ಹರಹರ ಅನ್ನದಾತ, ಘರ್ ಘರ್ ಅನ್ನದಾತ ಎಂದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ: ಚಂಗಪ್ಪ
ರೈತರ ಜಾಥಾ ಮತ್ತು ಹಕ್ಕೊತ್ತಾಯ ಚಳವಳಿ

ಪುತ್ತೂರು, ಮಾ.13: ಅನ್ಯಾಯ ಅಕ್ರಮಗಳು ನಡೆದಾಗ ಸಿಟ್ಟು ಬರುವುದು ಮಾನವ ಸಹಜಗುಣ. ಸಿಟ್ಟು ಬಾರದಿದ್ದಲ್ಲಿ ಬದಲಾವಣೆ ಆಗಲು ಸಾಧ್ಯವಿಲ್ಲ. ಬದಲಾವಣೆಯ ನಿಟ್ಟಿನಲ್ಲಿ ಸಿಟ್ಟು ಅನಿವಾರ್ಯವಾಗಿದೆ ಎಂದು ರಾಜ್ಯ ರೈತಸಂಘ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಅವರು ಸೋಮವಾರ ರಾಜ್ಯ ರೈತ ಸಂಘ ಹಸಿರು ಸೇನೆಯ ದ.ಕ.ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪುತ್ತೂರಿನ ಮಿನಿವಿಧಾನ ಸೌಧದ ಮುಂಭಾಗದಲ್ಲಿ ನಡೆದ ರೈತರ ಜಾಥಾ ಮತ್ತು ಹಕ್ಕೊತ್ತಾಯ ಚಳವಳಿಯ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ದೇಶದಲ್ಲಿ ಪ್ರತಿ 45 ನಿಮಿಷಕ್ಕೆ ಓರ್ವ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಪಕ್ಷಕ್ಕೆ ಉತ್ತರ ಪ್ರದೇಶದಲ್ಲಿ ಅಧಿಕಾರ ಬಂದಿದೆ ಎಂದು ದೆಹಲಿಯಲ್ಲಿ ವಿಜಯೋತ್ಸವ ಆಚರಿಸುತ್ತಿರುವ ಕೇಂದ್ರ ಸರಕಾರದವರಿಗೆ ರೈತರ ಆತ್ಮಹತ್ಯೆಗಳು ಕಣ್ಣಿಗೆ ಕಾಣುತ್ತಿಲ್ಲ. ಜನಸೇವೆಗಾಗಿ ನಮಗೆ ಅವಕಾಶ ಸಿಕ್ಕಿದೆ ಎನ್ನುತ್ತಿರುವ ಇವರಿಗೆ ಸೇವೆಯ ಅರ್ಥವೇ ಗೊತ್ತಿಲ್ಲ. ನಮ್ಮ ಎಂಎಲ್ಎ, ಎಂಪಿ, ಮುಖ್ಯಮಂತ್ರಿ , ಪ್ರಧಾನ ಮಂತ್ರಿಗಳು ಹಾಗೂ ಅಧಿಕಾರಿಗಳು ಮಾಡುತ್ತಿರುವುದು ಸೇವೆಯಲ್ಲ. ತೆರಿಗೆ ಹಣದಲ್ಲಿ ಸೇವಾ ಶುಲ್ಕ ಪಡೆಯುವವರು ಯಾರೂ ಸೇವಕರಲ್ಲ ಎಂದರು.
