ಮಾಜಿ ಪ್ರಧಾನಿ, ಮುಖ್ಯಮಂತ್ರಿಗಳ ಬಂಧುಗಳ ಪೈಕಿ ಐವರನ್ನು ಮಾತ್ರ ಗೆಲ್ಲಿಸಿದ ಉ.ಪ್ರದೇಶ

ಲಕ್ನೋ,ಮಾ.13: ಇತ್ತೀಚಿಗಷ್ಟೇ ಮುಗಿದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಮಾಜಿ ಮುಖ್ಯಮಂತ್ರಿಗಳು ಮತ್ತು ಓರ್ವ ಮಾಜಿ ಪ್ರಧಾನಿಯ ಕರುಳುಬಳ್ಳಿಗಳ ಪಾಲಿಗೆ ನಿಜವಾಗಿಯೂ ಸತ್ವಪರೀಕ್ಷೆಯಾಗಿತ್ತು. ಮತದಾರರು ಕಣದಲ್ಲಿದ್ದ ಇಂತಹ ಎಂಟು ಅಭ್ಯರ್ಥಿಗಳ ಪೈಕಿ ಐವರಿಗೆ ಮಾತ್ರ ವಿಧಾನಸಭೆಯ ದಾರಿ ತೋರಿಸಿದ್ದಾರೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎಚ್.ಎನ್.ಬಹುಗುಣ ಅವರ ಪುತ್ರಿ ರೀಟಾ ಬಹುಗುಣ ಜೋಶಿ (ಬಿಜೆಪಿ) ಅವರು ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ (ಎಸ್ಪಿ)ರನ್ನು ಸೋಲಿಸಿದ್ದಾರೆ.
ಅತ್ರಾವಲಿ ಕ್ಷೇತ್ರದಲ್ಲಿ ಮಾಜಿ ಉ.ಪ್ರ.ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಅವರ ಮೊಮ್ಮಗ ಸಂದೀಪ ಕುಮಾರ ಸಿಂಗ್ (ಬಿಜೆಪಿ), ನೊಯ್ಡಾದಲ್ಲಿ ಕೇಂದ್ರ ಸಚಿವ ಹಾಗೂ ಉ.ಪ್ರ.ಮಾಜಿ ಮುಖ್ಯಮಂತ್ರಿ ರಾಜನಾಥ ಸಿಂಗ್ ಅವರ ಪುತ್ರ ಪಂಕಜ್ ಸಿಂಗ್ (ಬಿಜೆಪಿ), ಅಲಹಾಬಾದ್(ಪಶ್ಚಿಮ) ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಲಾಲ್ ಬಹದೂರ ಶಾಸ್ತ್ರಿ ಅವರ ಮೊಮ್ಮಗ ಸಿದ್ಧಾರ್ಥನಾಥ್ ಸಿಂಗ್(ಬಿಜೆಪಿ) ಮತ್ತು ಜಸವಂತನಗರ ಕ್ಷೇತ್ರದಲ್ಲಿ ಮುಲಾಯಂ ಸಿಂಗ ಯಾದವ ಅವರ ಸೋದರ ಶಿವಪಾಲ ಯಾದವ(ಎಸ್ಪಿ) ಅವರು ಗೆಲುವು ಸಾಧಿಸಿದ್ದಾರೆ.
ಲಕ್ನೋ ಹೊರವಲಯದ ಸರೋಜಿನಿ ನಗರ ಕ್ಷೇತ್ರದಲ್ಲಿ ಮುಲಾಯಂ ಸಿಂಗ್ ಅವರ ಸೋದರ ಪುತ್ರ ಅನುರಾಗ್ ಯಾದವ(ಎಸ್ಪಿ), ಮರಿಹನ ಕ್ಷೇತ್ರದಲ್ಲಿ ಮಾಜಿ ಉ.ಪ್ರ.ಮುಖ್ಯಮಂತ್ರಿ ಕಮಲಾಪತಿ ತ್ರಿಪಾಠಿಯವರ ಮರಿಮೊಮ್ಮಗ ಲಲಿತೇಶಪತಿ ತ್ರಿಪಾಠಿ (ಕಾಂಗ್ರೆಸ್) ಅವರಿಗೆ ಮತದಾರರು ಸೋಲಿನ ರುಚಿಯನ್ನು ತೋರಿಸಿದ್ದಾರೆ.







