ಸೌದಿಯಲ್ಲಿ ಭಾರತೀಯ ಮಹಿಳೆ ಜೀತಮುಕ್ತಿ!
ಸೇಫಾಗಿ ಮನೆ ಸೇರಿಸಿದ ಐಎಸ್ ಎಫ್

ಪುತ್ತೂರು, ಮಾ.7: ಉದ್ಯೋಗ ಅರಸುತ್ತಾ ವಿದೇಶಕ್ಕೆ ತೆರಳಿದ್ದ ಮಹಿಳೆಯೊಬ್ಬರು ಸೌದಿ ಅರೇಬಿಯಾದ ರಿಯಾದ್ ನಲ್ಲಿ ದೈಹಿಕ, ಮಾನಸಿಕ ಹಿಂಸೆಗೆ ತುತ್ತಾಗಿ ಒಂದೂವರೆ ತಿಂಗಳು ಜೀತದಾಳುವಾಗಿಪಡಬಾರದ ಕಷ್ಟಪಟ್ಟ ಮಹಿಳೆಯೊಬ್ಬರು ವೇದಿಕೆಯೊಂದರ ಸಹಾಯದಿಂದ ಇದೀಗ ಸುರಕ್ಷಿತವಾಗಿ ಮನೆ ತಲುಪಿದ್ದಾರೆ.
ವಿಟ್ಲ ಸಮೀಪದ ಮಂಗಿಲಪದವು ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರಿ ಶಬೀನಾ ಬಾನು(38) ಎಂಬವರೇ ರಿಯಾದ್ ನಲ್ಲಿ ಸಮಸ್ಯೆಗೆ ಸಿಲುಕಿ ಕೊನೆಗೆ ಬಚಾವಾಗಿ ಬಂದವರು.
ಈ ಬಗ್ಗೆ ಮಾಹಿತಿ ಪಡೆದ ಸೌದಿ ಅರೇಬಿಯಾದ "ಇಂಡಿಯನ್ ಸೋಷಿಯಲ್ ಫೋರಮ್" ನವರು ತಕ್ಷಣ ಮಧ್ಯಪ್ರವೇಶ ಮಾಡಿ ಮಹಿಳೆಯನ್ನು ಅಪಾಯದಿಂದ ರಕ್ಷಿಸಿದ್ದಾರೆ. ಕೊನೆಗೂ ಭಾರತಕ್ಕೆ ಮರಳಿರುವ ಮಹಿಳೆ ತನ್ನ ಮನೆ ತಲುಪಿದ್ದು, ನಿರಾಳತೆಯ ನಿಟ್ಟಿಸಿರು ಬಿಟ್ಟಿದ್ದಾರೆ.
ಮಧ್ಯಮ ವರ್ಗದ ಶಬೀನಾ ಬಾನು ಅವರು ಪತಿಯನ್ನು ಕಳೆದುಕೊಂಡಿದ್ದು, ಒಬ್ಬ ಪುತ್ರ ಸ್ಥಳೀಯವಾಗಿ ಕೆಲಸ ಮಾಡಿಕೊಂಡಿದ್ದಾರೆ. ಈ ನಡುವೆ ಮಂಗಳೂರಿನ ಏಜೆಂಟ್ ಒಬ್ಬರು ದುಬೈನಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಉತ್ತಮ ಕೆಲಸವಿದೆ. ಒಂದೂವರೆ ಸಾವಿರ ರಿಯಾಲ್ ಸಂಬಳವಿದೆ ಎಂದು ಹೇಳಿದ್ದು, ಇದನ್ನು ನಂಬಿದ ಶಬೀನಾ ಬಾನು ಹೊಸ ಬದುಕಿನ ಕನಸು ಕಾಣುತ್ತಾ ವಿದೇಶಕ್ಕೆ ಹೊರಟಿದ್ದರು.
ಜನವರಿಯಲ್ಲಿ ಸಂಬಂಧಿಕರೊಡನೆ ಮಂಗಳೂರಿನಿಂದ ಗೋವಾಕ್ಕೆ ತೆರಳಿದ ಶಬೀನಾ ಬಾನು ಅಲ್ಲಿಂದ 2017ರ ಜನವರಿ 12ರಂದು ವಿಮಾನ ಹತ್ತಿದ್ದರು. ಮುಂದೆ ನಡೆದ ಯಾವ ಘಟನೆಗಳೂ ಅವರ ನಿಯಂತ್ರಣದಲ್ಲಿ ಇರಲಿಲ್ಲ, ತನ್ನ ಬದುಕಿನಲ್ಲಿ ನಡೆದ ಘಟನೆಗಳನ್ನು ಸ್ವತಃ ಶಬೀನಾ ಬಾನು ಅವರೇ ಹೇಳಿಕೊಂಡಿದ್ದಾರೆ.
