ವಿಷ ಆಹಾರ ಸೇವಿಸಿ ಮೂರು ಮಕ್ಕಳ ಸಾವು: ತನಿಖೆಗೆ ಸಿಎಂ ಆದೇಶ; ಮುಗಿಲು ಮುಟ್ಟಿದ ಪಾಲಕರ ರೋದನ
ಶಾಲೆಯ ಆಡಳಿತ ಮಂಡಳಿ ವಿರುದ್ದ ಐಪಿಸಿ ಕಲಂ 304ರ ಅಡಿ ಪ್ರಕರಣ ದಾಖಲು

ತುಮಕೂರು,ಮಾ. 09: ವಿಷ ಮಿಶ್ರಿತ ಆಹಾರ ಸೇವಿಸಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಅನುಮಾನಾಸ್ಪದವಾಗಿ ಸಾವಿಗೀಡಾಗಿ, ಇನ್ನೂ ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ದಾರುಣ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ವಸತಿ ಶಾಲೆಯಲ್ಲಿ ನಡೆದಿದೆ.
10ನೇ ತರಗತಿ ವಿದ್ಯಾರ್ಥಿಗಳಾದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶ್ರೀರಾಮಪುರದ ಆಕಾಂಕ್ಷಾ ಪಲ್ಲವಿ(15),ಚಿಕ್ಕನಾಯಕನಹಳ್ಳಿ ತಾಲೂಕಿ ತಿಮ್ಮನಹಳ್ಳಿ ಶಾಂತಮೂರ್ತಿ(15) ಹಾಗೂ ಇದೇ ಗ್ರಾಮದ 8ನೇ ತರಗತಿಯ ಶ್ರೇಯಸ್(14) ಸಾವನ್ನಪ್ಪಿರುವ ವಿದ್ಯಾರ್ಥಿಗಳು. ಇನ್ನೋರ್ವ ವಿದ್ಯಾರ್ಥಿ ಸುದರ್ಶನ್ ಹಾಗೂ ಭದ್ರತಾ ಸಿಬ್ಬಂದಿ ರಮೇಶ್ ಎಂಬವರ ಸ್ಥಿತಿ ಗಂಭೀರವಾಗಿದ್ದು ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಿನ್ನೆ ರಾತ್ರಿ ಚಪಾತಿ ಬೀಟ್ರೂಟ್ ಪಲ್ಯ, ಅನ್ನ ಸಾಂಬಾರ್ ಸೇವಿಸಿದ ವಿದ್ಯಾರ್ಥಿಗಳು ಏಕಾಏಕಿ ಅಸ್ವಸ್ಥಗೊಂಡು ಗಂಭೀರ ಸ್ಥಿತಿಗೆ ತಲುಪಿದ್ದು, ಕೂಡಲೇ ಮಕ್ಕಳನ್ನು ಸ್ಥಳೀಯ ವೈದ್ಯರಲ್ಲಿ ತೋರಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಆಸ್ಪತ್ರೆಗೆ ತೆಗೆದುಕೊಂಡು ಬರಲಾಗಿದೆ.ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಅವರಿಗೆ ಸೇರಿದ ಶಾಲೆ ಇದಾಗಿದ್ದು,ಇವರ ಪತ್ನಿ ಕವಿತಾ ಈ ಶಾಲೆಯ ಕಾರ್ಯದರ್ಶಿಯಾಗಿದ್ದಾರೆ.ಪೋಷಕರು ನೀಡಿದ ದೂರಿನ ಅನ್ವಯ ಶಾಲೆಯ ಆಡಳಿತ ಮಂಡಳಿ ವಿರುದ್ದ ಐಪಿಸಿ ಕಲಂ 304ರ ಅಡಿಯಲ್ಲಿ ಕೇಸು ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.
ರಾತ್ರಿ ಊಟ ಸಮಯದಲ್ಲಿ ಮೊದಲಿಗೆ ಊಟ ಮಾಡಿದ ಮೃತಪಟ್ಟ ಮೂವರು ಬಾಲಕರು, ಸಾಂಬಾರಿನಲ್ಲಿ ಏನೋ ಕೆಟ್ಟ ವಾಸನೆ ಬರುತ್ತಿದ್ದು, ಊಟ ಮಾಡಲಾಗುತ್ತಿಲ್ಲ ಎಂದು ಹೇಳಿಕೊಂಡೇ ಊಟ ಮಾಡಿದ್ದಾರೆ.ವಿದ್ಯಾರ್ಥಿಗಳು ಹೇಳಿದ ಮೇಲೆ ಅದನ್ನು ಖಚಿತ ಪಡಿಸಿಕೊಳ್ಳಲು ಸೆಕ್ಯೂರಿಟಿ ಗಾರ್ಡ ರಮೇಶ್ ಊಟ ಸೇವಿಸಿದ್ದು,ಇನ್ನೂ ಕೆಲವು ವಿದ್ಯಾರ್ಥಿಗಳು ಊಟ ಮಾಡಿದ್ದು, ಕೆಲವು ನಿಮಿಷಗಳಲ್ಲಿ ನಾಲ್ವರು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ.
