ದಕ್ಷಿಣ ಆಫ್ರಿಕಾದಲ್ಲಿ ಕನ್ನಡ ನಾಡಿನ ಶ್ರೀಗಂಧದ ಗಿಡ !
ತರೀಕೆರೆಯ ಕೃಷಿಕ ವಿಶುಕುಮಾರ್ ಅವರ ಯಶೋಗಾಥೆಯಿದು

ಚಿಕ್ಕಮಗಳೂರು, ಮಾ.6: ಶ್ರೀಗಂಧದ ಮನುಷ್ಯ ಎಂದು ಜನರಿಂದ ಕರೆಸಿಕೊಳ್ಳುವ ಮೂಲಕ ತರೀಕೆರೆ ತಾಲೂಕಿನ ಕೋಡಿಕ್ಯಾಂಪ್ ನಿವಾಸಿ ವಿಶುಕುಮಾರ್ ಎಂಬ ಕೃಷಿಕರೋರ್ವರು ಕನ್ನಡ ನಾಡಿನ ಶ್ರೀಗಂಧದ ಪರಿಮಳವನ್ನು ದಕ್ಷಿಣ ಆಫ್ರಿಕಾ ಖಂಡದಲ್ಲಿ ಪಸರಿಸುವಂತೆ ಮಾಡಿ ಪ್ರಖ್ಯಾತಿ ಗಳಿಸಿದ್ದಾರೆ.
ತರೀಕೆರೆಯ ವಿಶುಕುಮಾರ್ ದಕ್ಷಿಣ ಆಫ್ರಿಕಾದ ಮಾಲವಿ ದೇಶದಲ್ಲಿ ಇಸ್ಮಾಯೀಲ್ ಎಂಬವರಿಗೆ ಸೇರಿದ ನರ್ಸರಿಯಲ್ಲಿ ಶ್ರೀಗಂಧದ ಬೀಜ ಹಾಕಿ ಬಂದಿದ್ದಾರೆ. ಮಾಲವಿಯ ಪೆಸಿಫಿಕ್ ಹೆಸರಿನ ಕೃಷಿ ಅಭಿವೃದ್ದಿಗೆ ಸಂಬಂಧಿಸಿದ ಖಾಸಗಿ ಕಂಪನಿ ವಿಶುಕುಮಾರ್ರನ್ನು ಸಂಪರ್ಕಿಸಿ ಆಹ್ವಾನಿಸಿತ್ತು.
ಈ ಬೆಳವಣಿಗೆಗೆ ಕಾರಣ ಮಾಲವಿ ದೇಶದ ರೋಂಭೋ ಎಂಬಲ್ಲಿನ ರೈತ ಇಸ್ಮಾಯಿಲ್. ಗೂಗಲ್ನಲ್ಲಿ ವಿಶುಕುಮಾರ್ ಸಾಧನೆಯನ್ನು ಕಂಡು ತಮಗಿರುವ 5,000 ಎಕರೆ ಭೂಮಿಯಲ್ಲಿ ಶ್ರೀಗಂಧ ಬೆಳೆಯುವ ಉತ್ಸಾಹ ತೋರಿಸಿದ್ದಾರೆ.
ಈಗಾಗಲೇ ಮಾಲವಿ ದೇಶದ ಮಣ್ಣನ್ನು ತಂದಿರುವ ವಿಶುಕುಮಾರ್ ಬೆಂಗಳೂರಿನ ಇಂಡಿಯನ್ ವುಡ್ ಸೈನ್ಸ್ ಟೆಕ್ನಾಲಜಿಗೆ ಪರೀಕ್ಷೆಗೆ ಕಳುಹಿಸಿದ್ದಾರೆ. ವಿಶುಕುಮಾರ್ರ ಈ ಸಾಧನೆಗೆ ತರೀಕೆರೆ ತಾಲೂಕಿನ ಜನರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ವಿಶುಕುಮಾರ್ ಹಲವು ವರ್ಷಗಳಿಂದ ಶ್ರೀಗಂಧದ ರಕ್ಷಣೆಗೆಗಾಗಿ ಕಷ್ಟ ಪಟ್ಟಿದ್ದಕ್ಕೆ ಈಗ ಅದರಿಂದ ನೆಮ್ಮದಿ ಸಿಗುವಂತಾಗಿದೆ. ಥೈಲ್ಯಾಂಡ್ ದೇಶದಿಂದ ಆಹ್ವಾನ ಪಡೆದಿರುವ ವಿಶುಕುಮಾರ್ ಮುಂದಿನ ತಿಂಗಳು ಆ ದೇಶದಲ್ಲೂ ಶ್ರೀಗಂಧದ ಬೀಜವನ್ನು ಬಿತ್ತಿ ಬರಲಿದ್ದಾರೆ.
