ಬೆಳ್ತಂಗಡಿ: ತಾಲೂಕು ಪಂಚಾಯತ್ ಕೆಡಿಪಿ ತ್ರೈಮಾಸಿಕ ಸಭೆ

ಬೆಳ್ತಂಗಡಿ, ಮಾ.7: ಬೆಳ್ತಂಗಡಿ ತಾಲೂಕು ಕೆಡಿಪಿ ತ್ರೈಮಾಸಿಕ ಸಭೆಯು ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ, ಶಾಸಕ ಕೆ. ವಸಂತ ಬಂಗೇರರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
94ಸಿ ಹಾಗೂ ಅಕ್ರಮ ಸಕ್ರಮ ಕಡತ ದಲ್ಲಿ ಅರಣ್ಯ ಹಾಗೂ ಬಫರ್ ವಲಯ ಎಂಬ ಕಾರಣ ನೀಡಿ ಅರಣ್ಯಾಧಿಕಾರಿಗಳು ಅರ್ಜಿಗಳನ್ನು ಉಪಅರಣ್ಯಾಧಿಕಾರಿಗಳಿಗೆ ಕಳುಹಿಸಿಕೊಡುತ್ತಿದ್ದು ಇಂತಹ ಅರ್ಜಿಗಳು ಮತ್ತೆ ವಾಪಾಸು ಬರುವುದಿಲ್ಲ. ಇದರಿಂದ ತೊಂದರೆಯಾಗುತ್ತಿದೆ ಎಂದು ಜಿಪಂ. ಸದಸ್ಯ ಕೊರಗಪ್ಪ ನಾಯ್ಕಿ ಆರೋಪಿಸಿದರು.
ಇದಕ್ಕುತ್ತರಿಸಿದ ಶಾಸಕ ಬಂಗೇರ ಇನ್ನು ಮುಂದೆ ಯಾವ ಅಧಿಕಾರಿಗಳಾಗಲಿ ಅರಣ್ಯ ಅಥವಾ ಬಫರ್ ವಲಯ ಎಂದು ಕಾರಣ ನೀಡಿ ಅರ್ಜಿಗಳನ್ನು ಮೇಲಾಧಿಕಾರಿಗಳಿಗೆ ಕಳುಹಿಸಬಾರದು. ಈಗಿರುವ ಎಲ್ಲಾ ಅರ್ಜಿಗಳನ್ನು ವಾಪಾಸು ತರಿಸಿ ಮರುಪರಿಶೀಲನೆ ಮಾಡಿ ಬಡವರಿಗೆ ಸಿಗುವಂತೆ ಮಾಡಬೇಕು. ಬಡವರ ವಿಷಯದಲ್ಲಿ ಸಣ್ಣ ವಿಷಯಕ್ಕೂ ಕಾನೂನು ಅಡ್ಡಿ ತರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಆಗುವ ಅಕ್ಕಿ ಮೂಟೆಯಲ್ಲಿ 7 ರಿಂದ 8 ಕೆಜಿಯಷ್ಟು ಅಕ್ಕಿ ಕಡಿಮೆಯಾಗುತ್ತಿದ್ದು, ಸರಕಾರದಿಂದ ಬರುವ ಗುಣಮಟ್ಟದ ಅಕ್ಕಿಯ ಬದಲು ಕಳಪೆ ಅಕ್ಕಿ ನೀಡಲಾಗುತ್ತಿದೆ ಎಂದು ಈ ಬಗ್ಗೆ ಹಿಂದಿನ ಕೆಡಿಪಿ ಸಭೆಯಲ್ಲಿ ಸೂಕ್ತ ಕ್ರಮಕ್ಕೆ ಅಧಿಕಾರಿಗಳು ಆದೇಶಿಸಿದರೂ ಅಧಿಕಾರಿಗಳು ಸೂಕ್ತ ತಪಾಸಣೆ ಮಾಡದ ಬಗ್ಗೆ ಶಾಸಕ ಬಂಗೇರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
15 ದಿನದೊಳಗೆ ಎಲ್ಲಾ ರೇಷನ್ ಅಂಗಡಿಗಳನ್ನು ತಪಾಸಣೆ ನಡೆಸಬೇಕು. ತಪ್ಪಿತಸ್ಥರನ್ನು ಪತ್ತೆಹಚ್ಚಿ ಪೊಲೀಸ್ ಪ್ರಕರಣ ದಾಖಲಿಸಿ ಮತ್ತು ಕಳಪೆ ಅಕ್ಕಿ ಹೇಗೆ ವಿತರಣೆಯಾಗುತ್ತಿದೆ ಎಂದು ತಕ್ಷಣ ವರದಿ ನೀಡಬೇಕು. ಸರಕಾರ ನೀಡುವ ಅಕ್ಕಿ ಕಳಪೆಯಾದರೆ ಸರಕಾರದ ಗಮನಕ್ಕೆ ತರಲಾಗುವುದು ಎಂದರು.
ತಾಲೂಕು ಸಮುದಾಯ ಆಸ್ಪತ್ರೆಯಲ್ಲಿ ಶವದ ಶವಪರೀಕ್ಷೆ ವಿಳಂಬವಾಗುತ್ತಿದ್ದು ಕರ್ತವ್ಯ ನಿರತ ವೈದ್ಯರುಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಯಿತು.
ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಕರ್ತವ್ಯ ನಿರತ ವೈದ್ಯರುಗಳು ಶವ ಪರೀಕ್ಷೆ ನಿರಾಕರಿಸಬಾರದು. ಈ ರೀತಿಯ ದೂರುಗಳು ಸಾರ್ವಜನಿಕರಿಂದ ಬಂದರೆ ತಾಲೂಕು ವೈದ್ಯಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸೂಚಿಸಿದರು.
