ಹಾಸ್ಟೆಲ್ ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ವಾರ್ಡನ್ ಹೊಣೆ: ಜೆ.ಆರ್.ಲೋಬೊ
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸಭೆ

ಮಂಗಳೂರು, ಮಾ.8: ಸರಕಾರಿ ಹಾಸ್ಟೆಲ್ನಲ್ಲಿ ಕಲಿಯುವ ಮಾಡುವ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡರೆ ವಾರ್ಡನ್ಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಜೆ.ಆರ್.ಲೋಬೊ ಎಚ್ಚರಿಸಿದ್ದಾರೆ.
ಕಲ್ಯಾಣ ಸಮಿತಿ ವತಿಯಿಂದ ದ.ಕ.ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗುರುಪುರ ವಿದ್ಯಾರ್ಥಿ ನಿಲಯದಲ್ಲಿ ಪರೀಕ್ಷೆಗೆ ಹಾಜರಾದ 4 ಮಕ್ಕಳ ಪೈಕಿ ಇಬ್ಬರು ಮಾತ್ರ ತೇರ್ಗಡೆ ಹೊಂದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅವರು, ಸರಕಾರವು ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ಪರೀಕ್ಷೆಗೆ ಹಾಜರಾದ ಕೇವಲ 4 ವಿದ್ಯಾರ್ಥಿಗಳು ತೇರ್ಗಡೆ ಹೊಂದುವಂತಹ ಪೂರಕ ಸಿದ್ಧತೆ ಮಾಡದಿರುವುದು ಖಂಡನೀಯ. ಇದರಲ್ಲಿ ಇಲಾಖೆಯ ನಿರ್ಲಕ್ಷ ಎದ್ದು ಕಾಣುತ್ತಿವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭ ಮಧ್ಯಪ್ರವೇಶಿಸಿದ ದ.ಕ.ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಜಿಲ್ಲೆಯ ಎಲ್ಲ ಹಾಸ್ಟೆಲ್ಗಳಲ್ಲಿ ವಾರ್ಡನ್ಗಳಿಲ್ಲ. ಇದರಿಂದ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಲ್ಯಾಣ ಸಮಿತಿಯ ಸದಸ್ಯ ಹಾಗು ಶಾಸಕ ಪಿ.ಎ.ನರೇಂದ್ರ ಸ್ವಾಮಿ ಮಾತನಾಡಿ ಎಲ್ಲ ಹಾಸ್ಟೆಲ್ಗಳಲ್ಲೂ ವಾರ್ಡನ್ಗಳ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿನಿಲಯಗಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಅಲ್ಲಿ ವಾರ್ಡನ್ಗಳಿಲ್ಲದಿದ್ದರೆ ಹಿರಿಯ ಶಿಕ್ಷಕರನ್ನು ಪ್ರಭಾರ ನೆಲೆಯಲ್ಲಿ ವಾರ್ಡನ್ಗಳಾಗಿ ನೇಮಿಸಲು ಮುಂದಾಗಬೇಕು ಎಂದು ಸೂಚಿಸಿದರು.
ಹಾಸ್ಟೆಲ್ಗಳ ಮೇಲ್ವಿಚಾರಣೆಗಾಗಿ ಪ್ರತೀ ಹಾಸ್ಟೆಲ್ಗಳಿಗೆ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ಜಗದೀಶ್ಗೆ ಕಲ್ಯಾಣ ಸಮಿತಿಯ ಅಧ್ಯಕ್ಷ ಜೆ.ಆರ್.ಲೋಬೊ ಹೇಳಿದರು.
ಆಹಾರ ಪೂರೈಕೆ ವ್ಯವಸ್ಥೆ:
ಹಿಂದುಳಿದ ವರ್ಗಗಳ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಪೂರೈಕೆ ವ್ಯವಸ್ಥೆಯು ಬೆಂಗಳೂರು ಮಟ್ಟದಲ್ಲಿ ನಡೆಯುತ್ತಿದೆ. ಆದರೆ ಇದು ಸಮರ್ಪಕವಾಗಿಲ್ಲ. ಜಿಲ್ಲಾ ಮಟ್ಟದಲ್ಲಿ ಇದನ್ನು ಯಾರೂ ಕೇಳುವವರಿಲ್ಲದ ಪರಿಸ್ಥಿತಿ ಉಂಟಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಪೂರೈಕೆಯು ಜಿಲ್ಲಾ ಮಟ್ಟದಲ್ಲೇ ಆಗುತ್ತಿದೆ. ಅದರಂತೆ ಹಿಂದುಳಿದ ವರ್ಗಗಳ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿ ನಿಲಯಗಳಿಗೂ ಪೂರೈಕೆಯಾಗಬೇಕು. ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅಧೀನದಲ್ಲಿ ಈ ವ್ಯವಸ್ಥೆ ನಡೆಯಬೇಕು ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧಿಕಾರಿಗೆ ಸದಸ್ಯ ಪಿ.ಎ.ನರೇಂದ್ರ ಸ್ವಾಮಿ ಸೂಚಿಸಿದರು.
ದೌರ್ಜನ್ಯ ಎಸಗಬೇಡಿ:
ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ ಎಂಬ ಆರೋಪವಿದೆ. ಎಸ್ಸಿ-ಎಸ್ಟಿಗಳ ಮೇಲೆ ದೌರ್ಜನ್ಯ ನಡೆದಾಗ ಪೊಲೀಸ್ ಇಲಾಖೆ ಯಾವ ರೀತಿ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುತ್ತಿದೆಯೋ ಅದೇ ರೀತಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆದಾಗಲೂ ಕಾರ್ಯಪ್ರವೃತ್ತರಾಗಿ ಎಂದು ಜೆ.ಆರ್.ಲೋಬೊ ಹೇಳಿದರು.