ನಾನು ಶಾರ್ಜಾದಲ್ಲಿ ವಿಮಾನದಲ್ಲಿ ಇಳಿದೆ. ಅಲ್ಲಿ ಇಬ್ಬರು ಬರಮಾಡಿಕೊಂಡರು. ಮತ್ತೊಂದು ವಿಮಾನದಲ್ಲಿ ಕೂರಿಸಿದರು. ನನಗೆ ಏನೆಂದೇ ಅರ್ಥವಾಗಲಿಲ್ಲ, ಜನವರಿ 13ರಂದು ಸಂಜೆ ಮತ್ತೊಂದು ಕಡೆ ಇಳಿದೆ. ಅದು ಶಾರ್ಜಾವೇ ಎಂದು ಭಾವಿಸಿದ್ದೆ. ಅದು ಸೌದಿ ಅರೇಬಿಯಾದ ರಿಯಾದ್ ಎಂಬುದು ನನಗೆ ಮತ್ತೆ ತಿಳಿಯಿತು.
ಅರಬಿಯ ಮನೆಯಲ್ಲಿ ಆಳು!
ಅಲ್ಲಿ ಅರಬಿಯ ಮನೆಯಲ್ಲಿ ನನ್ನನ್ನು ಬಿಡಲಾಯಿತು. ಮರುದಿನದಿಂದಲೇ ಜೀತದಾಳಿನಂತೆ ದುಡಿಸಿದರು. ಆಹಾರ ನೀಡಲಿಲ್ಲಿ, ಮನೆಯವರನ್ನು ಸಂಪರ್ಕಿಸಲೂ ಅವಕಾಶ ನೀಡಲಿಲ್ಲ. ಮಧ್ಯರಾತ್ರಿ 12 ಗಂಟೆಯವರೆಗೂ ಕೆಲಸ ಮಾಡಬೇಕಾಯಿತು. ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಎಂದು ಮಂಗಳೂರಿನ ಏಜೆಂಟ್ ನಂಬಿಸಿದ್ದ. ಅಲ್ಲಿ ನೋಡಿದಾಗ ಎಲ್ಲವೂ ತಲೆಕೆಳಗಾಯಿತು. 7 ದಿನ ಆ ಮನೆಯಲ್ಲಿ ಕೆಲಸ ಮಾಡಿದೆ. ಸಂಪೂರ್ಣ ಸೊರಗಿ ಹೋದೆ.
1 ವಾರ ಕಳೆದ ಬಳಿಕ ಮತ್ತೊಬ್ಬ ಅರಬಿಯ ಮನೆಗೆ ಕರೆದೊಯ್ದು ಬಿಟ್ಟರು. ಅಲ್ಲೂ ಮನೆ ಕೆಲಸ. ನಾನು ಒಪ್ಪದಿದ್ದರೂ ಕೇಳಲಿಲ್ಲ, ಹಾಗೂ ಹೀಗೂ ಕಾಡಿ ಬೇಡಿ ಮನೆಗೆ ಫೋನ್ ಸಂಪರ್ಕ ಪಡೆದುಕೊಂಡು ಸಹೋದರ ಇಬ್ರಾಹಿಂ ಜೊತೆ ಮಾತನಾಡಿ ಕಷ್ಟ ಹೇಳಿಕೊಂಡೆ. ಒಂದು ದಿನ ಕೆಲಸ ಮಾಡಲಾಗದೆ ಸೋತಾಗ ಮಾಲಕ ತನ್ನ ತಲೆಗೆ ಹೊಡೆದು ರಕ್ತ ಸುರಿಯಿತು. ಆದರೂ ಮದ್ದು ಕೊಡಿಸಲಿಲ್ಲ. ಆ ಮನೆಯಲ್ಲಿ ಒಂದು ತಿಂಗಳು ಕೆಲಸ ಮಾಡಿದ್ದೇನೆ.
ಏಜೆಂಟ್ 1500 ರಿಯಾಲ್ ಸಂಬಳದ ಭರವಸೆ ನೀಡಿದ್ದ. ನನಗೆ ಮಾತ್ರ ನಯಾ ಪೈಸೆಯೂ ಸಿಗಲಿಲ್ಲ. ನನ್ನ ತಮ್ಮ ನನಗಾದ ಕಷ್ಟವನ್ನು ಸಂಬಂಧಿಕರ ಮೂಲಕ ಇಂಡಿಯನ್ ಸೋಷಿಯಲ್ ಫೋರಮ್ ನವರಿಗೆ ತಿಳಿಸಿದ್ದ. ಅವರು ನನ್ನ ಪಾಲಿಗೆ ದೇವರಂತೆ ಒದಗಿದರು. ಇಲ್ಲದಿದ್ದರೆ ನಾನು ಅಲ್ಲಿ ಹೆಣವಾಗುತ್ತಿದ್ದೆ….ಹೀಗೆ ಹೇಳುತ್ತಾ ಬಿಕ್ಕಳಿಸಿದರು ಶಬೀನಾ ಬಾನು.