ರಾಜ್ಯವನ್ನು ಬರಗಾಲ ಪ್ರದೇಶ ಎಂದು ಘೋಷಿಸಿ:
ಅಳತೆ ಮಾಪನಗಳಿಲ್ಲದೆ ಅಂದಾಜು ಲೆಕ್ಕಾಚಾರದಲ್ಲಿ ಅಧಿಕಾರಿಗಳು ತಯಾರಿಸಿದ ವರದಿಯಂತೆ ರಾಜ್ಯದ ಮುಖ್ಯಮಂತ್ರಿಗಳು ಬರಪೀಡಿತ ಪ್ರದೇಶವನ್ನು ಘೋಷಿಸಿರುವುದು ಮೂರ್ಖತನ ಎಂದ ಅವರು, ಅಧಿಕಾರಿಗಳು ಬರೆದ ವರದಿಯನ್ನು ಮುಖ್ಯಮಂತ್ರಿಗಳು ಸಹಿ ಮಾಡಿ ಪ್ರದಾನಿಯವರಿಗೆ ರವಾನಿಸಿದ್ದಾರೆ. ಈ ವ್ಯವಸ್ಥೆಯೇ ಮೂರ್ಖತನದಿಂದ ಕೂಡಿದೆ. ಈಗಾಗಲೇ ರಾಜ್ಯದ ಎಲ್ಲಾ ಪ್ರದೇಶವೂ ಬರಪೀಡಿತವಾಗಿದ್ದು, ಇಡೀ ರಾಜ್ಯವನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಸಾಲ ಮನ್ನಾ ಮಾಡುವುದು ರೈತರ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ಇದೊಂದು ತುರ್ತು ಸಮಸ್ಯೆ ಪರಿಹಾರ ಎಂದ ಅವರು ಗ್ರಾಮೀಣ ಪ್ರದೇಶದಲ್ಲಿ ಶೇ.45ಕ್ಕಿಂತಲೂ ಅಧಿಕ ಮಂದಿ ರೈತರಿದ್ದು ಈ ತನಕ ರೈತರಿಗೆ ನ್ಯಾಯ ಸಿಕ್ಕಿಲ್ಲ. ಯಾವುದೇ ಸರ್ಕಾರ ರೈತರನ್ನು ನಾಗರಿಕರು ಎಂದು ಪರಿಗಣಿಸಿಲ್ಲ. ರೈತರು ಭದ್ರತೆಯಿಲ್ಲದೆ ಜೀವನ ನಡೆಸುತ್ತಿರುವ ನತದೃಷ್ಟರು. ವಿಧಾನಸಭೆ ಮತ್ತು ಲೋಕಸಭೆಗೆ ಅಯೋಗ್ಯರನ್ನು ಆರಿಸಿ ಕಳಿಸುವ ಕಾರಣ ರೈತರ ಭವಣೆಗಳಿಗೆ ಬೆಲೆಯಿಲ್ಲದಂತಾಗಿದೆ. ಈ ಬಗ್ಗೆ ಇನ್ನಾದರೂ ರೈತರು ಗಂಭೀರ ಚಿಂತನೆ ನಡೆಸಬೇಕು. ರೈತಪರ ಇರುವವರನ್ನು ಆರಿಸುವ ಯೋಚನೆ ಮಾಡಬೇಕು ಎಂದರು.
ರೈತ ಸಂಘದ ಕಾನೂನು ಸಲಹೆಗಾಗ ಯಸ್.ಪಿ. ಚಂಗಪ್ಪ ಮಾತನಾಡಿ, ರೈತರ ಶವಯಾತ್ರೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಹರಹರ ಮೋದಿ, ಘರ್ ಘರ್ ಮೋದಿ ಎನ್ನುತ್ತಾ ಬಿಜೆಪಿ ವಿಜಯೋತ್ಸವ ಆಚರಣೆಯಲ್ಲಿ ನಿರತವಾಗಿದೆ. ಈ ಘೋಷಣೆ ಹರಹರ ಅನ್ನದಾತ, ಘರ್ ಘರ್ ಅನ್ನದಾತ ಎಂದು ಬದಲಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ರಾಜ್ಯ ಬರಪೀಡಿತವಾಗಿ ತತ್ತರಿಸುತ್ತಿರುವಾಗ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಬರಪರಿಹಾರ ಬಿಡುಗಡೆ ಹಣದ ವಿಚಾರದಲ್ಲಿ ಪರಸ್ಪರ ಕೆಸರೆರಚಾಟ ನಡೆಸುತ್ತಿದೆ ಎಂದು ಆರೋಪಿಸಿದರು.
ಸಭೆಯಲ್ಲಿ ಮೂಡಬಿದ್ರೆ ವಲಯ ಅಧ್ಯಕ್ಷ ಧನಕೀರ್ತಿ ಬಲಿಪ, ರಾಜ್ಯ ಕಾರ್ಯದರ್ಶಿ ಸಿ. ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ, ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ರೈತ ಮುಖಂಡರಾದ ಸೈಯದ್ ಮೀರಾ ಸಾಹೇಬ್ ಕಡಬ ಮತ್ತಿತರರು ಮಾತನಾಡಿ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿದರು.
ರೈತಮುಖಂಡರಾದ ಈಶ್ವರ ಭಟ್ ಬಡಿಲ, ಧರ್ಣಪ್ಪ ಗೌಡ ಇಡ್ಯಾಡಿ, ಮುರುವ ಮಹಾಬಲ ಭಟ್, ಈಶ್ವರ ಗೌಡ ಆಲಂಕಾರು ಮತ್ತಿತರರು ಉಪಸ್ಥಿತರಿದ್ದರು. ಸುದರ್ಶನ್ ಕಂಪ ಕಾರ್ಯಕ್ರಮ ನಿರೂಪಿಸಿದರು.







