ವಚನ ಕಾಲದಲ್ಲೂ ಸ್ತ್ರೀಯರ ಮೇಲೆ ದಬ್ಬಾಳಿಕೆ: ಡಾ. ಸರಸ್ವತಿ
ದಲಿತ ವಚನಕಾರರ ಜಯಂತಿ ಆಚರಣೆ

ಮಂಗಳೂರು, ಮಾ.10: ವಚನ ಕಾಲದಲ್ಲಿ ದಲಿತರು ಮಾತ್ರವಲ್ಲ, ಸ್ತ್ರೀಯರು ಕೂಡ ತುಳಿತಕ್ಕೊಳಗಾಗಿದ್ದರು ಎಂದು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸರಸ್ವತಿ ಹೇಳಿದರು.
ದ.ಕ. ಜಿಲ್ಲಾಡಳಿತ, ಜಿಪಂ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ದಬ್ಬಾಳಿಯ ನಡೆಯೂ ಎದ್ದು ನಿಲ್ಲುವ ಸಾಮರ್ಥ್ಯವನ್ನು ದಲಿತರು ಹೊಂದಿದ್ದು ಭಾಷೆ, ಪ್ರಾದೇಶಿಕ ಎಲ್ಲೆಯನ್ನೂ ಅವರು ಮೀರಿ ಬದುಕಬಲ್ಲರು. ವಚನ ಸಾಹಿತ್ಯ ಕಾಲದಲ್ಲಿ ದಲಿತರಿಗೆ ಆರ್ಥಿಕ ಸಬಲತೆ ಇರಲಿಲ್ಲ. ಶಿಕ್ಷಣ ಸಂಸ್ಕೃತ ಭಾಷೆಯಲ್ಲಿತ್ತು. ಇದು ಕೇವಲ ಮೇಲ್ವರ್ಗದವರ ಸೊತ್ತಾಗಿತ್ತು. ಅಂದಿನ ಕಾಲದಲ್ಲಿ ದಲಿತರಿಗೆ ದೇವಾಲಯ ಸಮಸ್ಯೆ ಸಾಕಷ್ಟು ಕಾಡಿತ್ತು. ಹಾಗಾಗಿ ವಚನಕಾರರು ದೇವಾಲಯಗಳನ್ನು ಬಹಿಷ್ಕರಿಸಲು ಮುಂದಾದರು ಎಂದು ಡಾ. ಸರಸ್ವತಿ ನುಡಿದರು.
12ನೆ ಶತಮಾನದಲ್ಲಿ ನಡೆದ ದಲಿತ ಚಳವಳಿಯು ಮಠ, ಮಂದಿರ, ಪ್ರಭುತ್ವ, ಶ್ರೀಮಂತರ ವಿರುದ್ಧ ಹೋರಾಡುವುದು ಅನಿವಾರ್ಯವಾಗಿತ್ತು. ಇದಕ್ಕೆ ಬಸವಣ್ಣನವರು ವೇದಿಕೆ ಕಲ್ಪಿಸಿದ್ದರು. ವಚನಕಾರರು ಕಾಯಕಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದು ಡಾ. ಸರಸ್ವತಿ ನುಡಿದರು.
ಶಾಸಕರ ಮೊಯ್ದಿನ್ ಬಾವ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನಿಫ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಮುಂತಾದವರು ಉಪಸ್ಥಿತರಿದ್ದರು.