ತಕ್ಷಣ ಅವರನ್ನು ಹಾಸ್ಟೆಲ್ನವರು ಸಮೀಪದ ಖಾಸಗಿ ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ. ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿದ ವೈದ್ಯರು ಶೀಘ್ರವೇ ತುಮಕೂರಿಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಸತಿ ನಿಲಯದಲ್ಲಿ 40 ಮಂದಿ ವಿದ್ಯಾರ್ಥಿಗಳಿದ್ದಾರೆ. 3ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.ಶ್ರೇಯಸ್,ಆಕಾಂಕ್ಷ್ ಅವರು ತಿಮ್ಮನಹಳ್ಳಿಯವರಾದರೆ, ಶಾಂತಮೂರ್ತಿ ಶ್ರೀರಾಮಪುರದ ಹುಡುಗ.ಹಾಸ್ಟೆಲ್ನಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಇದೀಗ ಅದರ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ ಎಂದು ಕಿರಣ್ ಕುಮಾರ್ ಹೇಳಿದ್ದಾರೆ.
ವಿಷಾಹಾರ ಸೇವಿಸಿ ವಿದ್ಯಾರ್ಥಿಗಳು ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.ಘಟನೆ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದು, ವರದಿ ಬಂದ ನಂತದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್ ತಿಳಿಸಿದ್ದಾರೆ.
ತುಮಕೂರು ಹುಳಿಯಾರಿನಿಂದ ಕರೆತರಲಾಗಿದ್ದ ವಿದ್ಯಾರ್ಥಿಗಳಲ್ಲಿ ಮೂವರು ಆಸ್ಪತ್ರೆ ಸೇರುವಷ್ಟರಲ್ಲಿ ಅಸುನೀಗಿದ್ದರು. ಸುದರ್ಶನ್ ಎಂಬ ವಿದ್ಯಾರ್ಥಿಯು ತೀವ್ರ ಅಸ್ವಸ್ಥಗೊಂಡಿದ್ದು, ಆತನನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಂಗಸ್ವಾಮಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾವು ನೋವು ತಂದಿದೆ. ಆದರೆ ಊಟ ಸೇವಿಸಿದ ನಂತರ ವಿದ್ಯಾರ್ಥಿಗಳು ಅಸ್ವಸ್ಥರಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿವೆ.ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ಹಾಸ್ಟೆಲ್ ಮುಖ್ಯಸ್ಥ ಕಿರಣ್ ಕುಮಾರ್ ತಿಳಿಸಿದ್ದಾರೆ.
ಮುಗಿಲು ಮುಟ್ಟಿದ ಆಕ್ರಂದನ:
ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ಮೃತ ವಿದ್ಯಾರ್ಥಿಗಳ ಪೋಷಕರ ಆಕ್ರಂದನ ಹೇಳ ತೀರದಾಗಿತ್ತು. ವಿದ್ಯಾವಾರಿಧಿ ಶಾಲೆಯ ಆಡಳಿತ ಮಂಡಳಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ತಮ್ಮ ಮಕ್ಕಳ ಸಾವಿಗೆ ಈ ಶಾಲೆಯ ಸಿಬ್ಬಂದಿಯೇ ಕಾರಣ ಎಂದು ಆರೋಪಿಸಿದ್ದಾರೆ.
ತೀವ್ರವಾಗಿ ಅಸ್ವಸ್ಥಗೊಂಡಿರುವ ಮತ್ತಿಬ್ಬರಿಗೆ ಜಿಲ್ಲಾಸ್ಪತ್ರೆಯ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದು, ಈ ಘಟನೆ ನಿಖರ ಕಾರಣವೇನೆಂಬುದನ್ನು ತಿಳಿಯಬೇಕಾದರೆ ಸದರಿ ವಸತಿ ಶಾಲೆಯಲ್ಲಿ ರಾತ್ರಿ ಮಾಡಿರುವ ಅನ್ನ ರಸಂನ್ನು ಪರೀಕ್ಷೆಗೆ ಒಳಪಡಿಸಿ ವರದಿ ಬಂದ ನಂತರ ತಿಳಿಯಬೇಕಿದೆ ಎಂದು ಜಿಲ್ಲಾ ಸರ್ಜನ್ ವೀರಭದ್ರಯ್ಯ ಹಾಗೂ ಡಿಹೆಚ್ಓ ರಂಗಸ್ವಾಮಿ ತಿಳಿಸಿದ್ದಾರೆ.