13,600ರಿಯಾಲ್ ಗೆ ಮಾರಿದ್ದರಂತೆ…!
ನನ್ನನ್ನು ಇಂಡಿಯಾಕೆ ಕಳುಹಿಸಿಕೊಡು ಎಂದು ಅರಬಿಯಲಿ ಗೋಗರೆದಾಗ ಹೇಳಿದ ಮಾತೇನು ಗೊತ್ತೇ? 13,600ರಿಯಾಲ್ ಗೆ ನಿನ್ನನ್ನು ಮಾರಿದ್ದಾರೆ. ನಾನು ಏಜೆಂಟನಿಗೂ ಹಣ ನೀಡಿದ್ದೇನೆ. ಭಟ್ಕಳದ ಇನ್ನೊಬ್ಬನಿಗೂ ಹಣ ನೀಡಿದ್ದೇನೆ ಎಂದರು. ನನಗೆ ಹೊಡೆದು ಬಡಿದು ಹಿಂಸೆ ನೀಡಿದ್ದನಲ್ಲದೆ ನನ್ನು ಮೊಬೈಲ್, ಚೈನ್, ಎಲ್ಲವನ್ನೂ ಅವರು ಎತ್ತಿಟ್ಟುಕೊಂಡಿದ್ದರು ಎಂದು ಶಬೀನಾ ಆ ಕರಾಳ ದಿನಗಳನ್ನು ನೆನಪು ಮಾಡಿಕೊಂಡರು. ನಾನು ಸುರಕ್ಷಿತವಾಗಿ ಊರಿಗೆ ಬಂದರೆ ನಿನಗೆ ಸೇವೆ ಕೊಡುತ್ತೇನೆ ಎಂದು ಪಣೋಲಿಬೈಲಿಗೆ ಹರಕೆ ಹೇಳಿಕೊಂಡಿದ್ದೆ ಎಂದರು.
ಇಂಡಿಯನ್ ಸೋಶಿಯಲ್ ಫಾರಂ(ಐಎಂಎಫ್)ನ 5 ಮಂದಿ ಯುವಕರು ನನ್ನನ್ನು ರಕ್ಷಿಸಿ ಸ್ವದೇಶಕ್ಕೆ ಕಳಿಸಿಕೊಟ್ಟರು. ಎಲ್ಲರ ಹೆಸರು ನನಗೆ ಸರಿಯಾಗಿ ನೆನಪಿಲ್ಲ. ನನ್ನ ಸಹೋದರರಂತೆ ಎಂಬೆಸಿಗೆ ಕರೆತಂದು ಅರಬಿಗೆ 2ಸಾವಿರ ರಿಯಾಲ್ (ರೂ.35ಸಾವಿರ) ನನ್ನ ಎದುರೇ ನೀಡಿ ನನ್ನನ್ನು ಬಿಡಿಸಿಕೊಂಡರು. ಅಲ್ಲದೆ ನನ್ನ ವಿಮಾನದ ಟಿಕೆಟ್ ಜೊತೆಗೆ ಖರ್ಚಿಗೆಂದು 1500 ರಿಯಾಲ್ ಮತ್ತು 500 ರಿಯಾಲ್ ನನ್ನ ಕೈಗೆ ನೀಡಿದರು. ಮನೆಗೆ ಬೇಕಾದ ಒಂದಿಷ್ಟು ಸಾಮಾಗ್ರಿಗಳನ್ನು ಖರೀದಿಸಿ ನೀಡಿದ್ದಾರೆ.
-ಶಬೀನಾ ಬಾನು
ಏಜೆಂಟ್ಗಳು ಅನ್ಯಾಯ ಮಾಡಿದರು: ನನಗೆ ವೀಸಾ ವ್ಯವಸ್ಥೆ ಮಾಡಿದ ಏಜೆಂಟರ್ಗಳಾದ ಮಂಗಳೂರಿನ ಹಮೀದ್, ಯೂಸುಫ್ ಮತ್ತು ಬಟ್ಕಳದ ಮುಕ್ತಾರ್ ಎಂಬವರು ಅನ್ಯಾಯ ಮಾಡಿದ್ದಾರೆ. ಅವರ ವಿರುದ್ದ ಕೇಸ್ ಮಾಡಲು ತೀರ್ಮಾನಿಸಿದ್ದೇನೆ. ನನ್ನಂತೆ ಇತರ ಯಾರಿಗೂ ಇಂತಹ ಅನ್ಯಾಯ ಆಗಬಾರದು ಎಂದು ಪೊಲೀಸ್ ದೂರು ನೀಡಲು ಮುಂದಾಗಿದ್ದೇನೆ.







