾರ ಇಲ್ಲ. ಬದಲಾಗಿ ಅಲ್ಲಿ ಆರೆಸ್ಸೆಸ್ನ ಸರಕಾರ ಇದೆ. ಇದು ಇಡೀ ಸಮಾಜಕ್ಕೆ ಅಪಾಯಕಾರಿ ಎಂದು ಟೀಸ್ಟಾ ಆರೋಪಿಸಿದರೆಂದು ವರದಿ ತಿಳಿಸಿದೆ.