ಡಿಸಿ ಭೇಟಿ:
ಮೂವರು ವಿದ್ಯಾರ್ಥಿಗಳು ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಕೆ.ಪಿ. ಮೋಹನ್ರಾಜ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮೃತ ವಿದ್ಯಾರ್ಥಿಗಳ ಪೋಷಕರಿಗೆ ಸಾಂತ್ವನ ಹೇಳಿ, ಈ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾರಣವೇನೆಂಬುದನ್ನು ಪತ್ತೆಹಚ್ಚಲಾಗುವುದು ಎಂದು ಭರವಸೆ ನೀಡಿದರು.ಜಿಲ್ಲಾಸ್ಪತ್ರೆ ಆವರಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಅಡಿಷನಲ್ ಎಸ್ಪಿ ಜಿ.ಬಿ. ಮಂಜುನಾಥ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಈ ಸಂಬಂಧ ಹುಳಿಯಾರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ತನಿಖೆಗೆ ಸಿಎಂ ಆದೇಶ:
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ವಸತಿ ಶಾಲೆಯಲ್ಲಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಗಳು ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದಾರೆ. ಘಟನೆ ತೀವ್ರ ಆಘಾತ ಉಂಟು ಮಾಡಿದ್ದು, ತಪ್ಪಿತಸ್ಥರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ನೀಡಿರುವ ಆದೇಶದಲ್ಲಿ ತಿಳಿಸಿದ್ದಾರೆ. ಘಟನೆ ಕುರಿತು ವರದಿ ನೀಡುವಂತೆಯೂ ಸೂಚಿಸಿದ್ದಾರೆ.
ಹಾಸ್ಟಲ್ ನಡೆಸಲು ಅನುಮತಿಯಿರಲಿಲ್ಲ:
ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಗೆ ಕೇವಲ ಸಿಬಿಎಸ್ಸಿ ಪಠ್ಯಕ್ಕನುಗುಣವಾಗಿ ಶಾಲೆ ನಡೆಸಿಕೊಂಡು ಹೋಗಲು ಮಾತ್ರ ಅನುಮತಿಯಿತ್ತೆ ಹೊರತು ವಸತಿ ಶಾಲೆ ನಡೆಸಲು ಅನುಮತಿಯಿರಲಿಲ್ಲ ಎನ್ನುವು ತನಿಖಾ ಸಮಯದಲ್ಲಿ ತಿಳಿದುಬಂದಿದೆ.
1 ರಿಂದ 11 ನೇ ತರಗತಿವರೆಗೂ 848 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕಳೆದ ಮೂರು ವರ್ಷಗಳಿಂದ ಹಾಸ್ಟಲ್ ಸೌಲಭ್ಯ ಪ್ರಾರಭಿಸಲಾಗಿತ್ತು.
ಸದ್ಯ ಶಾಲಾ ಕಟ್ಟಡದಲ್ಲಿ ನಡೆಯುತ್ತಿದ್ದ ಹಾಸ್ಟಲ್ ನಲ್ಲಿ 29 ಮಕ್ಕಳು ದಾಖಲಾಗಿದ್ದರು.ನಿನ್ನೆಯ ಘಟನೆ ಬಗ್ಗೆ ಭಯಭೀತರಾದ ಮಕ್ಕಳ ಪೋಷಕರು ಬೆಳಗ್ಗೆಯೇ ಹಾಸ್ಟಲ್ ಗೆ ಧಾವಿಸಿ ತಂತಮ್ಮ ಮಕ್ಕಳನ್ನಿ ಕರೆದೊಯ್ದಿದ್ದು ಹಾಸ್ಟಲ್ ಇದೀಗ ಸೂತಕದ ಮನೆಯಂತಾಗಿದ್ದು ಬಿಕೋ ಎನ್ನುತ್ತಿದೆ.
ಘಟನೆ ಬಗ್ಗೆ ತನಿಖೆ ಆರಂಭಿಸಿದ ಪೋಲಿಸರಿಗೆ ಹಾಸ್ಟಲ್ ನಡೆಸಲು ಅನುಮತಿಯೇ ಇರಲಿಲ್ಲ ಎನ್ನುವ ಮಾಹಿತಿ ತಿಳಿದುಬಂದಿದ್ದು ಈ ಬಗ್ಗೆ ಕೇಸು ದಾಖಲಿಸುವುದಾಗಿ ತಿಳಿಸಿದ್ದಾರೆ.







