ಭವಿಷ್ಯದ ಪ್ರಗತಿಗೆ ಇತಿಹಾಸದ ಜ್ಞಾನ ಅಗತ್ಯ: ಸಚಿವ ಪ್ರಮೋದ್

ಉಡುಪಿ, ಮಾ.10: ಪ್ರಸ್ತುತ ಭಾರತ ದೇಶವು ಅಭಿವೃದ್ದಿಯ ದೃಷ್ಠಿಯಿಂದ ಇಡೀ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದ್ದು, ದೇಶವು ಒಂದನೆ ಸ್ಥಾನಕ್ಕೆ ಏರಬೇಕಾದರೆ ಅಭಿವೃದ್ದಿ ಕಾರ್ಯಗಳಲ್ಲಿ ದಲಿತರು ಸೇರಿದಂತೆ ಎಲ್ಲಾ ವರ್ಗ ದವರ ಜೊತೆಯಲ್ಲಿ ಸಾಗಬೇಕಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವ ಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಆಶ್ರಯದಲ್ಲಿ ಶುಕ್ರವಾರ ಉಡುಪಿ ಪೂರ್ಣಪ್ರಜ್ಞ ಆಡಿಟೋರಿಯಂ ಬಳಿಯ ವಿಭುದೇಶ ತೀರ್ಥ ಸಭಾಂಗಣದಲ್ಲಿ ನಡೆದ ದಲಿತ ವಚನಕಾರರ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.25ರಷ್ಟು ದಲಿತರಿದ್ದಾರೆ. ದೇಶದ ಶೇ.25ರಷ್ಟು ಬಡವರಲ್ಲಿ ಶೇ.50ಕ್ಕೂ ಅಧಿಕ ದಲಿತರಿದ್ದಾರೆ. ದಲಿತರ ನೈಜ ಪರಿಸ್ಥಿತಿ ಅರಿಯಬೇಕಾದರೆ ದಲಿತ ಕಾಲೋನಿಗೆ ಭೇಟಿ ನೀಡಬೇಕಾಗಿದೆ. ಮೀಸಲಾತಿ ನೀಡಿ 70ವರ್ಷದ ನಂತರವೂ ಅವರ ಸ್ಥಿತಿ ಕೆಟ್ಟದಾಗಿದೆ ಎಂದು ಅವರು ತಿಳಿಸಿದರು.
ಹಿಂದಿನ ಇತಿಹಾಸವನ್ನು ಅರಿಯದೇ ಭವಿಷ್ಯದ ಅಭಿವೃದ್ಧಿ ಸಾಧ್ಯವಿಲ್ಲ. 12ನೆ ಶತಮಾನದಲ್ಲಿ ದಲಿತರು ಹಾಗೂ ಶೂದ್ರರ ಮೇಲಿನ ಶೋಷಣೆಯನ್ನು 21ನೆ ಶತಮಾನದಲ್ಲಿರುವ ನಾವು ಮರೆಯಬಾರದು. ದಲಿತ ವಚನಕಾರರು ನೀಡಿದ ಸಂದೇಶಗಳು ಸಮಾಜಕ್ಕೆ ಮಾದರಿಯಾಗಿವೆ. ವಚನಕಾರರ ನೇರ, ನಿಷ್ಠುರ ವಚನಗಳು ಸಮಾಜದ ಪರಿವರ್ತನೆಗೆ ಕಾರಣವಾಗಿವೆ ಎಂದರು.
ದಲಿತ ವಚನಕಾರರ ಕುರಿತು ವಿಶೇಷ ಉಪನ್ಯಾಸ ನೀಡಿದ ಪೂರ್ಣಪ್ರಜ್ಞ ಕಾಲೇಜಿನ ಉಪನ್ಯಾಸಕ ಡಾ.ಶ್ರೀಕಾಂತ ಸಿದ್ದಾಪುರ, ದಲಿತ ವಚನಕಾರರು ಇತರೆ ವರ್ಗದವರು ತಮಗೆ ವಿಧಿಸಿದ್ದ ಧಾರ್ಮಿಕ ಮತ್ತು ಸಾಮಾಜಿಕ ಕಟ್ಟು ಪಾಡುಗಳಿಂದ ಹೊರಬರಲು, ತಮ್ಮಲ್ಲಿನ ನಿಷ್ಠೆ, ಸ್ವಾಭಿಮಾನ, ಕಾಯಕ ನಿಷ್ಠೆಯ ಮೂಲಕ ಮೇಲ್ವರ್ಗದ ಆರಾಧ್ಯ ದೈವ ಶಿವನನ್ನೇ ಒಲಿಸಿಕೊಂಡರು. ಆ ಮೂಲಕ ಸಮಾಜದ ಕಣ್ಣು ತೆರೆಸಿದರು. ದಲಿತರಲ್ಲಿ ಆತ್ಮವಿಶ್ವಾಸ ಮೂಡಿಸಿ, ಸಮಾನತೆಯ ಸಂದೇಶ ಸಾರಿದರು ಎಂದು ತಿಳಿಸಿದರು.
ಈ ಪ್ರಯುಕ್ತ ಏರ್ಪಡಿಸಲಾಗಿದ್ದ ವಚನಗಾಯನ ಸ್ಪರ್ಧೆಯಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಿಸಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದ ಱನಮ್ಮ ಹೆಮ್ಮೆಯ ವಚನಕಾರರುೞ ಕುರಿತ ಕರಪತ್ರಗಳ ವಿತರಣೆ ನಡೆಯಿತು.
ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಗದೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಆಹಾರ ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಯೋಗೇಶ್ವರ್ ಉಪಸ್ಥಿತರಿದ್ದರು.
ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ ವಂದಿಸಿದರು. ಉಪನ್ಯಾಸಕ ಅಶ್ವಥ್ ಭಾರದ್ವಾಜ್ ಕಾರ್ಯಕ್ರಮ ನಿರೂಪಿಸಿದರು. ಯಶ ವಂತ ಎಂ.ಜಿ. ಇವರಿಂದ ವಚನಗಾಯನ ಕಾರ್ಯಕ್ರಮ ನಡೆಯಿತು.