ತಾಲೂಕಿನಲ್ಲಿ ಬಿಪಿಎಲ್ ಕುಟುಂಬಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಗುತ್ತಿದ್ದು ಕೆಲವು ಕಡೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವ ಬಗ್ಗೆ ಹರೀಶ್ ಗೌಡ ಮತ್ತು ಕೊರಗಪ್ಪ ನಾಯ್ಕೆ ಸಭೆಯ ಗಮನಕ್ಕೆ ತಂದರು. ಅರಣ್ಯ ಇಲಾಖೆಯು ಬಡವರೊಂದಿಗೆ ಸಹಕರಿಸಿ ಅವರಿಗೆ ವಿದ್ಯುತ್ ಸಂಪರ್ಕ ಸಿಗುವಂತೆ ಮಾಡಬೇಕು. ಮುಂದಿನ ಎರಡು ತಿಂಗಳಲ್ಲಿ ತಾಲೂಕಿನ ಎಲ್ಲಾ ಮನೆಗಳು ವಿದ್ಯುತ್ ಸಂಪರ್ಕಗೊಳ್ಳಬೇಕು. ಇದಕ್ಕೆ ಮೆಸ್ಕಾಂ ಪ್ರಯತ್ನಿಸಬೇಕು ಎಂದು ಸೂಚಿಸಿದರು.
ತಾಲೂಕಿನಲ್ಲಿ 2 ವರ್ಷಗಳ ಹಿಂದೆ 11 ಅಂಬೇಡ್ಕರ್ ಭವನ ಮಂಜೂರುಗೊಳಿಸಿದ್ದು ಇದರ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಜಿಪಂ. ಸದಸ್ಯ ಶೇಖರ್ ಕುಕ್ಕೇಡಿ ಆರೋಪಿಸಿದರು. ಈ ಬಗ್ಗೆ ಸಮಾಜಕಲ್ಯಾಣ ಅಧಿಕಾರಿ ಮೋಹನ್ ಕುಮಾರ್ರವರನ್ನು ತರಾಟೆಗೆ ತೆಗೆದುಕೊಂಡ ಶಾಸಕ ಬಂಗೇರ ಇದರ ಮಾಹಿತಿಯನ್ನು ಕೇಳಿದಾಗ ಅಧಿಕಾರಿ ಉತ್ತರಿಸಲು ತಡವರಿಸಿದರು. ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ದಿಡುಪೆ ಪರಿಸರದಲ್ಲಿ ನೀರಿನ ಸಮಸ್ಯೆಯಿಂದ ಭತ್ತ ನಾಶವಾಗುತ್ತಿದೆ. ಈ ಬಗ್ಗೆ ರೈತರನ್ನು ಸಂಪರ್ಕಿಸಿದ್ದೀರಾ ಎಂದು ಕೃಷಿ ಅಧಿಕಾರಿ ತಿಲಕ್ಪ್ರಸಾದ್ರವರನ್ನು ಶಾಸಕ ಬಂಗೇರ ಕೇಳಿದಾಗ ಇಲ್ಲ ಎಂದು ಉತ್ತರಿಸಿದರು. ಇದಕ್ಕೆ ಗರಂ ಆದ ಶಾಸಕ ಕೃಷಿಕರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಯ ಬಗ್ಗೆ ಅಸಮದಾನ ವ್ಯಕ್ತಪಡಿಸಿ ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಮತ್ತು ಅವರಿಗೆ ಪರಿಹಾರ ಸಿಗುವ ಹಾಗೆ ನೋಡಿಕೊಳ್ಳಲು ಸೂಚಿಸಿದರು.
ಉಜಿರೆ ಸೂರ್ಯ ರಸ್ತೆಗೆ 1 ವರ್ಷದ ಹಿಂದೆ 25 ಲಕ್ಷ ರೂ. ಮಂಜೂರಾಗಿದ್ದು ಇದನ್ನು ಅನುಷ್ಠಾನಗೊಳಿಸುವಲ್ಲಿ ಸಂಬಂದಪಟ್ಟ ಇಲಾಖೆ ನಿರ್ಲಕ್ಷ್ಯ ವಹಿಸಿದ್ದು ತಕ್ಷಣ ಇದನ್ನು ಅನುಷ್ಠಾನಗೊಳಿಸುವಂತೆ ಬಂಗೇರ ಸೂಚಿಸಿದರು. ಸರಕಾರದಿಂದ ಬರುವ ವಿದ್ಯಾರ್ಥಿ ವೇತನಗಳು ವಿದ್ಯಾರ್ಥಿಗಳಿಗೆ ತಕ್ಷಣ ಸಿಗುವಂತಾಗಬೇಕು, ಸರಕಾರಿ ಬಸ್ ಕೊರತೆಯಿರುವಲ್ಲಿ ಹೊಸ ಬಸ್ ಹಾಕಿಸುವ ಬಗ್ಗೆ ಸಾರಿಗೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು, ಎಳನೀರು ಪ್ರದೇಶದಲ್ಲಿ ಅಪಾಯಕಾರಿ ವಿದ್ಯುತ್ ತಂತಿಗಳಿದ್ದು ಇದನ್ನು ತಕ್ಷಣ ಬದಲಾಯಿಸಬೇಕು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ. ಅಧ್ಯಕ್ಷ ದಿವ್ಯ ಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್ ಸುವರ್ಣ, ತಹಸೀಲ್ದಾರ್ ತಿಪ್ಪೆಸ್ವಾಮಿ, ತಾಪಂ. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಸಿ ಆರ್ ನರೇಂದ್ರ ಇದ್ದರು.







