ಪ್ರತಿಪಕ್ಷ ಸಂಘಪರಿವಾರದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ: ಪಿಣರಾಯಿ

ತಿರುವನಂತಪುರಂ,ಮಾ.10: ಆರೆಸ್ಸೆಸ್,ಶಿವಸೇನೆ ಕುರಿತು ತಾನು ಏನು ಹೇಳಿದರೂ ಪ್ರತಿಪಕ್ಷಕ್ಕೆ ಅಸಹನೆಯಾಗುತ್ತದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪ್ರತಿಪಕ್ಷ ಸಂಘಪರಿವಾರದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಅವರು ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ. ಆದರೆ ಸಂಘಪರಿವಾರ ವಿರುದ್ಧ ಹೋರಾಟದಲ್ಲಿ ಮುಖ್ಯಮಂತ್ರಿಯ ಸರ್ಟಿಫಿಕೇಟಿನ ಅಗತ್ಯವಿಲ್ಲ ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಸೇನೆಯನ್ನು ಪ್ರತಿಪಕ್ಷ ಬಾಡಿಗೆಗೆ ಪಡೆದಿದೆ ಎನ್ನುವ ಮುಖ್ಯಮಂತ್ರಿಯ ಹೇಳಿಕೆ ನಿರಂತರ ಎರಡನೆ ದಿನವೂ ಸದನ ಪ್ರಕ್ಷುಬ್ಧಗೊಳ್ಳಲು ಕಾರಣವಾಯಿತು. ಇದರ ಬೆನ್ನಿಗೆ ಪ್ರತಿ ಪಕ್ಷದ ವಿರುದ್ಧ ಮುಖ್ಯಮಂತ್ರಿ ಮತ್ತೊಂದು ಅರೋಪವನ್ನು ಮಾಡಿದರು.
ಮುಖ್ಯಮಂತ್ರಿಯು ಶಿವಸೇನೆಯ ಹೇಳಿಕೆಯನ್ನು ಅವರು ಹಿಂಪಡೆಯಬೇಕು ಅಲ್ಲದಿದ್ದರೆ ಅದನ್ನು ಸ್ಪೀಕರ್ ಕಡತದಿಂದ ತೆಗೆದು ಹಾಕಬೇಕೆಂದು ಪ್ರತಿಪಕ್ಷ ಆಗ್ರಹಿಸಿದೆ. ಆದರೆ ಸ್ಪೀಕರ್ ಇದನ್ನು ಪುರಸ್ಕರಿಸಲಿಲ್ಲ.
ಸದನ ಬಹಿಷ್ಕರಿಸಿ ಪ್ರತಿಪಕ್ಷ ಪ್ರತಿಭಟಿಸಿದೆ. ಆದರೆ ನಿನ್ನೆ ಸದನದಲ್ಲಿ ನಡೆದದ್ದು ದುರದೃಷ್ಟಕರ ಎಂದು ಸ್ಪೀಕರ್ ರಾಮಕೃಷ್ಣನ್ ಹೇಳಿದರು. ಘಟನೆಯಲ್ಲಿ ಸದನ ಸದಸ್ಯರು ಪಶ್ಚಾತ್ತಾಪ ಪಡುವರೆಂದು ತಾನು ಭಾವಿಸುವೆ ಎಂದು ಸ್ಪೀಕರ್ ಸದನಕ್ಕೆ ತಿಳಿಸಿದರೆಂದು ವರದಿ ತಿಳಿಸಿದೆ.