2002ರಲ್ಲಿ ಮದ್ಯಪ್ರದೇಶದ ಇಂದೋರ್ ಜಿಲ್ಲೆಯ ನಂದಿಕೇಡ್ ಎಂಬಲ್ಲಿ ಬೆಳೆಗಾರರೋರ್ವರ 5 ಎಕರೆ ಭೂಮಿಯಲ್ಲಿ ಶ್ರೀಗಂಧದ ಗಿಡ ನೆಟ್ಟು ಬಂದಿದ್ದರು. ಶ್ರೀಗಂಧದ ಬೆಳೆಯುವ ಉತ್ಸಾಹ ಇರುವವರು ವಿಶುಕುಮಾರ್ರನ್ನು 9739121848 ಅಥವಾ Sandal.vk@gmail.com ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.ತರೀಕೆರೆ ತಾಲೂಕಿನ ದೊರನಾಳು ಮತ್ತು ಬೇಲೇನಹಳ್ಳಿಯಲ್ಲಿ ವಿಶುಕುಮಾರ್ ಹಲವು ವರ್ಷಗಳಿಂದ ಶ್ರೀಗಂಧದ ಮರಗಳ ಪೋಷಣೆ ಮತ್ತು ಪಾಲನೆ ಮಾಡಿಕೊಂಡು ಬಂದಿದ್ದಾರೆ. ಸ್ವತಃ 4.5 ಎಕರೆ ಭೂಮಿ ಸಹಿತ ಬೇರೆಯವರ ಸೈಟ್ಗಳಲ್ಲಿ ಶ್ರೀ ಗಂಧದ ಮರಗಳನ್ನು ಬೆಳೆಯುವ ಮೂಲಕ ಲಕ್ಷಾಂತರ ಆದಾಯವನ್ನು ಪಡೆದಿದ್ದಾರೆ. ಲೇಹೌಟ್ಗಳಲ್ಲಿ ಭೂಮಿ ಖಾಲಿ ಬಿಡುವ ಬದಲು ಶ್ರೀಗಂಧದ ಗಿಟ ನೆಟ್ಟರೆ 15 ವರ್ಷಗಳಲ್ಲಿ ಉತ್ತಮ ಆದಾಯ ಗಳಿಸಬಹುದು ಎನ್ನುತ್ತಾರೆ ವಿಶುಕುಮಾರ್.
ತರೀಕೆರೆಯ ದೊರನಾಳು ಗ್ರಾಮದಲ್ಲಿ 13 ವರ್ಷಗಳ 1800 ಮರಗಳು 4.5 ಎಕರೆ ಭೂಮಿಯಲ್ಲಿ ವಿಶುಕುಮಾರ್ ಶ್ರೀಗಂಧ ಬೆಳೆಸಿದ್ದಾರೆ. ಅಲ್ಲದೇ ಬೇಲೇನಹಳ್ಳಿಯಲ್ಲಿ ಸೈಟ್ ಒಂದರಲ್ಲಿ ತಲಾ 24 ಗಿಡಗಳಂತೆ ಸುಮಾರು 100 ಸೈಟ್ಗಳಲ್ಲಿ 2400 ಶ್ರೀಗಂಧದ ಗಿಡಗಳನ್ನು 3 ವರ್ಷಗಳ ಹಿಂದೆ ನೆಟ್ಟಿದ್ದಾರೆ. ಇಂತಹ ಸೈಟ್ಗಳಿಗೆ ಉತ್ತಮ ಭೇಡಿಕೆಯಿದ್ದು, ತುಮಕೂರು, ಬೆಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ಜನರು ಸೈಟ್ ಖರೀದಿಸಿ ಮನೆ ಮಾಡುತ್ತಿದ್ದಾರೆ. ಸೈಟ್ಗಳಲ್ಲಿ ಬೆಳೆಯಲ್ಪಟ್ಟ ಶ್ರೀಗಂಧದ ಮರಗಳಿಂದ ಬರುವ ಆದಾಯವನ್ನು ಶೇ.70ರಷ್ಟು ಮಾಲಿಕ, ಶೆ.20ರಷ್ಟು ಬೆಳೆ ಹಾಕಿದವರು, ಉಳಿದ ಶೇ.10 ಹಣ ಸರಕಾರಕ್ಕೂ ಸಂದಾಯವಾಗಲಿದೆ.
ಈಗಾಗಲೇ ಮಾಲವಿ ದೇಶದ ಕೃಷಿ ಇಲಾಖೆ ಅಧಿಕಾರಿಗಳು ಶ್ರೀಗಂಧದ ಬೀಜಗಳನ್ನು ಪಡೆದು ಪರೀಕ್ಷಿಸಿದ್ದಾರೆ. ಮಳೆ ಬೀಳುವ ಹಾಗೂ ಮಳೆ ಬಿಳದ ಎರಡೂ ಪರಿಸರಕ್ಕೆ ಹೊಂದಿಕೊಳ್ಳುವ ಗುಣ ಹಾಗೂ ಇತರೆ ಬೆಳೆಗಳಿಗೆ ಹಾನಿಯಾಗದ ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ. ಕನ್ನಡ ನಾಡಿನ ಶ್ರೀಗಂಧ ಆಫ್ರಿಕಾ ಖಂಡದಲ್ಲಿ ತನ್ನ ಕಂಪನ್ನು ಪಸರಿಸಲಿದೆ.
ತರೀಕೆರೆಯಲ್ಲಿ ಮಾ.21ರಂದು ಶ್ರೀಗಂಧದ ಹುಟ್ಟಿದ ದಿನವನ್ನಾಗಿ ವಿಜೃಂಬಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಲು ಮರದ ತಿಮ್ಮಕ್ಕ ಕಾರ್ಯಕ್ರಮ ಉಧ್ಘಾಟಿಸಲಿದ್ದು, ಶ್ರೀಗಂಧದ ಬೆಳೆ ಕುರಿತಾಗಿ ವಿಚಾರ ಸಂಕಿರಣ ನಡೆಯಲಿದೆ. ಈ ವೇಳೆ ಶ್ರೀಗಂಧದ ಬೆಳೆಯ ಬಗ್ಗೆಗಿನ ಅಧ್ಯಯನ ನಡೆಸಿರುವ ವಿಜ್ಞಾನಿಗಳು, ಬೆಳೆಗಾರರು, ಬೆಳೆಯ ಬಗ್ಗೆ ಉತ್ಸಾಹಿಗಳು ಭಾಗವಹಿಸಲಿದ್ದಾರೆ.
- ವಿಶು ಕುಮಾರ್, ಶ್ರೀಗಂಧದ ಬೆಳೆಗಾರ, ತರೀಕೆರೆ







