ವಿಜಯನಾಥ್ ಶಣೈ ನಿಧನಕ್ಕೆ ಮುಖ್ಯಮಂತ್ರಿ ಶೋಕ

ಬೆಂಗಳೂರು, ಮಾ.9: ಮಣಿಪಾಲದ ಪಾರಂಪರಿಕ ಗ್ರಾಮದ ರೂವಾರಿ ವಿಜಯನಾಥ್ ಶೆಣೈ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಪ್ರಕೃತಿ ಸೌಂದರ್ಯದ ಸೊಬಗು ಮತ್ತು ಸೊಗಸನ್ನು ಒಂದೆಡೆ ಪ್ರದರ್ಶಿಸ ಬೇಕು ಎಂದು ಪ್ರಯತ್ನಿಸಿ ಯಶಸ್ಸು ಕಂಡ ವಿಜಯನಾಥ್ ಶೆಣೈ ದಕ್ಷಿಣ ಕನ್ನಡದ ಸುಂದರ, ಸಾಂಪ್ರದಾಯಿಕ ಹಾಗೂ ಪಾರಂಪರಿಕ ಮನೆಗಳಲ್ಲಿನ ಸಿರಿವಂತ ವಾಸ್ತುಶಿಲ್ಪಗಳನ್ನು ಒಂದೆಡೆ ತಂದು ಒಂದು ಪಾರಂಪರಿಕ ಗ್ರಾಮವನ್ನೇ ಸೃಷ್ಟಿಸಿದ್ದು ಅವರ ಸಾಧನೆ ಮಾತ್ರವಲ್ಲ, ಸಾಹಸವೂ ಆಗಿದೆ ಎಂದು ಸಿದ್ದರಾಮಯ್ಯ ಬಣ್ಣಿಸಿದ್ದಾರೆ.
ವಿಜಯನಾಥ್ ಶೆಣೈ ಅವರ ಆತ್ಮಕ್ಕೆ ಶಾಂತಿ ಲಭಿಸಲಿ. ವಿಜಯನಾಥ್ ಶೆಣೈ ಅವರ ಅಗಲಿಕೆಯಿಂದ ಉಂಟಾದ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ಬಳಗಕ್ಕೆ ಕರುಣಿಸಲಿ ಎಂದು ಮುಖ್ಯಮಂತ್ರಿ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.
ಪ್ರಮೋದ್ ಸಂತಾಪ: ಮಣಿಪಾಲದ ಸಂಸ್ಕೃತಿ ಗ್ರಾಮದ ನಿರ್ಮಾತೃ ವಿಜಯನಾಥ ಶೆಣೈ ಅವರ ನಿಧನಕ್ಕೆ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಂತಾಪ: ಉಡುಪಿಯನ್ನು ಸಾಂಸ್ಕೃತಿಕವಾಗಿ ಸಮೃದ್ಧಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ, ಮಣಿಪಾಲ ಹೆರಿಟೇಜ್ ವಿಲೇಜ್ ಮೂಲಕ ವಿಶ್ವಮಾನ್ಯರಾದ ಹಿರಿಯ ಸಾಧಕ ವಿಜಯನಾಥ್ ಶೆಣೈಯವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.