ಸೂಕ್ಷ್ಮಜಿಲ್ಲೆಯಾಗಿರುವ ದ.ಕ.ದಲ್ಲಿ ಕೋಮುಗಲಭೆ ನಡೆಯುತ್ತಲೇ ಇದೆ. ಈ ಸಂದರ್ಭ ಸಣ್ಣಪುಟ್ಟ ಗಾಯಗೊಂಡವರಿಗೂ ಪರಿಹಾರ ಧನ ನೀಡುವ ಬಗ್ಗೆ ಸಮಿತಿ ಕ್ರಮಕೈಗೊಳ್ಳಬೇಕು ಎಂದು ಪೊಲೀಸ್ ಆಯುಕ್ತ ಚಂದ್ರಶೇಖರ್ ಮತ್ತು ಎಸ್ಪಿ ಭೂಷಣ್ ಗುಲಾಬ್ರಾವ್ ಬೋರೆಸೆ ಅಭಿಪ್ರಾಯಪಟ್ಟರು.
ಮೆಸ್ಕಾಂ ಅಧಿಕಾರಿ ತರಾಟೆಗೆ:
ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ 412 ಕೊಳವೆಬಾವಿಗೆ ಮಂಜೂರಾಗಿದೆ. ಆ ಪೈಕಿ 355 ಬಾವಿಯನ್ನು ಕೊರೆಯಲಾಗಿದೆ. 57 ಬಾಕಿ ಇವೆ. 355 ಬಾವಿಯ ಪೈಕಿ 110ಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದರೆ, 245ಕ್ಕೆ ಇನ್ನೂ ಯಾಕೆ ಕೊಟ್ಟಿಲ್ಲ? ಎಂದು ಜೆ.ಆರ್.ಲೋಬೊ ಪ್ರಶ್ನಿಸಿ ಮೆಸ್ಕಾಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ದಫನ ಭೂಮಿಗೆ ಆದ್ಯತೆ:
ಜಿಲ್ಲೆಯ ಮುಸ್ಲಿಂ, ಕ್ರೈಸ್ತ ದಫನ ಭೂಮಿಗೆ ಜಮೀನು ಕಾದಿರಿಸಲು ಕಂದಾಯ ಇಲಾಖೆ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ ವಹಿಸಬಾರದು ಎಂದು ಕಂದಾಯ ಇಲಾಖಾಧಿಕಾರಿಗೆ ಜೆ.ಆರ್.ಲೋಬೊ ಸೂಚನೆ ನೀಡಿದರು.
45,260 ಅರ್ಜಿ ಬಾಕಿ:
ದ.ಕ.ಜಿಲ್ಲೆಯ 422 ಗ್ರಾಪಂ ಮತ್ತು 10 ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ಒಟ್ಟು 45,260 ಅರ್ಜಿಗಳು ಬಾಕಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಮಿತಿಯು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಖಾಸಗಿ ಜಮೀನು ಖರೀದಿಸಿ ಹಂಚುವ ಬಗ್ಗೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಸೂಚಿಸಿತು.
94 ಸಿ ಮತ್ತು 94ಸಿಸಿಯಲ್ಲೂ ಅರ್ಜಿ ಬಾಕಿ:
ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವವರ ಪೈಕಿ 94 ಸಿಯಡಿ 74,208 ಮತ್ತು 94ಸಿಸಿಯಡಿ 25,885 ಸಹಿತ ಒಟ್ಟು 1,00,093 ಅರ್ಜಿ ಸಲ್ಲಿಕೆಯಾಗಿದೆ. ಆದರೆ, ಅದರಲ್ಲಿ ಕೇವಲ 21,014 ಅರ್ಜಿಗಳು ಮಾತ್ರ ಸಕ್ರಮಗೊಂಡಿದ್ದು, 59,777 ಅರ್ಜಿಗಳು ಇನ್ನೂ ವಿಲೇವಾರಿಯಾಗದೆ ಬಾಕಿಯಾಗಿದೆ. ಈ ಅರ್ಜಿಗಳ ವಿಲೇವಾರಿಗೆ ಕ್ರಮ ಜರಗಿಸಬೇಕು ಎಂದು ಸಮಿತಿ ಸೂಚಿಸಿತು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಎಸ್.ಅಂಗಾರ, ಸೈಯದ್ ಮದೀರ್ ಅಗಾ, ಸುನೀಲ್ ಸುಬ್ರಹ್ಮಣಿ ಎಂ.ಪಿ., ಬಿ.ಜಿ.ಪಾಟೀಲ್, ಯು.ಡಿ. ಬಣಕರ್, ಕೆ.ಎಂ. ತಿಮ್ಮರಾಯಪ್ಪ, ಸತೀಶ್ ಕೃಷ್ಣ ಸೈಲ್, ಎಂ.ಡಿ. ಲಕ್ಷ್ಮಿನಾರಾಯಣ, ಕೆ.ಅಬ್ದುಲ್ ಜಬ್ಭಾರ್, ಶಾರದಾ ನಾಯ್ಕ, ಸಮಿತಿಯ ಜಂಟಿ ಕಾರ್ಯದರ್ಶಿ ಮಲ್ಲಪ್ಪ ಪಿ.ಕಾಳೆ, ಶಾಸಕರಾದ ಬಿ.ಎ.ಮೊಯ್ದಿನ್ ಬಾವಾ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸಿಇಒ ಡಾ.ಎಂ.ಆರ್. ರವಿ, ಅಪರ ಜಿಲ್ಲಾಧಿಕಾರಿ ಕುಮಾರ್, ಡಿಸಿಪಿ ಕೆ.ಎಂ. ಶಾಂತರಾಜು ಉಪಸ್ಥಿತರಿದ್ದರು.







